Poem-02 ದುರ್ಯೋಧನ ವಿಲಾಪ- ಪದ್ಯದ ಸಾರಾಂಶ
–ರನ್ನ
Poem-02 1. ನೆತ್ತರಿನ ಸಮುದ್ರದಲ್ಲಿ ಮುರಿದು ಬಿದ್ದಿದ್ದ ವಿವಿಧ ಆಯುಧಗಳು, ಹೆಜ್ಜೆ ಹೆಜ್ಜೆಗೆ ತನ್ನ ಪಾದಗಳನ್ನು ಇರಿಯುತ್ತಿರಲು, ಕಾಲೂರುವುದಕ್ಕೆ ಸಾಧ್ಯವಾಗದೆ ದುರ್ಯೋಧನನು ಸತ್ತು ಬಿದ್ದ ದೊಡ್ಡ ದೊಡ್ಡ ಹೆಣಗಳನ್ನು ಮೆಟ್ಟುತ್ತಾ ಸಾಗುತ್ತಿದ್ದನು.
2. ದುರ್ಯೋಧನನು ಸಂಜಯನ ಹೆಗಲನ್ನು ಆಧರಿಸಿಕೊಂಡು ಆನೆಗಳೆಂಬ ಬೆಟ್ಟಗಳನ್ನು ಹತ್ತುತ್ತಾ ರಕ್ತದ ಹೊಳೆಗಳನ್ನು ದಾಟುತ್ತಾ, ಸೊಂಡಿಲುಗಳ ಕಪ್ಪಾದ ಬಳ್ಳಿಗಾಡುಗಳಲ್ಲಿ ಸಿಕ್ಕಿಕೊಳ್ಳುತ್ತಾ ಇದಾವುದನ್ನೂ ಲೆಕ್ಕಿಸದೆ. ಅತಿ ರಭಸದಿಂದ ನಡೆದು ಬಂದು ಬಾಣ ಸಮೂಹದಿಂದ ನುಚ್ಚುನೂರಾದ ದೇಹ ಮತ್ತು ಕವಚವುಳ್ಳ ದ್ರೋಣನನ್ನು ನೋಡಿದನು.
3. ಗುರುವರ್ಯ! ಧನುರ್ವಿದ್ಯಾ ಕೌಶಲದಲ್ಲಿ ನಿಮ್ಮನ್ನು ಪ್ರತಿಭಟಿಸಿ ಹೋರಾಡಿ ಗೆಲ್ಲಲು ಸಾಕ್ಷಾತ್ ಶಿವನಿಗೂ ಅಸಾಧ್ಯವೆಂದ ಮೇಲೆ ಅರ್ಜುನನ ಮಾತೆಲ್ಲಿ? ಅವನು ನಿಮಗೆ ಎಷ್ಟರವನು? ಈ ವಿಚಾರ ನನಗೆ ತಿಳಿಯದೇ? ಹೀಗಿದ್ದರೂ ನೀವು ಶಸ್ತ್ರತ್ಯಾಗ ಮಾಡಿದ್ದು ಕೇವಲ ತಿರಸ್ಕಾರದಿಂದಲೋ ಅಥವಾ ನನ್ನ ಕರ್ಮಫಲವು ನಿಮ್ಮನ್ನು ಹಾಗೆ ಮಾಡಿಸಿತೋ ನಾನರಿಯೆ. ಆದೇನೆ ಇರಲಿ, ನಿಮ್ಮಂಥವರಿಗೂ ನಿಷ್ಕಾರಣವಾಗಿ ಇಂತಹ ದುರ್ಮರಣವು ಯಾಕಾಗಿ ಉಂಟಾಯಿತೋ?
4. ಅರೆಮುಚ್ಚಿದ ಕಣ್ಣುಗಳೂ, ಆರಳಿದ ಮುಖ, ಕತ್ತರಿಸಿದ ಕೈಗಳು, ನೋಡುವವರಿಗೆ ಅತ್ಯಧಿಕ ಭಯವನ್ನುಂಟು ಮಾಡುವಂತೆ ಕಚ್ಚಿದ ಒಸಡುಗಳಿಂದ ಕೂಡಿದ, ಶತ್ರುಗಳು ಬಿಟ್ಟ ಬಾಣಗಳಿಂದ ನಜ್ಜುಗುಜ್ಜಾದ ದೇಹವುಳ್ಳ, ನೆತ್ತರ ಕಡಲಲ್ಲಿ ಮುಳುಗಿ ಬಿದ್ದಿರುವ ಯುದ್ಧ ವೀರನಾದ ಕುಮಾರ ಅಭಿಮನ್ಯುವನ್ನು ದುರ್ಯೋಧನನು ನೋಡಿ ಗುರುತಿಸಿದನು.
5. ದ್ರೋಣಾಚಾರ್ಯರು ನಿರ್ಮಿಸಿದ ಚಕ್ರವ್ಯೂಹವನ್ನು ಭೇದಿಸಿ ಮುನ್ನುಗ್ಗಲು ಸಮರ್ಥರಾದವರು ಅರ್ಜುನನೂ, ನೀನೂ ಮಾತ್ರ. ಬೇರೆಯವರಿಗೆ ಇದು ಅಸಾಧ್ಯ. ಇದನ್ನು ಪ್ರವೇಶಿಸಿ ಯುದ್ಧರಂಗದಲ್ಲಿ ಅಸಂಖ್ಯಾತ ಶತ್ರುರಾಜರನ್ನು ಸಂಹರಿಸಿದ ಅರ್ಜುನ ಪುತ್ರನೇ ಯುದ್ಧದಲ್ಲಿ ನಿನಗೆ ಸರಿಸಾಟಿಯಾಗಿ ನಿಲ್ಲುವಂತಹ ಪರಾಕ್ರಮಿಗಳೂ ಇದ್ದಾರೆಯೇ?
6. ಅನುಪಮ ಸಾಹಸಿಯೇ! ನಿನ್ನ ವಿಕ್ರಮವು ಅನ್ಯರಿಗೆಲ್ಲಿ? ನಾನು ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುವುದಿಷ್ಟೇ. ನಿನ್ನ ಸಾಹಸಕ್ಕೆ ಸದೃಶವಾದ ಸಾಹಸವೂ, ನಿನ್ನ ಮರಣಕ್ಕೆ ಅನುಗುಣವಾದ ಮರಣವು ನನಗೆ ಲಭಿಸುವಂತಾಗಲಿ.
7. ಮಗನೇ ! ತಂದೆಗೆ ತರ್ಪಣೋದಕವನ್ನು ಮಗನು ಕೊಡುವುದು ಲೋಕ ನಿಯಮ, ಅದನ್ನು ಬಿಟ್ಟು ಈಗ ನಾನು ನಿನಗೆ ತಿಲೋದಕವನ್ನು ಕೊಡುವಂತಾಯಿತೇ! ನೀನೇಕೆ ಈ ನಿಯಮವನ್ನು ಅದಲು ಬದಲು ಮಾಡಿಬಿಟ್ಟೆ.
8. ನಿನ್ನನ್ನು ಕೊಂದವನು ಈಗಲೂ ಬದುಕಿರುವಾಗ, ಆತನನ್ನು ಹೊಡೆದು ಕೊಲ್ಲದೆ ಬಿಟ್ಟ ನಾನು ಇನ್ನೂ ಜೀವಿಸಿದ್ದೇನಲ್ಲಾ! ನೀನು ನನ್ನ ಮೇಲಿಟ್ಟ ಪ್ರೀತಿಗೂ, ನಾನು ನಿನ್ನಲ್ಲಿ ತೋರುತ್ತಿದ್ದ ಸೋದರ ವಾತ್ಸಲ್ಯಕ್ಕೂ ತಕ್ಕಂತೆ ನಾನು ವರ್ತಿಸಿದೆನೇ? ಸೇಡಿಗೆ ಸೇಡು ತೀರಿಸದೆ ಹೋದೆನಲ್ಲಾ! ಇದು ನನ್ನಂಥವನಿಗೆ ಉಚಿತವೇ? ಸರ್ವಥಾ ಅಲ್ಲ.
9. ಹಾ! ತಮ್ಮ ದುಶ್ಯಾಸನಾ! ತಾಯಿಯ ಎದೆಹಾಲನ್ನು ಮೊದಲು ಉಂಡವನು ನಾನಲ್ಲವೇ! ಬಳಿಕವೇ ನೀನು ಉಂಡದ್ದು? ಸೋಮರಸವನ್ನು ಸುಖ ಭೋಜನವನ್ನೂ ನಾನು ಉಂಡಮೇಲಲ್ಲವೇ ನೀನು ಉಂಡದ್ದು? ಬಾಲ್ಯದಿಂದಲೇ ಇಷ್ಟೊಂದು ವಿನೀತನಾಗಿದ್ದ ನೀನು ಒಮ್ಮೆಯೂ ಅವಿಧೇಯನಾಗಿ ವರ್ತಿಸಿದ್ದಿಲ್ಲ. ಆದರೆ ಯುದ್ಧದಲ್ಲಿ ಸಾವನ್ನಪ್ಪುವುದಕ್ಕೆ ನನಗಿಂತ ಮುಂದಾದೆಯಲ್ಲ! ಅದೇಕೆ ಈ ಒಂದು ಸಂದರ್ಭದಲ್ಲಿ ಮಾತ್ರ ಸಾರಥಿಯನ್ನು ಉಲ್ಲಂಘಿಸಿದೆ?
10. ಅಂಗಾಧಿರಾಜ! ನಾನೂ, ದುಶ್ಯಾಸನನೂ, ನೀನು ತ್ರಿಮೂರ್ತಿಗಳಂತಿದ್ದವರಲ್ಲವೇ? ದುಶ್ಯಾಸನನ ಸಾವಿನ ಬಳಿಕ ನಾವಿಬ್ಬರಲ್ಲವೇ ಉಳಿದವರು? ಈಗಲಾದರೋ ನೀನು ನನ್ನನ್ನು ಆಗಲಿ ಎಲ್ಲಿಗೆ ಹೊರಟು ಹೋದೆ?
11. ಅಂಗಾಧಿಪತಿ! ನಿನ್ನ ಗೆಳೆಯನಾದ ಈ ದುರ್ಯೋಧನನ್ನು ಏಕೆ ನೋಡುವುದಿಲ್ಲ? ಏಕೆ ಮಾತನಾಡಿಸುವುದಿಲ್ಲ? ಏಕೆ ಆಲಂಗಿಸಿಕೊಳ್ಳುವುದಿಲ್ಲ? ಏಕೆ ಅಪ್ಪಣೆಯನ್ನು ಕೇಳುವುದಿಲ್ಲ? ಏಕೆ ಸ್ವಾಮಿ! ದೇವ ಎಂದು ಸಂಬೋಧಿಸುವುದಿಲ್ಲ? ಏಕೆ ಇಷ್ಟೊಂದು ಮೌನ?
12. ಸೂರ್ಯ ಸುತನಾದ ಕರ್ಣನೇ! ಸತ್ಯ ತ್ಯಾಗ ಪರಾಕ್ರಮಗಳಿಗೆ ಮೂಲ ಪುರುಷನಾದ ನೀನಿದ್ದ ದೇಶದಲ್ಲಿ ಸುಳ್ಳು, ಅತ್ಯಾಸೆ, ಅಂಜಿಕೆಗಳು ತಲೆದೋರುವುದೇ?
13. ಕರ್ಣನೇ! ನೀನು ಯಾರೆಂಬ ರಹಸ್ಯವನ್ನು ಬಲ್ಲವರು ಕುಂತಿ, ಸೂರ್ಯ, ಶ್ರೀ ಕೃಷ್ಣ, ದಿವ್ಯಜ್ಞಾನಿಯಾದ ಸಹದೇವ ಮತ್ತು ನಾನು. ಉಳಿದವರಾರಿಗೂ ನಿನ್ನ ಜನ್ಮ ವೃತ್ತಾಂತ ತಿಳಿಯದು.
14. ಅಂಗರಾಜ ! ನೀನಿದ್ದರೆ ನನಗೆ ರಾಜ್ಯ, ಅರಸೊತ್ತಿಗೆ, ಶ್ವೇತಛತ್ರ, ಪರಂಪರಾಗತವಾದ ವಂಶ ಎಲ್ಲವೂ ಇದೆ. ನೀನಿಲ್ಲದ ಬಳಿಕ ಇವೆಲ್ಲ ನನಗೆಲ್ಲಿವೆ?
15. ಸಾಕ್ಷಾತ್ ಇಂದ್ರನೇ ವಟುವೇಷದಿಂದ ಬಂದು ನಿನ್ನ ಮೈಗೆ ಅಂಟಿಕೊಂಡಿದ್ದ ಸಹಜ ಕವಚವನ್ನು ಕೈಯೊಡ್ಡಿ ಬೇಡಲು ಹಿಂದು ಮುಂದು ನೋಡದೆ ಸ್ವತಃ ಕತ್ತರಿಸಿಕೊಟ್ಟೆಯಲ್ಲ. ಕೃಷ್ಣನ ಆಜ್ಞೆಯಂತೆ ಕುಂತಿಯು ಬಂದು ಪುರಿಗಣೆಯನ್ನು ಬೇಡಿದಾಗ ಹೆದರದೆ ಅದನ್ನು ಕೊಟ್ಟೆಯಲ್ಲ, ನಿನ್ನಂಥ ದಾನಶೂರನೂ ಪರಾಕ್ರಮಿಯೂ ಬೇರಾವನಿರುವನು ?
ಒಂದು ವಾಕ್ಯದಲ್ಲಿ ಉತ್ತರಿಸಿ:
1. ಕುರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದನು? ಕುರುಪತಿ ರಣರಂಗದಲ್ಲಿ ದಡಿಗವೆಣಗಳನ್ನು ಮೆಟ್ಟಿ ನಡೆದನು.
2. ರಣರಂಗದಲ್ಲಿ ಸಾಗುವಾಗ ದುರ್ಯೋಧನ ಯಾರ ನೆರವನ್ನು ಅವಲಂಬಿಸಿದ್ದನು? ರಣರಂಗದಲ್ಲಿ ಸಾಗುವಾಗ ದುರ್ಯೋಧನ ಸಂಜಯನ ನೆರವನ್ನು ಅವಲಂಬಿಸಿದ್ದನು.
3. ಪಿನಾಕಪಾಣಿ ಎಂದರೆ ಯಾರು? ಪಿನಾಕಪಾಣಿ ಎಂದರೆ ಶಿವ.
4. ಚಕ್ರವ್ಯೂಹವನ್ನು ರಚಿಸಿದವನು ಯಾರು? ಚಕ್ರವ್ಯೂಹವನ್ನು ರಚಿಸಿದವನು ದ್ರೋಣಾಚಾರ್ಯ.
5. ತಂದೆಗೆ ಜಲಾಂಜಲಿಯನ್ನು ಯಾರು ಕೊಡಬೇಕು? ತಂದೆಗೆ ಜಲಾಂಜಲಿಯನ್ನು ಮಗ ಕೊಡಬೇಕು.
6. ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ ? ದಿವ್ಯಜ್ಞಾನಿ ಎಂದು ಸಹದೇವನನ್ನು ಕರೆಯಲಾಗಿದೆ.
7. ಅಂಗಾಧಿಪತಿ ಯಾರು? ಅಂಗಾಧಿಪತಿ ಕರ್ಣ,
8. ಹರಿಯು ಕರ್ಣನಿಂದ ಬೇಡಿದ್ದೇನು? ಹರಿಯು ಕರ್ಣನಿಂದ ಕವಚ ಬೇಡಿದ್ದನು.
ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :
1. ರಣರಂಗದಲ್ಲಿ ಬಿದ್ದಿದ್ದ ಅಭಿಮನ್ಯುವಿನ ಕಳೇಬರ ಯಾವ ರೀತಿ ಕಾಣುತ್ತಿತ್ತು ?
ಅರೆತೆರೆದು ಮುಚ್ಚಿದ ರೆಪ್ಪೆಗಳು, ತುಂಡಾಗಿ ಬಿದ್ದಿದ್ದ ಕೈಗಳು, ಕಚ್ಚಿದ ಕೆಳತುಟಿ, ಬಾಣಗಳಿಂದ ಜರ್ಜರಿತವಾಗಿ, ರಕ್ತ ಸಮುದ್ರದಲ್ಲಿ ಅದ್ದಿದಂತೆ ರಣರಂಗದಲ್ಲಿ ಅಭಿಮನ್ಯುವು ಬಿದ್ದಿದ್ದನು.
2. ದುರ್ಯೋಧನ ತನ್ನ ಮಗನ ಶವವನ್ನು ಕಂಡು ಹೇಗೆ ವ್ಯಥೆಪಡುತ್ತಾನೆ?
ದುರ್ಯೋಧನ ತನ್ನ ಮಗನ ಶವವನ್ನು ಕಂಡು ಮಗನಾದವನು ತನ್ನ ತಂದೆಗೆ ತರ್ಪಣ ಬಿಡುವುದು ಕ್ರಮ. ಆದರೆ ಇಲ್ಲಿ ನಾನೇ ನಿನಗೆ ತರ್ಪಣ ಬಿಡುವಂತಾಯಿತೆ ಎಂದು ವ್ಯಥೆ ಪಡುತ್ತಾನೆ.
3. ದುಶ್ಯಾಸನನು ಅಣ್ಣನಿಗೆ ತೋರಿದ್ದ ವಿನಯಶೀಲತೆ ಯಾವುದು ?
ತಾಯಿಯ ಎದೆ ಹಾಲಿರಲಿ, ಸೋಮಾಮೃತವಿರಲಿ, ದಿವ್ಯ ಭೋಜನವಿರಲಿ ಯಾವುದನ್ನು ಅಣ್ಣ ಸ್ವೀಕರಿಸಿದ ನಂತರ ಸ್ವೀಕರಿಸುವ ವಿನಯಶೀಲತೆ ದುಶ್ಯಾಸನ ಹೊಂದಿದ್ದನು.
4. ಕರ್ಣನ ಜನ್ಮ ರಹಸ್ಯವನ್ನು ಯಾರು ಯಾರು ಅರಿತಿದ್ದರು ?
ಕರ್ಣನ ಜನ್ಮ ರಹಸ್ಯವನ್ನು ದುರ್ಯೋಧನ, ಕುಂತಿ, ಶ್ರೀಕೃಷ್ಣ, ದಿವ್ಯಜ್ಞಾನಿಯಾದ ಸಹದೇವ, ಸೂರ್ಯ ಆರಿತಿದ್ದರು.
5. ದುರ್ಯೋಧನನು ಕರ್ಣನ ದಾನಗುಣವನ್ನು ಹೇಗೆ ಪ್ರಶಂಸಿದ್ದಾನೆ?
ಇಂದ್ರ ಬೇಡಿದಾಗ ಕರ್ಣ ಕುಂಡಲವನ್ನು (ಜನ್ಮದತ್ತ ಕವಚವನ್ನು) ಕತ್ತರಿಸಿ ಕೊಟ್ಟಿರುವುದನ್ನು, ಕುಂತಿಯು ಬೇಡಿದಾಗ ದಿವ್ಯಾಸ್ತವನ್ನು ಕೊಟ್ಟಿದ್ದನ್ನು ನೆನಪಿಸುತ್ತಾ ದುರ್ಯೋಧನನು ಕರ್ಣನ ದಾನ ಗುಣಗಳನ್ನು ಪ್ರಶಂಸಿಸುತ್ತಾನೆ.
1 ಗಾಂಡಿವಿಯನ್ನು ಪಿನಾಕ ಪಾಣಿಯುಂ ನೆಯನ್.
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ಧ’ದಿಂದ ಆಯ್ದ ‘ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಮಹಾಭಾರತ ಯುದ್ಧದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡ ದುರ್ಯೊಧನ ಯುದ್ಧ ಭೂಮಿಗೆ ಬಂದಾಗ ಅಲ್ಲಿ ದ್ರೋಣರ ಶವದ ಮುಂದೆ ನಿಂತು ಈ ಮಾತನ್ನಾಡುತ್ತಾನೆ.
ವಿವರಣೆ : ದುರ್ಯೋಧನ ಮಹಾಭಾರತ ಯುದ್ಧದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡು ಬರುತ್ತಾನೆ. ಭೇಟಿ ಮಾಡಲು ರಣರಂಗವನ್ನು ಹಾದು ಬರುತ್ತಿದ್ದ ಸಂದರ್ಭದಲ್ಲಿ ದುರ್ಯೋಧನನಿಗೆ ದ್ರೋಣರ ಮೃತ ಶರೀರ ಸಿಗುತ್ತದೆ. ಗುರು ದ್ರೋಣರಿಗೆ ಒದಗಿದ ಸಾವನ್ನು ನೆನೆದು ದುರ್ಯೋಧನ ರೋದಿಸುತ್ತಾನೆ. ದ್ರೋಣರ ಬಿಲ್ಲು ವಿದ್ಯೆಯ ಪರಿಣತಿಯನ್ನು ಇಲ್ಲಿ ಸ್ಮರಿಸುತ್ತಾ, ಈ ಮೇಲಿನಂತೆ ಹೇಳುತ್ತಾನೆ.
2 ನಿನ್ನೊರೆಗೆ ದೊರೆಗೆ ಗಂಡರುಮೊಳರೇ ?
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ದ’ದಿಂದ ಆಯ್ದ ‘ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಮಹಾಭಾರತ ಯುದ್ಧದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡು ಯುದ್ಧ ಭೂಮಿಗೆ ಬಂದ ದೂರ್ಯೋಧನನು ದ್ರೋಣರ ಶವವನ್ನು ನೋಡಿ ಮುಂದೆ ಬಂದಾಗ ಅಭಿಮನ್ಯುವಿನ ಕಳೇಬರ ಇದ್ದಲ್ಲಿಗೆ ಬಂದು, ಅವನ ಶಕ್ತಿ ಸಾಮರ್ಥ್ಯವನ್ನು ಹೊಗಳಿ ಮಾತನಾಡುವ ಸಂದರ್ಭವಿದು.
ವಿವರಣೆ : ಸಂಜಯನೊಡನೆ ಯುದ್ಧಭೂಮಿಗೆ ದುರ್ಯೋಧನ ಬರುವಾಗ ಅರ್ಜುನನ ಮಗನಾದ ಅಭಿಮನ್ಯುವಿನ ಶವವನ್ನು ನೋಡುತ್ತಾನೆ. ದ್ರೋಣರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ, ಯುದ್ಧಭೂಮಿಯಲ್ಲಿ ಅನೇಕ ರಾಜರನ್ನು ಸೋಲಿಸಿದ ಮಹಾಪರಾಕ್ರಮಿಯಾದ ಅಭಿಮನ್ಯುವನ್ನು ದುರ್ಯೋಧನ ಹೊಗಳುತ್ತಾನೆ. ಅಭಿಮನ್ಯುವಿನ ಶೌಯವನ್ನು ನೆನಪಿಸಿ ಕೊಳ್ಳುತ್ತಾ ದುರ್ಯೋಧನ ಅಭಿಮನ್ಯುವನ್ನು ಕುರಿತು ನಿನಗೆ ಯುದ್ಧದಲ್ಲಿ ಸರಿಸಾಟಿಯಾಗಿ ನಿಲ್ಲುವಂತಹ ಪರಾಕ್ರಮಿಗಳು ಇದ್ದಾರೆಯೇ? ಎನ್ನುವಾಗ ಈ ಮೇಲಿನ ಮಾತು ಬಂದಿದೆ.
3. ನೀಂ ಕ್ರಮವಿಪರ್ಯ೦ ಮಾಡುವುದೇ.
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ಧ’ದಿಂದ ಆಯ್ದ ‘ದುರ್ಯೋಧನ ವಿಲಾಪ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ರಣರಂಗದಲ್ಲಿ ಶವಗಳನ್ನು ದಾಟಿ ಬರುತ್ತಿರುವ ದುರ್ಯೋಧನ ತನ್ನ ಮಗನಾದ ಲಕ್ಷಣ ಕುಮಾರನ ಶವವನ್ನು ಕಂಡ ಸಂದರ್ಭ ತನ್ನ ಮಗನಿಗೆ ಹೇಳುತ್ತಾನೆ.
ವಿವರಣೆ : ಸಾಮಾನ್ಯವಾಗಿ ಮಗನು ತಂದೆಗೆ ತರ್ಪಣೋದಕವನ್ನು ಕೊಡುವುದು ಲೋಕರೂಢಿ. ಆದರೆ ಅಲ್ಲಿ ಈ ರಣರಂಗದಲ್ಲಿ ದುರ್ಯೋಧನನ ಮಗ ಲಕ್ಷಣ ಕುಮಾರ ತೀರಿದ್ದಾನೆ. ಪುತ್ರ ಸ್ನೇಹ ಕಾತರ ಮನಸ್ಸಿನಿಂದಾಗಿ ಲಕ್ಷಣ ಕುಮಾರನ ಮುಖವನ್ನು ದುರ್ಯೋಧನನು ನೋಡುತ್ತಾನೆ. ಇನ್ನೂ ಬಾಳಿ ಬದುಕಬೇಕಾದ ಮಗನ ಶವವನ್ನು ನೋಡಿ ತಂದೆಯಾದವನಿಗೆ ಮಗನು ತರ್ಪಣೋದಕವನ್ನು ಕೊಡುವುದು ಸರಿಯಾದ ಕ್ರಮ. ಆದರೆ ಇಲ್ಲಿ ತಂದೆಯೇ ಮಗನಿಗೆ ತರ್ಪಣಕೊಡುವಂತಾಯಿತು. ನೀನು ಲೋಕದಲ್ಲಿ ಇರುವಂತಹ ಕ್ರಮವನ್ನು ಬದಲಿಸಿದ್ದೀಯಾ ಇದು ಸರಿಯೇ ಎಂದು ತನ್ನ ಮಗನಲ್ಲಿ ಕೇಳುತ್ತಾನೆ.
ಜನನೀಸ್ತನ್ಯಮನುಂಡೆನಾಂ ಬಕೆ ನೀಂ
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ದ’ದಿಂದ ಆಯ್ದ ‘ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಈ ಮಾತನ್ನು ದುರ್ಯೋಧನನು ರಣರಂಗದಲ್ಲಿ ಸತ್ತು ಬಿದ್ದಿದ್ದ ದುಶ್ಯಾಸನನನ್ನು ಉದ್ದೇಶಿಸಿ ಹೇಳುತ್ತಾನೆ.
ವಿವರಣೆ : ದುಶ್ಯಾಸನ ಅಣ್ಣನ ಮಾತನ್ನು ಪಾಲಿಸಿದವನು. ಈ ರೀತಿಯ ಸೋದರ ವಾತ್ಸಲ್ಯವನ್ನು ಹೊಂದಿದ ತಮ್ಮನನ್ನು ನೆನೆದಾಗ ದುರ್ಯೋಧನನಿಗೆ ವಾತ್ಸಲ್ಯ ಉಕ್ಕುತ್ತದೆ. ಎದುರಿಗೆ ದುಶ್ಯಾಸನನ ಶವವಿದೆ. ಆ ಸಂದರ್ಭದಲ್ಲಿ ದುರ್ಯೋಧನ ದುಶ್ಯಾಸನನನ್ನು ಕಂಡು ತಮ್ಮನಾಗಿ ಮೊದಲೇ ಸತ್ತಿರುವ ಬಗ್ಗೆ ದುಃಖವನ್ನು ವ್ಯಕ್ತಪಡಿಸುತ್ತಾನೆ. ಎಲ್ಲದರಲ್ಲಿಯೂ ನಿನಗಿಂತ ಸರದಿಯಲ್ಲಿ ನಾನು ಮೊದಲಿಗನಾಗಿದ್ದೆ. ಆದರೆ ಸಾವಿನ ವಿಷಯದಲ್ಲಿ ನೀನು ಏಕೆ ಮೊದಲಿಗನಾದೆ ಎಂದು ಪ್ರಶ್ನಿಸುತ್ತಾ ಈ ಮೇಲಿನಂತೆ ವಿವರಿಸುತ್ತಾನೆ.
ಈಗಳ್ ನೀನುಮಗಲೆತ್ತವೋದೆಯಂಗಾಧಿಪತೀ.
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ಧ’ದಿಂದ ಆಯ್ದ ‘ದುರ್ಯೋಧನ ವಿಲಾಪ’ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ದುರ್ಯೋಧನನು ರಣರಂಗದಲ್ಲಿ ತನ್ನ ಪ್ರಾಣ ಸ್ನೇಹಿತನಾದ ಕರ್ಣನ ಶವದ ಮುಂದೆ ನಿಂತು ದುಃಖಿಸುವ ಸಂದರ್ಭವಿದು.
ವಿವರಣೆ : ಕರ್ಣ ಮತ್ತು ದುರ್ಯೋಧನ ಪ್ರಾಣ ಸ್ನೇಹಿತರು. ರಣರಂಗದಲ್ಲಿ ಸತ್ತು ಬಿದ್ದಿರುವ ಕರ್ಣನನ್ನು ನೋಡಿದ ದುರ್ಯೋಧನನಿಗೆ ಇನ್ನಷ್ಟು ದುಃಖ ಉಂಟಾಗುತ್ತದೆ. ನಾನು, ದುಶ್ಯಾಸನ ಮತ್ತು ನೀನು ಮೂವರು ಅನ್ನೋನ್ಯತೆಯಿಂದ ಇದ್ದೆವು. ಅವನು ನನ್ನಿಂದ ದೂರವಾದ ಬಳಿಕ ನಾವಿಬ್ಬರು ಉಳಿದೆವು. ಆದರೆ ಈಗ ನೀನು ಕೂಡ ನನ್ನನ್ನು ಬಿಟ್ಟು ಹೋಗಿದ್ದೀಯಾ. ನನ್ನನ್ನು ಆಗಲಿ ಎತ್ತ ಹೋದೆ ಎಂದು ದುರ್ಯೋಧನ ಕೇಳುತ್ತಾನೆ. ಇಲ್ಲಿ ಅವರಿಬ್ಬರ ಗಾಢವಾದ ಸ್ನೇಹವನ್ನು ಗುರುತಿಸಬಹುದು.
ಆನಜಿವೆಂ ಪೃಥೆಯವಳ್.
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ಧ’ದಿಂದ ಆಯ್ದ ‘ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಪ್ರಾಣ ಕಳೆದುಕೊಂಡು ಯುದ್ಧಭೂಮಿಯಲ್ಲಿ ಬಿದ್ದ ಕರ್ಣನ ಶವವನ್ನು ನೋಡಿ, ಅವನ ಹುಟ್ಟಿನ ಬಗ್ಗೆ ದುರ್ಯೋಧನ ಮಾತನಾಡುವ ಸಂದರ್ಭವಿದು.
ವಿವರಣೆ: ಕರ್ಣನ ಹುಟ್ಟಿನ ಬಗ್ಗೆ ದುರ್ಯೋಧನ ವಿವರಿಸುತ್ತಾ, ಅವನ ಹುಟ್ಟಿನ ರಹಸ್ಯವನ್ನು ತಿಳಿದಿರುವುದು ಕೇವಲ ಬೆರಳೆಣಿಕೆಯ ಮಂದಿ ಮಾತ್ರ. ದುರ್ಯೋಧನ ಹೇಳುವ ಹಾಗೆ. ನಿನ್ನ ಜನ್ಮ ರಹಸ್ಯವನ್ನು ನಾನು ಅರಿತಿದ್ದೇನೆ. ಕುಂತಿಗೆ ತಿಳಿದಿದೆ. ರಾಕ್ಷಸ ವೈರಿಯಾದ ಕೃಷ್ಣನಿಗೆ ಗೊತ್ತಿದೆ. ಸೂರ್ಯದೇವನಿಗೆ ಗೊತ್ತಿದೆ. ದಿವ್ಯಜ್ಞಾನಿಯಾದ ಸಹದೇವನಿಗೆ ನೀನಾರೆಂದು ಗೊತ್ತಿದೆ ಎನ್ನುವಾಗ ಈ ಮಾತನ್ನು ದುರ್ಯೋಧನನು ಶವವಾಗಿ ಬಿದ್ದಿರುವ ಕರ್ಣನಿಗೆ ಹೇಳುತ್ತಾನೆ.
ಐದು ಆರು ವಾಕ್ಯಗಳಲ್ಲಿ ಉತ್ತರಿಸಿ :
ದುರ್ಯೋಧನ ರಣರಂಗದಲ್ಲಿ ನಡೆದು ಬಂದ ಬಗೆಯನ್ನು ಕವಿ ಹೇಗೆ ವರ್ಣಿಸಿದ್ದಾನೆ ?
ಕುರುಕ್ಷೇತ್ರ ಯುದ್ಧವಾದ ಬಳಿಕ ಎಲ್ಲರನ್ನು ಕಳೆದುಕೊಂಡು ದುರ್ಯೋಧನ ದುಃಖಿತನಾಗಿ ಯುದ್ಧಭೂಮಿಯಲ್ಲಿ ಶರಶಯ್ಕೆಯಲ್ಲಿರುವ ಭೀಷ್ಮರನ್ನು ಕಾಣಲು ಬರುತ್ತಾನೆ. ಸಂಜಯನೊಡನೆ ರಣರಂಗದಲ್ಲಿ ನಡೆದು ಬರುತ್ತಾನೆ. ಹಾಗೆ ಬರುತ್ತಿರುವಾಗ ಆ ರಣಭೂಮಿಯಲ್ಲಿ ಲಕ್ಷಾಂತರ ಜನರ ಪ್ರಾಣವನ್ನು ಕಳೆದುಕೊಂಡಿದ್ದರಿಂದ ರಕ್ತದ ಸಮುದ್ರ ಅಲ್ಲಿ ಗೋಚರಿಸುತ್ತಿತ್ತು. ಆ ನೆತ್ತರಿನ ಸಮುದ್ರದಲ್ಲಿ ತುಂಡಾಗಿ ಬಿದ್ದಿದ್ದ ಆಯುಧಗಳು ಆಗಿಂದಾಗ ಪಾದಗಳನ್ನು ಇರಿಯುತ್ತಿತ್ತು. ಅಲ್ಲಿ ಕಾಲೂರುವುದಕ್ಕೆ ಆಸ್ಪದವಿಲ್ಲದೆ ದುರ್ಯೋಧನನು ಆ ದೊಡ್ಡ ದೊಡ್ಡ ಹೆಣಗಳನ್ನು ಮೆಟ್ಟಿ ನಡೆಯುತ್ತಾನೆ. ದುರ್ಯೋಧನನು ಆನೆಗಳೆಂಬ ಬೆಟ್ಟಗಳನ್ನು ಏರುತ್ತಾ, ರಕ್ತದ ಹೊಳೆಗಳನ್ನು ದಾಟುತ್ತಾ, ಕಪ್ಪಾದ ಬಳ್ಳಿಗಳ ಹಾಗೆ ನೆಲದಲ್ಲಿ ಬಾಚಿಕೊಂಡಿರುವ ಆನೆಗಳ ಸೊಂಡಿಲುಗಳಲ್ಲಿ ಸಿಕ್ಕಿಕೊಳ್ಳುತ್ತಾನೆ. ಇದ್ಯಾವುದನ್ನು ಲೆಕ್ಕಿಸದೆ ಸಂಜಯನ ಹೆಗಲನ್ನು ಅವಲಂಬಿಸಿ ಅತಿ ರಭಸದಿಂದ ನಡೆದು ಬರುತ್ತಾನೆ. ಇದು ದುರ್ಯೋಧನನು ರಣರಂಗದಲ್ಲಿ ನಡೆದು ಬಂದ ಬಗೆಯಾಗಿದೆ.
2. ದ್ರೋಣನ ಕಳೇಬರವನ್ನು ಕಂಡು ದುರ್ಯೋಧನ ಹೇಗೆ ದುಃಖಿಸುತ್ತಾನೆ?
ದುರ್ಯೋಧನನು ಸಂಜಯನ ಹೆಗಲನ್ನು ಅವಲಂಬಿಸಿ ಭಾರಿ ಹೆಣಗಳನ್ನು ಮೆಟ್ಟಿ ನಡೆಯುತ್ತಾ, ಮುಂದೆ ಬಂದಾಗ ಅಲ್ಲಿ ಬಾಣ ಸಮೂಹದಿಂದ ನುಚ್ಚುನೂರಾದ ದೇಹ ಮತ್ತು ಕವಚವುಳ್ಳ ದ್ರೋಣಾಚಾರ್ಯರನ್ನು ನೋಡಿದನು. ಸ್ವಭಾವತಃ ದುಷ್ಟನಾದ ದೃಷ್ಟದ್ಯುಮ್ನನ ಕೈಗೆ ಸಿಕ್ಕು ಅವನಿಂದ ತಲೆಗೂದಲು ಎಳೆಯಲ್ಪಟ್ಟು ಸತ್ತಿರುವ ದ್ರೋಣರನ್ನು ನೋಡುತ್ತಾನೆ.
ಧನುರ್ವಿದ್ಯೆಯಲ್ಲಿ ನಿಮ್ಮನ್ನು ಮೀರಿ ನಿಲ್ಲಲು ಅರ್ಜುನನಿಗಲ್ಲ ಸಾಕ್ಷಾತ್ ಶಿವನಿಗೂ ಅಸಾಧ್ಯವಾಗುವ ಕೌಶಲ್ಯ ನಿಮ್ಮಲ್ಲಿತ್ತು. ನಿಮ್ಮನ್ನು ಪ್ರತಿಭಟಿಸಿ ಗೆಲ್ಲುವುದು ಅಸಾಧ್ಯದ ಮಾತು. ಹೇಗಿದ್ದರೂ ನೀವು ಶಸ್ತ್ರತ್ಯಾಗ ಮಾಡಿದ್ದು ಕೇವಲ ತಿರಸ್ಕಾರದಿಂದಲೋ ಅಥವಾ ನನ್ನ ಕರ್ಮಫಲವು ನಿಮ್ಮನ್ನು ಹಾಗೆ ಮಾಡಿಸಿತೋ ನಾನರಿಯೇ. ನಿಮಗೂ ಕೂಡ ಈ ರೀತಿಯ ಅಕಾಲವಾದ ಮೃತ್ಯು ಯಾಕಾಗಿ ಉಂಟಾಯಿತೋ ಎಂದು ದುಃಖಿಸುತ್ತಾನೆ.
ಅಭಿಮನ್ಯುವಿನ ಶೌರ್ಯ ಸಾಹಸವನ್ನು ದುರ್ಯೋಧನ ಹೇಗೆ ಹೊಗಳುತ್ತಾನೆ?
ಅಭಿಮನ್ಯು ಅರೆಮುಚ್ಚಿದ ಕಣ್ಣು, ಅರಳಿದ ಮುಖ, ಕತ್ತರಿಸಿದ ಕೈಗಳು, ಕಚ್ಚಿದ ಒಸಡು, ಶತ್ರುಗಳ ಬಾಣದಿಂದ ನುಜ್ಜುಗುಜ್ಜಾದ ದೇಹ, ನೆತ್ತರ ಕಡಲಲ್ಲಿ ಮುಳುಗಿ ಬಿದ್ದಿದ್ದಾನೆ. ಹೀಗಿರುವ ಅಭಿಮನ್ಯುವನ್ನು ದುರ್ಯೋಧನನು ನೋಡುತ್ತಾನೆ. ತನ್ನ ಶತ್ರುವಾದ ಅರ್ಜುನನ ಮಗನೆಂದು ತಿಳಿದರೂ ಗುಣಕ್ಕೆ ಮತ್ಸರವಿಲ್ಲ ಎನ್ನುವ ಹಾಗೆ ಹೊಗಳುತ್ತಾನೆ.
ದ್ರೋಣಾಚಾರ್ಯರು ನಿರ್ಮಿಸಿದ ಚಕ್ರವ್ಯೂಹವನ್ನು ಭೇದಿಸಿ ಮುನ್ನುಗ್ಗಲು ಸಮರ್ಥರಾದವರು ಅರ್ಜುನನೂ ನೀನು ಮಾತ್ರ. ಬೇರೆಯವರಿಗೆ ಇದು ಅಸಾಧ್ಯ. ಇದನ್ನು ನೀನು ಪ್ರವೇಶಿಸಿದ್ದೀಯಾ. ಯುದ್ಧ ಭೂಮಿಯಲ್ಲಿ ಅಸಂಖ್ಯಾತ ಶತ್ರುರಾಜರನ್ನು ಸಂಹರಿಸಿದವನು ನೀನಾಗಿದ್ದೀಯಾ. ಯುದ್ಧದಲ್ಲಿ ನಿನಗೆ ಸರಿಸಾಟಿಯಾಗಿ ನಿಲ್ಲುವ ಪರಾಕ್ರಮಿಗಳು ಯಾರು ಇಲ್ಲ.
ನೀನು ಅನುಪಮ ಸಾಹಸಿ. ನಿನ್ನ ಪರಾಕ್ರಮ ಬೇರೆಯವರಿಗೆ ಬರಲು ಸಾಧ್ಯವಿಲ್ಲ. ನಿನ್ನ ಸಾಹಸಕ್ಕೆ ಸಮಾನವಾದ ಸಾಹಸವೂ, ಜೊತೆಗೆ ನಿನ್ನ ಮರಣಕ್ಕೆ ಅನುಗುಣವಾದ ಮರಣವೂ ನನಗೆ ಸಿಗುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎನ್ನುತ್ತಾನೆ.’
ಇಲ್ಲಿ ಅಭಿಮನ್ಯು ದುರ್ಯೋಧನನಿಗಿಂತ ಪ್ರಾಯದಲ್ಲಿ ಕಿರಿಯ. ಅಲ್ಲದೆ ಶತ್ರುಪುತ್ರ. ಹೀಗಿದ್ದರೂ ಅಭಿಮನ್ಯುವಿನ ಶೌರ್ಯ-ಸಾಹಸವನ್ನು ದುರ್ಯೋಧನ ಹಾಡಿ ಹೊಗಳುತ್ತಾನೆ. ದುರ್ಯೋಧನನ ಹೆಚ್ಚುಗಾರಿಕೆ.
ದುರ್ಯೋಧನನು ದುಶ್ಯಾಸನನನ್ನು ಕಂಡು ವ್ಯಕ್ತಪಡಿಸಿದ ಭಾವನೆಗಳಾವುವು ?
ಮಹಾಭಾರತ ಯುದ್ಧದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡ ದುರ್ಯೋಧನನು ಯುದ್ಧಭೂಮಿಯಲ್ಲಿ ಶರಶಯ್ಕೆಯಲ್ಲಿದ್ದ ತಾತ ಭೀಷ್ಮರನ್ನು ಭೇಟಿ ಮಾಡಲು ಸಂಜಯನೊಡನೆ ಬರುತ್ತಾನೆ. ಸತ್ತು ಬಿದ್ದಿರುವ ಗುರು ದ್ರೋಣಾಚಾರ್ಯ, ಅರ್ಜುನನ ಮಗ ಅಭಿಮನ್ಯು, ಮಗ ಲಕ್ಷಣಕುಮಾರ ಇವರನ್ನೆಲ್ಲಾ ನೋಡಿ ದುಃಖಿಸುತ್ತಾ, ತಮ್ಮನಾದ ದುಶ್ಯಾಸನನ ಶವವನ್ನು ನೋಡುತ್ತಾನೆ. ವಿಪರೀತವಾದ ದುಃಖ ವ್ಯಾಪಿಸಿಕೊಳ್ಳುತ್ತದೆ.
ಭ್ರಾತೃ ವಾತ್ಸಲ್ಯದಿಂದ “ನಿನ್ನನ್ನು ಕೊಂದವನು ಈಗಲೂ ಬದುಕಿರುವಾಗ, ಆತನನ್ನು ಹೊಡೆದು ಕೊಲ್ಲದೆ ಬಿಟ್ಟ ನಾನು ಇನ್ನೂ ಜೀವಿಸಿದ್ದೇನಲ್ಲಾ!” ಎಂದು ತನ್ನ ಬಗ್ಗೆ ತಾನೇ ನಾಚಿಕೆಪಟ್ಟುಕೊಳ್ಳುತ್ತಾನೆ. ಸೇಡಿಗೆ ಸೇಡು ತೀರಿಸದೆ ಹೋದೆನಲ್ಲಾ. ಇದು ತನ್ನಂಥವನಿಗೆ ಉಚಿತವಲ್ಲ ಎನ್ನುತ್ತಾನೆ.
ತಾಯಿಯ ಎದೆಹಾಲು ಕುಡಿದದ್ದು, ಸೋಮಾಮೃತ ದಿವ್ಯ ಭೋಜನಗಳನ್ನು ನಾನು ಮೊದಲು ಸೇವಿಸಿದ್ದೇನೆ. ಅನಂತರ ತಮ್ಮನಾದ ನೀನು ಸೇವಿಸಿದ್ದು. ಚಿಕ್ಕದಾಗಿನಿಂದ ಎಲ್ಲಿಯೂ ಈ ಕ್ರಮ ತಪ್ಪಲಿಲ್ಲ. ಸಾವಿನಲ್ಲೂ ಹಿರಿಯವನಾದ ನಾನು ಸತ್ತ ಬಳಿಕ ಕಿರಿಯವನಾದ ನೀನು ಸಾಯಬೇಕಿತ್ತು. ಇಲ್ಲಿ ಮಾತ್ರ ನೀನು ಕ್ರಮವನ್ನು ತಪ್ಪಿದ್ದೀಯ ಎನ್ನುವುದಾಗಿ ನೋವನ್ನು ತೋಡಿಕೊಳ್ಳುತ್ತಾ ಮರುಗುತ್ತಾನೆ.
ಕರ್ಣನ ಉದಾತ್ತ ಗುಣಗಳನ್ನು ದುರ್ಯೋಧನ ಹೇಗೆ ಕೊಂಡಾಡಿದ್ದಾನೆ ?
ದುರ್ಯೋಧನನು ತನ್ನ ಸಮಸ್ತ ಬಂಧುಗಳನ್ನು ಕಳೆದುಕೊಂಡಿದ್ದನು. ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮರನ್ನು ಕಾಣಲು ಸಂಜಯನೊಡನೆ ಬರುತ್ತಾನೆ. ಆಗ ರಣರಂಗದಲ್ಲಿ ಹೋರಾಡಿ ಸಾವನಪ್ಪಿದ ಶವಗಳನ್ನು ನೋಡುತ್ತಾನೆ. ಅದರಲ್ಲಿ ತನ್ನ ಪ್ರಾಣ ಸ್ನೇಹಿತನಾದ ಕರ್ಣನ ಶವವನ್ನು ನೋಡಿ ಆತನ ಗುಣಗಳನ್ನು ಹೇಳುತ್ತಾನೆ.
ಕರ್ಣ ಸತ್ಯ, ತ್ಯಾಗ, ಪರಾಕ್ರಮಗಳಿಗೆ ನೀನು ಮೊದಲಿಗನಾಗಿದ್ದೀಯ. ನೀನಿರುವಲ್ಲಿ ಸುಳ್ಳು, ಅತ್ಯಾಸೆ, ಭಯ ಇರಲು ಸಾಧ್ಯವಿಲ್ಲ. ನೀನಿದ್ದರೆ ಮಾತ್ರ ನನಗೆ ರಾಜ್ಯ, ಅರಸೊತ್ತಿಗೆ ಶ್ವೇತಛತ್ರ ವಂಶ ಎಲ್ಲವೂ. ನೀನಿಲ್ಲದ ಬಳಿಕ ಇವೆಲ್ಲ ನನಗೆಲ್ಲಿವೆ? ಕರ್ಣನಂಥ ಸ್ನೇಹಿತನಿಲ್ಲದೆ ಇವೆಲ್ಲವೂ ಅರ್ಥಹೀನ ಎನ್ನುತ್ತಾನೆ.
ಕರ್ಣನ ದಾನಗುಣವನ್ನು ದುರ್ಯೋಧನ ಇಲ್ಲಿ ಗುರುತಿಸಿದ್ದಾನೆ. ಇಂದ್ರನು ಬಂದು ಕರ್ಣನ ಜನ್ಮದತ್ತವಾದ ರಕ್ಷಾಕವಚವನ್ನು ದಾನವಾಗಿ ಬೇಡಿದಾಗ ಅದನ್ನು ಕತ್ತರಿಸಿಕೊಟ್ಟ ದಾನಶೂರನಾಗಿದ್ದೀಯ. ಅಲ್ಲದೆ ಕುಂತಿ ಬಂದು ಕೇಳಿದಾಗ ದಿವ್ಯಾಸ್ತ್ರವನ್ನು ಹಿಂದು-ಮುಂದು ನೋಡದೆ ನೀಡಿದ್ದೀಯ. ಪರಾಕ್ರಮದಲ್ಲಿ ದಾನದಲ್ಲಾಗಲೀ ನಿನಗೆ ಸಮಾನರಾದವರು ಮತ್ತೊಬ್ಬರಿಲ್ಲ ಎಂದು ದುರ್ಯೋಧನ ಕರ್ಣನನ್ನು ಹೊಗಳುತ್ತಾನೆ.