Kannada Poem-04 ಹಲುಬಿದಳ್ ಕಲ್ಮರಂ ಕರಗುವಂತೆ- ಲಕ್ಷ್ಮೀಶ – ಪದ್ಯದ ಸಾರಾಂಶ

Kannada Poem-04 ಹಲುಬಿದಳ್ ಕಲ್ಮರಂ ಕರಗುವಂತೆ- ಲಕ್ಷ್ಮೀಶ – ಪದ್ಯದ ಸಾರಾಂಶ

 

Kannada Poem-02 ವೈಶಂಪಾಯನ ಶಿಷ್ಯನಾದ ಜೈಮಿನಿ ಮುನಿಯು ಜನಮೇಜಯ ರಾಜನಿಗೆ ಈ ಕಥೆಯನ್ನು ಹೇಳುತ್ತಾನೆ.

1. ಎಲೈ ಜನಮೇಜಯ ರಾಜನೇ ಕೇಳು, ಅಣ್ಣನಾದ ರಾಮನ ಆಜ್ಞೆಯಂತೆ ಲಕ್ಷ್ಮಣನು ಸೀತೆಯನ್ನು ಕಾಡಿಗೆ ಕರೆದುಕೊಂಡು ಹೊರಟನು. ಅವರು ಪ್ರಯಾಣಿಸುತ್ತಿದ್ದ ರಥದ ಮೇಲಿದ್ದ ಪತಾಕೆಯು ರಘುವರನು ತನ್ನ ಪತ್ನಿಯಾದ ಸೀತಾದೇವಿಯನ್ನು ಕಾಡಿಗೆ ಕಳುಹಿಸುತ್ತಿರುವುದು ಸರಿಯಲ್ಲ ಎಂದು ಅಯ್ಯೋ! ಎನ್ನುತ್ತಾ ತಲೆಯನ್ನು ಅಲ್ಲಾಡಿಸಿದ ಹಾಗಿತ್ತು. ಇದು ಪರಮದಾರುಣ ಕಾರ್ಯ ಎಂದು ಅಯೋಧ್ಯಾಪುರದ ಜನರು ತಮ್ಮ ತಮ್ಮಲ್ಲಿಯೇ (ಗುಜುಗುಜಿಸಿ) ಮಾತನಾಡಿಕೊಳ್ಳುತ್ತಿರಲು, ಲಕ್ಷ್ಮಣನು ವಾಯುವೇಗದಿಂದ ರಥವನ್ನು ಓಡಿಸುತ್ತಾ ಅಲ್ಲಿಂದ ಹೊರಟನು.

2. ವಾಯುವೇಗದಿಂದ ರಥವನ್ನು ಓಡಿಸಿಕೊಂಡು ಬಂದು ಗಂಗಾನದಿಯನ್ನು ಸಮೀಪಿಸಿದ ಲಕ್ಷ್ಮಣ, ಸೀತೆಯನ್ನು ಕೂಡಿಕೊಂಡು ಗಂಗಾನದಿಗೆ (ಮಂದಾಕಿನಿ) ನಮಸ್ಕರಿಸುತ್ತಾನೆ. ನಂತರದಲ್ಲಿ ನಾವಿಕರೊಂದಿಗೆ ದೋಣಿಯಲ್ಲಿ ಪ್ರಯಾಣಿಸಿ ಗಂಗೆಯನ್ನು ಕಳೆದು ನಿರ್ಮಲವಾದ ತೀರ್ಥದಲ್ಲಿ ಮಿಂದು ಲಕ್ಷ್ಮಣನು ಯೋಚಿಸುತ್ತಾನೆ. ಸೀತೆಯನ್ನು ಏಕಾಂಗಿಯಾಗಿ ಕಾಡಿನಲ್ಲಿ ಬಿಟ್ಟುಹೋಗಬೇಕಲ್ಲ ಎಂದು ಚಿಂತಿಸುತ್ತಾನೆ.ಉಗ್ರ ಮೃಗ ಪಕ್ಷಿ ಸಮೂಹದಿಂದ ಗರ್ಜಿಸುವ ಕಾಡನ್ನು ಹೆಜ್ಜೆಯಿಡಲೂ ಕಷ್ಟವೆಂಬಂತಹ ಆ ಅರಣ್ಯ ಕಠಿಣ ಮಾರ್ಗದಿಂದ ಪ್ರವೇಶಿಸುತ್ತಾರೆ.

3. ಅರಣ್ಯವು ಹೇಗಿತ್ತು ಎಂದರೆ ಒಂದೊಂದು ಕ್ಷಣಕ್ಕೆ ಒಂದೊಂದು ರೀತಿಯಲ್ಲಿ ಕಾಣಿಸುತ್ತಿತ್ತು. ರಾತ್ರಿಯಂತೆ, ಹಗಲಿನ ಹಾಗೆ, ಯಜ್ಞದಂತೆ, ಸ್ವರ್ಗದಂತೆ, ಹಾಲಿನ ಕಡಲಿನಂತೆ, ಕೈಲಾಸಗಿರಿಯಂತೆ, ಒಂದರ ಹಿಂದೆ ಒಂದು ನಿರಂತರವಾಗಿ ಕಾಣಿಸಿತು. ಮತ್ತೊಮ್ಮೆ ಸೂರ್ಯ-ಚಂದ್ರರ ಪ್ರಭೆಯಂತೆ. ಅಗ್ನಿಯಂತೆ, ಇಂದ್ರನಂತೆ, ನವಿಲಿನಂತೆ, ವಿಷ್ಣುವಿನಂತೆ, ಶಿವನಂತೆ, ಶಂಕರನಂತೆ, ಮುಳ್ಳಿನಂತೆ, ಯುದ್ಧದಂತೆ, ಕೊಳದಂತೆ, ಕಡಲಂತೆ, ಆಕಾಶದಂತೆ, ಹುಲ್ಲಿನಂತೆ, ಬಾಣದಂತೆ, ಹುಲಿಯಂತೆ, ಕಮಲದಂತೆ, ಮರದಂತೆ, ಹವಳದಂತೆ, ಕರಡಿಯಂತೆ, ನಕ್ಷತ್ರದಂತೆ, ಆ ಮಹಾ ಅಡವಿ ಜಾನಕಿಯ ಕಣ್ಣಿಗೆ ಘೋರತರವಾಗಿ ಕಂಡಿತು.

4. ಮುನಿಗಳ ಪಾವನದ ಆಶ್ರಮಗಳೆಲ್ಲಿ? ಸಿದ್ಧರ ಆಶ್ರಮವೆಂಬ ಮಂಗಳ ಸ್ಥಳಗಳೆಲ್ಲಿ? ಹವಿಸ್ಸನ್ನು ಆಶ್ರಮದಲ್ಲಿ ನಿರಂತರವಾಗಿ ನಡೆಯುವ ಮಹಾಯಾಗಗಳಿಗೆ ಉಪಯೋಗಿಸುತ್ತಾರೆ. ಅದರ ಪರಿಮಳಗಳೆಲ್ಲಿ? ಹೋಮ-ಧೂಮಗಳಿಲ್ಲ. ಅಗ್ನಿಹೋತ್ರದ ಗುಡಿಸಲುಗಳು ಕಾಣುತ್ತಿಲ್ಲ ಎಲ್ಲಿದೆ? ವೇದ ಶಾಸ್ತ್ರಧ್ವನಿಗಳು ಕೇಳುತ್ತಿಲ್ಲ. ಇವೆಲ್ಲವೂ ಇರುವ ಸ್ಥಳಕ್ಕೆ ನನ್ನನ್ನು ಕರೆದೊಯ್ಯದೇ ಈ ಅತಿ ಭಯಂಕರವಾದ ಈ ಕಾಡಿಗೆ ನನ್ನನ್ನು ಏಕೆ ಕರೆ ತಂದಿರುವೆ? ಎಂದು ನಿಟ್ಟುಸಿರು ಬಿಡುತ್ತಾ ಸೀತೆಯು ಲಕ್ಷ್ಮಣನಲ್ಲಿ ಕೇಳುತ್ತಾಳೆ.

5. ವೈಶಂಪಾಯನ ಮಹರ್ಷಿಗಳು ಜನಮೇಜಯ ರಾಜನಿಗೆ ಕಥೆಯನ್ನು ಮುಂದುವರಿಸಿ ಹೇಳುತ್ತಿದ್ದಾರೆ. ನರನಾಥ ಕೇಳು ಭೂಮಿಯ ಮಗಳಾದ ಸೀತೆ ನುಡಿದ ಮಾತಿಗೆ ಉತ್ತರವನ್ನು ಕೊಡಲಾರದೆ ಲಕ್ಷ್ಮಣ ಬಹಳವಾಗಿ ನೊಂದನು. ಶ್ರೀ ರಾಮನು ಆಡಿದ ಅತಿ ಕಷ್ಟವಾದ ಮಾತುಗಳನ್ನು ಸೀತೆಗೆ ಹೇಗೆ ತಿಳಿಸುವುದೆಂದು ಅವನು ಮನದಲ್ಲೇ ದುಃಖಿಸಿದನು. ಸೂರ್ಯವಂಶದಲ್ಲಿ ಜನಿಸಿದ ಶ್ರೀರಾಮನ ಮಡದಿಯಾದ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹೋಗುವುದು ಹೇಗೆ ? ಹೋಗದಿದ್ದರೆ ಸಹೋದರನು ಏನು ಹೇಳುತ್ತಾನೋ ಎನ್ನುವ ಚಿಂತೆಯೂ ಇದೆ. ಸೀತೆಯ ಪ್ರಶ್ನೆಗೆ ಉತ್ತರ ಕೊಡಲಾರದೆ ನಿಟ್ಟುಸಿರು ಬಿಟ್ಟನು.

6. ಮುಂದೆ ಬಹಳ ಕಷ್ಟದಿಂದ ಸೀತಾದೇವಿಯನ್ನು ಕಾಡಿಗೆ ಕರೆತಂದುದರ ಉದ್ದೇಶವನ್ನು ಹೇಳುತ್ತಾನೆ. ಸೀತಾದೇವಿಯೇ ನಿನ್ನನ್ನು ಕಾಡಿಗೆ ಕರೆತಂದುದರ ಕಾರಣ ನಿನ್ನನ್ನು ಕಾಡಿನಲ್ಲಿ ಬಿಟ್ಟುಹೋಗಲು ರಘುಕುಲೋದ್ಭವನಾದ ಶ್ರೀ ರಾಮನು ಆಜ್ಞೆಮಾಡಿದ್ದಾನೆ. ಒಂದು ಅಪವಾದ ಬಂದು ಆವರಿಸಲು ಸಹಿಸಲಾರದೆ ಕಾಡಿನಲ್ಲಿ ಬಿಟ್ಟು ಬಾ ಎಂದು ನನ್ನನ್ನು ನೇಮಿಸಿದನು.ಆ ರಾಜನ ಆಜ್ಞೆಯನ್ನು ಮೀರಲು ಆಗದೆ, ತಿಳಿಯದೆ ನಿನ್ನನ್ನು ಈ ಮಹಾ ಆರಣ್ಯಕ್ಕೆ ಕರೆದುಕೊಂಡು ಬಂದೆನು. ಇನ್ನು ನೀನು ಮೆಲ್ಲ ಮೆಲ್ಲನೆ ಎಲ್ಲಿಗಾದರೂ ಹೋಗು ಎಂದು ಲಕ್ಷ ಣನು ಕಣ್ಣಿನಲ್ಲಿ ನೀರು ತುಂಬಿಕೊಂಡು ದುಃಖಭರಿತನಾಗಿ ನಿಂತನು.

7. ಲಕ್ಷ್ಮಣ ತನ್ನನ್ನು ಕಾಡಿಗೆ ಕರೆದುಕೊಂಡು ಬಂದ ಉದ್ದೇಶ, ಮತ್ತು ಕಾರಣವನ್ನು ತಿಳಿದಾಗ ಸೀತೆ ಭೀಕರ ಬಿರುಗಾಳಿಗೆ ಗೊನೆಬಿಟ್ಟ ಬಾಳೆಗಿಡ ಮುರಿದು ಭೂಮಿಗೆ ಒರಗುವಂತೆ ಆದಳು. ಲಕ್ಷ್ಮಣನ ಮಾತು ಕಿವಿಯ ಮೇಲೆ (ಬಿದ್ದದೇ ತಡ) ಬೀಳುವುದಕ್ಕೆ ಮುಂಚೆಯೇ ಪ್ರಜ್ಞೆ ತಪ್ಪಿ ಬಿದ್ದಳು. ನಡುನಡುಗುತ್ತಾ ಭೂಮಿಗೆ ಬಿದ್ದು ತನ್ನ ಅಂಗವನ್ನೇ ಮರೆತಳು. ಆಗ ಲಕ್ಷ್ಮಣನು ಕಣ್ಣೀರು ಸುರಿಸುತ್ತಾ ಅಲ್ಲಿಯೇ ಇದ್ದ ಎಲೆಯನ್ನು ಕೊಡೆಯಂತೆ ಹಿಡಿದು ನೆರಳಾಗುವಂತೆ ಮಾಡಿದನು. ತನ್ನ ಉತ್ತರೀಯ (ಸೆರೆಗು)ದಿಂದ ಗಾಳಿಯನ್ನು ಬೀಸಿದನು. ರಾಮನ ಸೇವೆಯು ಈ ರೀತಿ ಸಂದಿತೆ ?ಎಂದು ದುಃಖಿಸಿದನು.

8. ತನ್ನ ಅಂಗವನ್ನು ಮರೆತು ಪ್ರಜ್ಞೆ ತಪ್ಪಿದ ಸೀತೆಯು ಲಕ್ಷ್ಮಣನ ಉಪಚರಿಸುವಿಕೆಯಿಂದ ಎಚ್ಚರದ ಸ್ಥಿತಿಗೆ ಬಂದಳು. ರಘುವಂಶ ಶ್ರೇಷ್ಠನು (ಶ್ರೀರಾಮ) ನನ್ನನ್ನು ಬಿಟ್ಟನೆ? ಆಯ್ಯಯ್ಯೋ, ಮುಟ್ಟುವುದಿಲ್ಲವೋ, ಈವರೆಗೆ ನಮ್ಮಿಬ್ಬರ ಬಾಳ್ವೆ ಪ್ರಸಿದ್ಧವಾಗಿತ್ತು. ಶ್ರೇಷ್ಠವಾಗಿತ್ತು. ಅದಕ್ಕೆ ಶ್ರೀರಾಮನು ಸಂಚಕಾರವನ್ನು ಕೊಟ್ಟನೆ? ಎಲೈ ಸುಮಿತ್ರೆಯ ತನುಜನಾದ ಲಕ್ಷ್ಮಣನೇ ಭೀಕರವಾದ ಕಾಡಿನಲ್ಲಿ ನನ್ನನ್ನು ಕಳುಹಿಸಿ ಬಾ ಎಂದು ನಿನಗೆ ಆಜ್ಞೆ ಕೊಟ್ಟನೆ? ತಾನೆನ್ನ ಕಣ್ಣಟೆಗೆಟ್ಟನೆ. ಮನೋವಲ್ಲಭನನ್ನು ಅಗಲಿ ಈ ದಟ್ಟವಾದ ಕಾಡಿನಲ್ಲಿ ಪಿಶಾಚಿಯ ರೀತಿಯಲ್ಲಿ ಹೇಗಿರಲಿ? ಆಯ್ಯೋ ನಾನು ಕೆಟ್ಟೆನಲ್ಲಾ ಎಂದು ಅಸಾಹಯಕ ಸ್ಥಿತಿಯಲ್ಲಿ ಒರಲಿದಳು.

9. ಹಿಂದೆ ಶ್ರೀರಾಮನ ಒಡನಾಡಿಯಾಗಿ, ಸತಿಯಾಗಿದ್ದ ಸಂದರ್ಭದಲ್ಲಿ ಅನುಭವಿಸಿದ ಕಷ್ಟ ಸುಖಗಳನ್ನು ಒಮ್ಮೆ ನೆನಪಿಸಿಕೊಳ್ಳುತ್ತಾಳೆ. ಎಲ್ಲಾ ಸಂದರ್ಭದಲ್ಲಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ, ಶ್ರೀರಾಮ ಈ ಸಂದರ್ಭದಲ್ಲಿ ಇಷ್ಟೊಂದು ಕಠಿಣ ಏಕಾದ ? ಎಂದು ಯೋಚಿಸುತ್ತಾಳೆ. ಶ್ರೀರಾಮನು ವಿಶ್ವಾಮಿತ್ರ ಮುನಿಗಳ ಜೊತೆಗೆ ಮಿಥಿಲಾಪುರಕ್ಕೆ ಬಂದು ಜನಕರಾಜನು ಒಡ್ಡಿದ್ದ ಪಣದಲ್ಲಿ ಶಿವಧನಸ್ಸನ್ನು ಮುರಿದು ನನ್ನನ್ನು ಮದುವೆಯಾಗಿದ್ದ. ಮದುವೆಯಾದಂದಿನಿಂದ ಸಂತೋಷವಾಗಿದ್ದೆವು. ರಾವಣನು ತನ್ನನ್ನು ಅಪಹರಿಸಿದಾಗಲೂ ಕಪಿಸೈನ್ಯವನ್ನು ಕಳುಹಿಸಿ, ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸುವುದರ ಮೂಲಕ ಲಂಕೆಯಿಂದ ರಕ್ಷಿಸುವ ಪ್ರಯತ್ನ ಮಾಡಲಾಯಿತು. ರಾವಣನ ಕಡೆಯ ದೈತ್ಯರನ್ನು ಕೊಂದು ರಕ್ಷಿಸಿದ್ದನು. ನಂತರದಲ್ಲಿ ಅಗ್ನಿ ಪರೀಕ್ಷೆಗೆ ಒಡ್ಡಿ ತನ್ನ ಪತ್ನಿ ಪರಿಶುದ್ಧಳು ಎಂಬುದನ್ನು ತಿಳಿದಿದ್ದನು. ಈಗ ಪುನಃ ನನ್ನಲ್ಲಿ ಯಾವ ದೋಷ ಕಂಡು ಈ ಗತಿಗೆ ನನ್ನನ್ನು ಗುರಿಯಾಗುವ ಹಾಗೆ ಮಾಡಿದ ಎಂದು ಮರುಗುತ್ತಾಳೆ.

10. ಸೀತೆಯು ಲಕ್ಷ್ಮಣನನ್ನು ಅಯೋಧ್ಯೆಗೆ ಹಿಂದಿರುಗುವಂತೆ ಹೇಳುತ್ತಾಳೆ. ನೀನು ಇಲ್ಲಿ ತಡ ಮಾಡಿದರೆ ರಾಮನು ಕೋಪಿಸಿಕೊಳ್ಳಬಹುದು. ನಾನು ಇಲ್ಲಿ ಒಂಟಿಯೆಂಬ ಭಯಬೇಡ. ನನಗಾದರೆ ಈ ಕಾಡಿನ ಉಗ್ರ ಜಂತುಗಳು, ಸಹಾಯಕ್ಕೆ ಬರಬಹುದು. ಅಲ್ಲಿ ಶ್ರೀ ರಾಮನೊಬ್ಬನೇ ಇರುವನು. ಲೋಕದ ಅರಸ ಈ ರೀತಿ ಮಾಡಿದ್ದನ್ನು ನೋಡಿ ಆತನ ಸೇವಕರು ಬೇಕು ಬೇಡವೆಂದು ಹೇಳಲಿಲ್ಲವೇ ? ಭರತ ಶತ್ರುಘ್ನರು ಈ ಕೆಲಸಕ್ಕೆ ಒಪ್ಪಿದರೆ? ಹನುಮಂತ ಇದ್ದಿರುವನೋ? ಈ ರೀತಿ ಪ್ರಶ್ನಿಸುತ್ತಾ ಹೇಳೆಂದಳು. ಅಬಲೆಯಾದ ಸೀತೆ ದುಃಖದಿಂದ ನುಡಿದಳು.

11. ಕರುಣಾಳುವಾದ ರಾಘವನದೇನೂ ತಪ್ಪಿಲ್ಲ. ಮಾಡಬಾರದ ಪಾಪಗಳನ್ನು ಮಾಡಿ ಹೆಣ್ಣಾಗಿ ಹುಟ್ಟಿದ್ದು ನನ್ನ ತಪ್ಪು. ಆ ಪಾಪವೇ ನನ್ನನ್ನು ಇವತ್ತು ಈ ರೀತಿ ತಿನ್ನುತ್ತಿದೆ. ನಾನು ಹೇಗೋ ಕಾಡಿನಲ್ಲಿ ಬದುಕುತ್ತೇನೆ. ತಡಮಾಡದೆ ಲಕ್ಷಣನೆ ಅಯೋಧ್ಯೆಗೆ ಹಿಂದಿರುಗು. ದಾರಿಯಲ್ಲಿ ನಿನಗೆ ಹೆಜ್ಜೆಹೆಜ್ಜೆಗೂ ಸುಖವಾಗಲಿ ಎಂದು ಕಣ್ಣೀರು ಗರೆಯುತ್ತಾ ಹಾರೈಸಿದಳು. ಸೀತೆ ಈ ರೀತಿ ಮಾತನಾಡಿದ್ದನ್ನು ಕೇಳಿ ಲಕ್ಷ್ಮಣನು ಆ ಕಾಡಿನ ಅಭಿಮಾನಿಗಳಿಗೆ ಸೀತೆಯನ್ನು ನೋಡಿಕೊಳ್ಳಲು ಹೇಳುತ್ತಾನೆ.

12. ಲಕ್ಷ್ಮಣನು ಶ್ರೀರಾಮನ ಹೇಳಿಕೆಯ ಪ್ರಕಾರ ಸೀತೆಯನ್ನು ಕಾಡಿನಲ್ಲಿ ಬಿಡಲು ಬರುತ್ತಾನೆ. ಬಿಟ್ಟು ಹೋಗುವಾಗ ಬಹಳ ನೋವಿನಿಂದ ಸೀತೆಯ ಕ್ಷೇಮವನ್ನು ಯೋಚಿಸುತ್ತಾನೆ. ಬಳಿಕ ಅಲ್ಲಿರುವ ಎಲ್ಲ ಅಂಶಗಳಲ್ಲೂ ತಾಯಿಯ ಕ್ಷೇಮದ ಬಗ್ಗೆ ಯೋಚಿಸುತ್ತಾನೆ. ಎಲೆ ಕಾಡಿನಲ್ಲಿರುವ ವನದೇವತೆಯೇ, ಮರಗಳೇ, ಪ್ರಾಣಿಗಳೇ, ಕ್ರಿಮಿಕೀಟಗಳೇ, ಪಕ್ಷಿಗಳೇ, ಲತೆಗಳೇ, ಹುಲ್ಲು ಪೊದೆಗಳೆ, ಪಂಚಭೂತಗಳೇ, ದಿಕ್ಕುಗಳೇ, ಧರ್ಮದೇವತೆಯೇ, ಜಗತ್ತನ್ನು ಕಾಪಾಡುವ ಜಾಹ್ನವಿಯೇ, (ದೇವಗಂಗೆಯೇ) ನೀವೆಲ್ಲರೂ ನನ್ನ ಮಾತೆಯನ್ನು ಕಾಪಾಡಿ. ಸೀತೆಯ ತಾಯಿಯಾದ ಭೂತಾಯಿಯೇ ನಿನ್ನ ಮಗಳು ಸೀತೆ ಇಲ್ಲಿದ್ದಾಳೆ. ಅವಳನ್ನು ಕಾಪಾಡಬೇಕು ಎಂದು ಲಕ್ಷ್ಮಣ ಹೇಳುತ್ತಾ ಕೈಮುಗಿದನು.

13. ವೈಶಂಪಾಯನ ಮುನಿಗಳು ಜನಮೇಜಯ ರಾಜನಿಗೆ ಕಥೆ ಹೇಳುವುದನ್ನು ಮುಂದುವರಿಸುತ್ತಾರೆ. ಅರಸ ಕೇಳು ಅಲ್ಲಿರುವ ಪಕ್ಷಿ, ಮೃಗ, ಜಂತುಗಳೆಲ್ಲವೂ ಸೀತೆಯನ್ನು ಸುತ್ತುವರಿದು ನಿಂತವು. ದೇಹವನ್ನು ಕುಗ್ಗಿಸಿದವು. ಕಣ್ಣೀರು ಸುರಿಸಿ ತಮ್ಮೊಳಗಿನ ಪರಸ್ಪರ ವೈರತ್ವವನ್ನು ಮರೆತವು. ಅವುಗಳು ತಮ್ಮ ತಮ್ಮಲ್ಲಿನ ಹುಲ್ಲು, ಮೇವುಗಳನ್ನು ತೊರೆದವು. ಕೊರಗಿದವು. ಅಲ್ಲಿದ್ದ ಮರ, ಬಳ್ಳಿಗಳು ಬಾಡಿ ಸೊರಗಿ ಹೋದುವಂತೆ, ಅತಿಯಾದ ಶೋಕದಿಂದ ಕಲ್ಲುಗಳು ಕರಗುತ್ತಿದ್ದವು. “ಜಗತ್ತಿನಲ್ಲಿ ಉತ್ತಮರ ಹಾನಿಯನ್ನು ನೋಡಿ ಸಹಿಸುವವರು ಯಾರೂ ಇಲ್ಲ” ಎನ್ನುವಂತೆ ಕವಿ ತಿಳಿಸಿದ್ದಾನೆ.

14. ಪ್ರಕೃತಿಯಲ್ಲಿ ಈ ರೀತಿ ಆಗುತ್ತಿರುವಾಗ ಭೂಮಿಯ ಮಗಳಾದ ಸೀತೆ ಚೇತರಿಸಿಕೊಂಡಳು. ಚೇತರಿಸಿಕೊಳ್ಳುತ್ತ ನನಗಿನ್ನು ಮುಂದಿನ ದಾರಿ ಯಾವುದೆಂದು ದಿಕ್ಕುದಿಕ್ಕುಗಳನ್ನು ನೋಡಿದಳು. ಅವಳ ಅಂಗಾಂಗವೆಲ್ಲವೂ ಶಿಥಿಲವಾದ ಅವಸ್ಥೆಯಲ್ಲಿತ್ತು. ಧೂಳಿಡಿದ ದೇಹವನ್ನು ಬಿಚ್ಚಿದ ತಲೆಗೂದಲನ್ನು ಲೆಕ್ಕಿಸದೆ ಸೀತೆಯು ದುಃಖಿಸುತ್ತಾಳೆ. ತಾನು ಮಿಥಿಲೇಂದ್ರ ವಂಶದಲ್ಲಿ ಜನಿಸಿದ್ದೇನೆ. ನಂತರ ರಘುಕುಲ ದಶರಥ ರಾಜನ ಸೊಸೆಯಾಗಿದ್ದೇನೆ. ಈ ರೀತಿ ಶ್ರೇಷ್ಠತೆಯಿರುವ ತಾನು ಈ ಭೀಕರವಾದ ಅರಣ್ಯದಲ್ಲಿ ವ್ಯಥೆ ಪಡುವಂತಾಯೇ ಎಂದು ಕಲ್ಲು ಕೂಡ ಕರಗುವಂತೆ ಶೋಕಗೈದಳು.

15. ಅದೇ ಹೊತ್ತಿನಲ್ಲಿ ಮುನಿಶ್ರೇಷ್ಠರಾಗಿದ್ದ ವಾಲ್ಮೀಕಿಯು ಯಜ್ಞಕ್ಕೆ ಯೂಪವನ್ನು (ಯಜ್ಞ ಪಶುವನ್ನು ಕಟ್ಟುವ ಕಂಬ) ಅರಸುತ್ತಾ ಆ ಕಾಡಿಗೆ ಬಂದರು. ತನ್ನ ಶಿಷ್ಯರೊಂದಿಗೆ ಪ್ರಸಿದ್ದ ತಪೋವನರಾದ ವಾಲ್ಮೀಕಿ ಮಹರ್ಷಿಗಳು ಅಲ್ಲಿಗೆ ಬಂದು, ಸೀತೆಯನ್ನು ಕಾಣುತ್ತಾರೆ. ಕಾಡಿನಲ್ಲಿ ಒಬ್ಬಳೇ ಏಕಾಂಗಿಯಾಗಿ, ದಿಕ್ಕುಗಾಣದೆ, ದುಃಖದಿಂದ ದಿಕ್ಕುತೋಚದೆ ಸ್ಥಿತಿಗೆಟ್ಟು ಗ್ರೀಷ್ಮ ಋತುವಿನಲ್ಲಿ ಬಸವಳಿದು ಬಿದ್ದು ರೋಧಿಸುವ ವನದೇವತೆಯಂತೆ, ಗಂಟಲು ಬಿಗಿದು ದುಃಖಿಸುತ್ತಾ ಇರುವ ಸೀತೆಯನ್ನು ಕಂಡರು.

16. ಅಳುತ್ತಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ಸಂತೈಸಿದರು. “ದೇವಿ, ಆಳಬೇಡ, ದುಃಖವನ್ನು ಬಿಡು, ನಿನಗೆ ಮುಂದೆ ಅವಳಿ ಮಕ್ಕಳಾಗುವುದು. ನಮ್ಮ ಬಗ್ಗೆ ಸಂದೇಹ ಬೇಡ. ನಿನ್ನ ತಂದೆಯಾದ ಜನಕನಿಗೆ ನಾವು ಹೊರಗಿನವರಲ್ಲ. ನೀನು ನಮ್ಮ ಆಶ್ರಮಕ್ಕೆ ಬಾ. ಅಲ್ಲಿ ಸುಖವಾಗಿರಬಹುದು. ಅಲ್ಲಿ ನಿನಗೆ ಯಾವ ಯಾವ ಬಯಕೆಗಳುಂಟೋ, ಅವೆಲ್ಲವನ್ನೂ ಈಡೇರಿಸುತ್ತೇನೆ. ನಾನು ನಿನ್ನನ್ನು ಸುಖವಾಗಿ ನೋಡಿಕೊಳ್ಳುವುದರ ಜೊತೆಗೆ ರಕ್ಷಿಸುತ್ತೇನೆ. ಹೆದರಬೇಡ” ಎಂದು ರಾವಣನ ವೈರಿಯಾದ ರಾಮನ ಹೆಂಡತಿಯಾದ ಸೀತೆಯನ್ನು ವಾಲ್ಮೀಕಿಯು ತಮ್ಮ ಆಶ್ರಮಕ್ಕೆ ಕರೆತಂದರು.

ಸಂದರ್ಭ:

1 ಆಹಹಯೆಂದಡಿಗಡಿಗೆ ತಲೆಗೊಡಹುವಂತಿರಲ್.

ಆಯ್ಕೆ: ಉಪಮಾಲೋಲ ಕವಿ ಲಕ್ಷ್ಮೀಶ ಬರೆದ ಜೈಮಿನಿ ಭಾರತ ಎಂಬ ಕಾವ್ಯದಿಂದ ಆಯ್ದ ಹಲುಬಿದಳ್ ಕಲ್ಮರಂ ಕರಗುವಂತೆ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ : ಲಕ್ಷ್ಮಣನು ರಾಮನ ಆಜ್ಞೆಯಂತೆ ಸೀತೆಯನ್ನು ಕಾಡಿನಲ್ಲಿ ಬಿಡುವ ಸಂದರ್ಭದಲ್ಲಿ ಈ ಮಾತು

ಬಂದಿದೆ.

ವಿವರಣೆ: ಲಕ್ಷ್ಮಣನು ರಾಮನ ಆಜ್ಞೆಯಂತೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರಲು ರಥದಲ್ಲಿ ಅವಳನ್ನು ಕುಳ್ಳಿರಿಸಿಕೊಂಡು ಹೊರಟನು. ಆಗ ಲಕ್ಷ ಮಣನ ರಥದ ಮೇಲಿದ್ದ ಪತಾಕೆ ಅತ್ತಿತ್ತ ಹೊಯ್ದಾಡುತ್ತಿತ್ತು. ಅದು ಆಚೆಯಿಂದ ಈಚೆಗೆ ಈಚೆಯಿಂದ ಆಚೆಗೆ ಹೋಗುತ್ತಿದ್ದು, ತಲೆಯನ್ನು ಅಲ್ಲಾಡಿಸಿದಂತೆ ಇದ್ದಿತೆಂದು ಕವಿ ಹೇಳಿದ್ದಾರೆ. ರಘುವರನು ತನ್ನ ಪತ್ನಿಯಾದ ಸೀತೆಯನ್ನು ಬಿಡುತ್ತಿರುವುದು ಸರಿಯಲ್ಲ. ಅಯ್ಯಯ್ಯೋ ಎಂದು ದುಃಖಿಸುವಂತೆ, ಆ ಬಾವುಟ ಕಂಡಿತು ಎನ್ನುವುದನ್ನು ಕವಿ ವರ್ಣಿಸಿದ್ದಾರೆ.

2 ‘ಇಲ್ಲಿಗೇಕೈತಂದೆ ತಂದೆ ಸೌಮಿತ್ರಿ’.

ಆಯ್ಕೆ: ಉಪಮಾಲೋಲ ಕವಿ ಲಕ್ಷ್ಮೀಶ ಬರೆದ ಜೈಮಿನಿ ಭಾರತ ಎಂಬ ಕಾವ್ಯದಿಂದ ಆಯ್ದ ಹಲುಬಿದಳ್ ಕಲ್ಮರಂ ಕರಗುವಂತೆ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ : ಲಕ್ಷ್ಮಣನು ಸೀತೆಯನ್ನು ಕಾಡಿಗೆ ಕರೆದುಕೊಡು ಬಂದ ಉದ್ದೇಶವನ್ನು ತಿಳಿಯದೆ ಸೀತೆ ಈ ರೀತಿ ಹೇಳುತ್ತಾಳೆ.

ವಿವರಣೆ : ರಾಮನು ತನ್ನನ್ನು ತ್ಯಜಿಸಿರುವನೆಂದು ಸೀತೆಗೆ ತಿಳಿದಿರಲಿಲ್ಲ. ಲಕ್ಷ್ಮಣನು ಸೀತೆಯನ್ನು ಕರೆತರುವಾಗ ಅವಳಿಗೆ ಯಾವ ವಿಷಯವೂ ಗೊತ್ತಿರುವುದಿಲ್ಲ. ದಟ್ಟವಾದ ಕಾಡನ್ನು ಪ್ರವೇಶ ಮಾಡುವಾಗ ಅವಳನ್ನು ಇಲ್ಲಿಗೇಕೆ ಕರೆತಂದ ಎನ್ನುವುದನ್ನು ಯೋಚಿಸುತ್ತಾ ಇಲ್ಲಿ ಆಶ್ರಮದಲ್ಲಿರಬೇಕಾದ ಋಷಿಮುನಿಗಳೂ ಇಲ್ಲ. ಯಜ್ಞಕುಂಡಗಳು ಇಲ್ಲಿ ಕಾಣುವುದಿಲ್ಲ. ವೇದಶಾಸ್ತ್ರಧ್ವನಿಗಳಿಲ್ಲ. ನಿಜವಾಗಿಯೂ ನನ್ನನ್ನು ಅಂತಹ ವಾತಾವರಣ ಇರುವಲ್ಲಿ ಕರೆದುಕೊಂಡು ಹೋಗಬೇಕು. ಅದು ಬಿಟ್ಟು ಈ ದಟ್ಟವಾದ ಅರಣ್ಯಕ್ಕೆ ಏಕೆ ಕರೆದುಕೊಂಡು ಬಂದೆ ಎಂದು ಲಕ್ಷ್ಮಣನನ್ನು ಸೀತೆ ಈ ರೀತಿ ಪ್ರಶ್ನಿಸುತ್ತಾಳೆ.

3. ಮೆಲ್ಲನೀ ವಿಪಿನಕೊಡಗೊಂಡು ಬಂದೆಂ.

ಆಯ್ಕೆ : ಉಪಮಾಲೋಲ ಕವಿ ಲಕ್ಷ್ಮೀಶ ಬರೆದ ಜೈಮಿನಿ ಭಾರತ ಎಂಬ ಕಾವ್ಯದಿಂದ ಆಯ್ದ ಹಲುಬಿದಳ್ ಕಲ್ಮರಂ ಕರಗುವಂತೆ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ : ಋಷಿಮುನಿಗಳೂ ವಾಸಿಸುವ ಪ್ರದೇಶಕ್ಕೆ ಕರೆದೊಯ್ಯದೆ ನನ್ನನ್ನು ಏಕೆ ಈ ದಟ್ಟವಾದ ಕಾಡಿಗೆ ಕರೆದುಕೊಂಡು ಬಂದೆ ಎನ್ನುವ ಸೀತೆಯ ಪ್ರಶ್ನೆಗೆ ಲಕ್ಷ್ಮಣ ಈ ರೀತಿ ಉತ್ತರಿಸುತ್ತಾನೆ.

ವಿವರಣೆ : ಸೀತೆಯನ್ನು ಪರಿತ್ಯಜಿಸಿದ ರಾಮ ಸೀತೆಯನ್ನು ಕಾಡಿಗೆ ಬಿಟ್ಟುಬರುವಂತೆ ಲಕ್ಷ್ಮಣನಲ್ಲಿ ಹೇಳುತ್ತಾನೆ. ಈ ವಿಷಯ ಸೀತೆಗೆ ತಿಳಿದಿರುವುದಿಲ್ಲ. ಆಗ ಸೀತೆ ಲಕ್ಷ್ಮಣನೊಂದಿಗೆ ಹೋಗುತ್ತಾ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀಯ ಈ ದಟ್ಟವಾದ ಆರಣ್ಯಕ್ಕೆ ನನ್ನನ್ನು ಏಕೆ ಕರೆದುಕೊಂಡು ಬಂದೆ ಎನ್ನುತ್ತಾಳೆ. ಆಗ ಲಕ್ಷ್ಮಣನು ಹೇಳುತ್ತಾನೆ ಅಣ್ಣನಾದ ರಾಮನು ಅಪವಾದವು ಆವರಿಸಿದ ನಿನ್ನನ್ನು ಒಪ್ಪಿಕೊಳ್ಳದೆ ತ್ಯಜಿಸಿದ ಮತ್ತು ಕಾಡಿಗೆ ಕಳುಹಿಸಿ ಬಾ ಎಂದು ನನ್ನನ್ನು ನೇಮಿಸಿದ. ಹಾಗಾಗಿ ನಾನು ರಾಜನ ಆಜ್ಞೆಯನ್ನು ಮೀರಲಾರದೇ ಇಲ್ಲಿಗೆ ಕರೆದುಕೊಂಡು ಬಂದೆ ಎಂದನು. ಈ ಮಾತಿನ ಮೂಲಕ ಸೀತೆಗೆ ನಿಜ ತಿಳಿಯುತ್ತದೆ.

4. ರಾಮನ ಸೇವೆ ಸಂದುದೇ ತನಗೆ.

ಆಯ್ಕೆ : ಉಪಮಾಲೋಲ ಕವಿ ಲಕ್ಷ್ಮೀಶ ಬರೆದ ಜೈಮಿನಿ ಭಾರತ ಎಂಬ ಕಾವ್ಯದಿಂದ ಆಯ್ದ ಹಲುಬಿದಳ್ ಕಲ್ಮರಂ ಕರಗುವಂತೆ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ : ರಾಮನು ತನ್ನನ್ನು ತ್ಯಜಿಸಿದ ಎನ್ನುವ ವಿಷಯ ತಿಳಿದ ಸೀತೆ ಪ್ರಜ್ಞೆತಪ್ಪಿದಾಗ ಲಕ್ಷ್ಮಣ ರೋದಿಸಿದ ರೀತಿ ಇದು.

ವಿವರಣೆ : ಲಕ್ಷ್ಮಣನು ಸೀತೆಯನ್ನು ಕಾಡಿಗೆ ಬಿಟ್ಟು ಬಾ ಎನ್ನುವ ರಾಮನ ಆಜ್ಞೆಯ ಪ್ರಕಾರ ಆ ಕಾರ್ಯಕ್ಕೆ ಮುಂದಾಗುತ್ತಾನೆ. ಕಾಡನ್ನು ಸಮೀಪಿಸುವಾಗ ಸೀತೆಗೆ ಆಶ್ಚರ್ಯವಾಗುತ್ತದೆ. ಸೀತೆ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವೆ ? ಎಂದು ಲಕ್ಷ್ಮಣನಲ್ಲಿ ಕೇಳಿದಾಗ ಲಕ್ಷ್ಮಣನು ಅಣ್ಣನ ತೀರ್ಮಾನವನ್ನು ತಿಳಿಸುತ್ತಾನೆ. ಅದನ್ನು ಕೇಳಿದ ಸೀತೆ ಗೊನೆಯನ್ನು ಹೊಂದಿದ ಬಾಳೆಯು ಬಿರುಗಾಳಿಗೆ ಸಿಕ್ಕಿ ನೆಲಕ್ಕೆ ಉರುಳುವ ಹಾಗೆ ಭೂಮಿಗೆ ಬೀಳುತ್ತಾಳೆ. ಆಗ ಲಕ್ಷ್ಮಣ ಕಣ್ಣೀರು ಹಾಕುತ್ತಾ ಎಲೆಯಿಂದ ಕೊಡೆಯನ್ನು ಹಿಡಿದು ಉತ್ತರೀಯದಿಂದ ಆಕೆಗೆ ಗಾಳಿಯನ್ನು ಬೀಸುತ್ತಾ ರಾಮನ ಸೇವೆ ಈ ರೀತಿ ಸಂದಿತೆ ? ಎನ್ನುತ್ತಾನೆ.

5 ಹರಧನುವನುಡಿದೆನ್ನಂ ಮದುವೆಯಾದಂ

ಆಯ್ಕೆ : ಉಪಮಾಲೋಲ ಕವಿ ಲಕ್ಷ್ಮೀಶ ಬರೆದ ಜೈಮಿನಿ ಭಾರತ ಎಂಬ ಕಾವ್ಯದಿಂದ ಆಯ್ದ ಹಲುಬಿದಳ ಕಲ್ಮರಂ ಕರಗುವಂತೆ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ : ರಾಮಸೀತೆಯನ್ನು ತ್ಯಜಿಸಿದ ಈ ವಿಚಾರ ಲಕ್ಷ್ಮ ಣನಿಂದ ತಿಳಿದ ಸೀತೆ ಈ ರೀತಿ ಯೋಚಿಸುತ್ತಾ ಲಕ್ಷ್ಮಣನಲ್ಲಿ ಹೇಳುತ್ತಾಳೆ.

ವಿವರಣೆ : ಶ್ರೀರಾಮನು ಸೀತೆಯನ್ನು ಬಿಟ್ಟು ಬಾ ಎಂದು ಲಕ್ಷ್ಮಣನಲ್ಲಿ ಹೇಳುತ್ತಾನೆ. ದಟ್ಟವಾದ ಕಾಡಿಗೆ ಪ್ರವೇಶಿಸುತ್ತಾ ಇರುವಾಗ ಸೀತೆ ಲಕ್ಷ್ಮ ಣನಲ್ಲಿ ನನ್ನನ್ನು ಇಲ್ಲಿಗೇಕೆ ಕರೆತಂದೆ ಎಂದು ಪ್ರಶ್ನಿಸುತ್ತಾಳೆ. ಆಗ ತನ್ನನ್ನು ರಾಮ ತ್ಯಜಿಸಿರುವನೆಂದು ತಿಳಿಯುತ್ತದೆ. ಪ್ರಜ್ಞೆ ತಪ್ಪಿದ ಆಕೆಯನ್ನು ಲಕ್ಷ್ಮಣ ಉಪಚರಿಸಿದ. ನಂತರ ಸೀತೆ ಹೀಗೆ ಯೋಚಿಸುತ್ತಾ ಹೇಳುತ್ತಾಳೆ. ಅವಳಿಗೆ ಹಿಂದಿನ ಘಟನೆಗಳು ನೆನಪಿಗೆ ಬರುತ್ತವೆ. ವಿಶ್ವಾಮಿತ್ರ ಮುನಿಗಳೊಡನೆ ಮಿಥಿಲೆಗೆ ಬಂದು ಶಿವಧನಸ್ಸನ್ನು ಮುರಿದು ನನ್ನನ್ನು ಮದುವೆಯಾದ ವಿಷಯವನ್ನು ನೆನೆಯುತ್ತಾಳೆ. ಆಗ ಇದ್ದ ಪ್ರೀತಿ ಈಗ ಎಲ್ಲಿ ಹೋಯಿತು ಎಂದು ಯೋಚಿಸುತ್ತಾಳೆ.

6. ಲೋಕದರಸೇಗೈದೊಡಂ ತನ್ನ ಕಿಂಕರರ್ ಬೇಕುಬೇಡೆಂದು ಪೇಳರೆ!

ಆಯ್ಕೆ : ಉಪಮಾಲೋಲ ಕವಿ ಲಕ್ಷ್ಮೀಶ ಬರೆದ ಜೈಮಿನಿ ಭಾರತ ಎಂಬ ಕಾವ್ಯದಿಂದ ಆಯ್ದ ಹಲುಬಿದಳ್ ಕಲ್ಮರಂ ಕರಗುವಂತೆ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ : ರಾಮನ ಈ ನಿರ್ಣಯಕ್ಕೆ ಯಾರೂ ಪ್ರತಿಕ್ರಿಯಿಸಲಿಲ್ಲವೇ ಎನ್ನುವಾಗ ಸೀತೆ ಈ ಮಾತನ್ನು ನುಡಿಯುತ್ತಾಳೆ.

ವಿವರಣೆ :ಸೀತೆ ತನ್ನ ಪತಿಯಾದ ಶ್ರೀರಾಮನಿಂದ ನಾನು ಪರಿತ್ಯಜಿಸಲ್ಪಟ್ಟಿದ್ದೇನೆ ಎನ್ನುವ ವಿಚಾರವನ್ನು ವಿಶ್ಲೇಷಿಸುತ್ತಾಳೆ. ರಾಮ ತಾನು ಇಚ್ಛೆಪಟ್ಟು ಹರಧನುವನ್ನು ಮುರಿದು ನನ್ನನ್ನು ಮದುವೆಯಾದವನು. ಈಗ ಅದೇ ರಾಮ ನನ್ನನ್ನು ಕಾಡಿಗೆ ಬಿಡು ಎಂದಿದ್ದಾನೆ. ಈ ಸಮಯದಲ್ಲಿ ರಾಜನಾದ ರಾಮ ಯೋಚನೆ ಮಾಡಬೇಕಿತ್ತು. ಹೋಗಲಿ ಕಿಂಕರರಾದರೂ (ಸೇವಕ) ಬೇಡ ಎಂದೂ ಹೇಳಲಿಲ್ಲವೆ ? ಈ ಕಾರ್ಯವನ್ನು ಯಾರೂ ಪ್ರಶ್ನಿಸಲಿಲ್ಲವೇ ? ಎನ್ನುವಾಗ ಈ ಮಾತು ಬಂದಿದೆ.

7 ಸಲುಹಿಕೊಂಬುದು ತನ್ನ ಮಾತೆಯಂ

ಆಯ್ಕೆ : ಉಪಮಾಲೋಲ ಕವಿ ಲಕ್ಷ್ಮೀಶ ಬರೆದ ಜೈಮಿನಿ ಭಾರತ ಎಂಬ ಕಾವ್ಯದಿಂದ ಆಯ್ದ ಹಲುಬಿದಳ್ ಕಲ್ಮರಂ ಕರಗುವಂತೆ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ : ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರುವ ಸಂದರ್ಭದಲ್ಲಿ ಲಕ್ಷ್ಮಣ ಈ ಮಾತನ್ನು ಹೇಳುತ್ತಾನೆ.

ವಿವರಣೆ : ಸೀತೆ ಒಬ್ಬಳನ್ನೇ ಕಾಡಿನಲ್ಲಿ ಬಿಟ್ಟು ಲಕ್ಷ ಣನು ಅಲ್ಲಿಂದ ಹೊರಡುತ್ತಾನೆ. ಲಕ್ಷ ಣನಿಗೆ ಯೋಚನೆಯಿದೆ. ಆ ಯೋಚನೆಯಲ್ಲಿ ಸೀತೆ ಕ್ಷೇಮವನ್ನು ಮನಸ್ಸಿನಲ್ಲಿಟ್ಟುಕೊಂಡು ಎಲೆ ವನವೇ, ಮರಗಳೇ. ಮೃಗ ಕ್ರಿಮಿಕೀಟಗಳೇ, ಪಕ್ಷಿಗಳೇ, ಲತೆಗಳೇ, ಹೀಗೆ ಎಲ್ಲವನ್ನು ಸಂಬೋಧಿಸುತ್ತಾ. ಹುಲ್ಲುಪೊದೆ, ಪಂಚಭೂತಗಳು, ದಿಕ್ಕಿನ ದೇವತೆ ಹೀಗೆ ಎಲ್ಲರಲ್ಲು ನನ್ನ ತಾಯಿಯನ್ನು ಸಲಹಬೇಕು ಎಂದು ಕೇಳಿಕೊಳ್ಳುವಾಗ ಈ ಮಾತು ಬಂದಿದೆ.

8 ಜಗದೊಳುತ್ತರ ಹಾನಿಯಂ ಕಂಡು ಸೈರಿಸುವರುಂಟೆ.

ಆಯ್ಕೆ :ಉಪಮಾಲೋಲ ಕವಿ ಲಕ್ಷ್ಮೀಶ ಬರೆದ ಜೈಮಿನಿ ಭಾರತ ಎಂಬ ಕಾವ್ಯದಿಂದ ಆಯ್ದ ಹಲುಬಿದಳ್ ಕಲ್ಮರಂ ಕರಗುವಂತೆ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ : ಸೀತೆಗೆ ಒದಗಿದ ಕಷ್ಟವನ್ನು (ಸ್ಥಿತಿಯನ್ನು) ನೋಡಿ ಕಾಡಿನಲ್ಲಿದ್ದ ಪಕ್ಷಿ, ಮೃಗ ಹೇಗೆ ಸ್ಪಂದಿಸುತ್ತವೆ ಎನ್ನುವುದನ್ನು ಹೇಳುವಾಗ ಈ ಮಾತು ಬಂದಿದೆ.

ವಿವರಣೆ: ಸೀತೆಗೆ ಎದುರಾದ ಈ ಸ್ಥಿತಿ, ರಾಮ ಅವಳನ್ನು ತ್ಯಜಿಸಿದ ಸಂದರ್ಭ, ಲಕ್ಷ್ಮಣ ಆಕೆಯನ್ನು ಕಾಡಿನಲ್ಲಿ ಬಿಟ್ಟುಹೋಗುವ ಸಂದರ್ಭದಲ್ಲಿ ಅವಳು ಪಡುತ್ತಿರುವ ವೇದನೆ, ಈ ಎಲ್ಲವುಗಳನ್ನು ಜೊತೆಜೊತೆಗೆ ಸೀತೆ ಅನುಭವಿಸುತ್ತಿದ್ದಾಳೆ, ಮರುಗುತ್ತಿದ್ದಾಳೆ. ಸೀತೆಗೆ ಒದಗಿದ ಕಡು ಕಷ್ಟವನ್ನು ನೋಡಿ ಕಾಡಿನಲ್ಲಿದ್ದ ಪಕ್ಷಿಗಳು. ಮೃಗಗಳು ಜಂತುಗಳು ಸೀತೆಯನ್ನು ನೋಡಿ ದುಃಖಿಸುತ್ತಿದ್ದವು. ಮರಗಿಡ ಬಳ್ಳಿಗಳು ಬಾಡಿದವು. ಮೃಗ ಪಕ್ಷಿಗಳು ತಮ್ಮೊಳಗಿನ ವೈರತ್ವವನ್ನು ಮರೆತು. ಆಹಾರ ಸೇವಿಸುವುದನ್ನು ಮರೆತು, ಸೀತೆಯ ದುಃಖದಲ್ಲಿ ಭಾಗಿಯಾದವು. ಈ ಸಂದರ್ಭವನ್ನು ವಿವರಿಸುತ್ತಾ ಕವಿಯು ಜಗತ್ತಿನಲ್ಲಿ ಉತ್ತಮರ ಹಾನಿಯನ್ನು ಕಂಡು ಸೈರಿಸಿ (ಸಹಿಸಿ) ಕೊಳ್ಳುವವರು ಇದ್ದಾರೆಯೆ? ಎಂದಿದ್ದಾರೆ.

9 “ಹಲುಬಿದಳ್ ಕಲ್ಮರಂ ಕರಗುವಂತೆ”

ಆಯ್ಕೆ :ಉಪಮಾಲೋಲ ಕವಿ ಲಕ್ಷ್ಮೀಶ ಬರೆದ ಜೈಮಿನಿ ಭಾರತ ಎಂಬ ಕಾವ್ಯದಿಂದ ಆಯ್ದ ಹಲುಬಿದಳ್ ಕಲ್ಮರಂ ಕರಗುವಂತೆ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ : ಸೀತೆಯು ದುಃಖಿಸುವ ರೀತಿಯನ್ನು ಕವಿ ವಿವರಿಸುವಾಗ ಈ ಮಾತು ಬಂದಿದೆ.

ವಿವರಣೆ : ಸೀತೆಯು ತನಗೆ ಉಂಟಾದ ಸ್ಥಿತಿಯ ಬಗ್ಗೆ ಅಪಾರವಾಗಿ ಮರುಗುತ್ತಾಳೆ. ನಾನು ಜನಕ ಮಹಾರಜನ ಮಗಳು. ಮದುವೆಯ ಬಳಿಕ ರಘುವಂಶದ ದಶರಥನ ಸೊಸೆ. ಇಂತಹ ಶ್ರೇಷ್ಠತೆಯಿರುವ ನಾನು ಈ ಕಾಡಿನಲ್ಲಿ ಒಬ್ಬಂಟಿಯಾಗಿ ಇರಬೇಕಾದ ಸ್ಥಿತಿ ಬಂದೊದಗಿತೆ? ಎಂದು ಕಟ್ಟಡವಿಯಲ್ಲಿ ವ್ಯಥೆ ಪಡುತ್ತಾಳೆ. ದುಃಖಿಸುತ್ತಾಳೆ. ಆ ದುಃಖ ಎಷ್ಟರ ಮಟ್ಟಿಗೆ ಇತ್ತೆಂದರೆ ಕಲ್ಲುಮರವೂ ಕೂಡ ಕರಗುವ ಹಾಗೆ ಎಂದು ಕವಿ ವರ್ಣಿಸುತ್ತಾರೆ.

10. ಜನಕಂಗೆ ನಾವನ್ಯರಲ್ಲ

ಆಯ್ಕೆ : ಉಪಮಾಲೋಲ ಕವಿ ಲಕ್ಷ್ಮೀಶ ಬರೆದ ಜೈಮಿನಿ ಭಾರತ ಎಂಬ ಕಾವ್ಯದಿಂದ ಆಯ್ದ ಹಲುಬಿದಳ ಕಲ್ಮರಂ ಕರಗುವಂತೆ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ : ರಾಮ ಕಾಡಿಗೆ ಕಳುಹಿಸಿದ ನೋವು ಒಂದು ಕಡೆಯಾದರೆ, ಏಕಾಂಗಿಯಾದ ತನಗೆ ಮುಂದಿನ ದಾರಿ ಏನು? ಎಂದು ಸೀತೆಯು ದುಃಖಿಸುವ ಸಂದರ್ಭದಲ್ಲಿ ವಾಲ್ಮೀಕಿ ಮಹರ್ಷಿಗಳು ಎದುರಾಗಿ ಈ ಮಾತನ್ನು ಹೇಳುತ್ತಾರೆ.

ವಿವರಣೆ : ವಾಲ್ಮೀಕಿ ಮಹರ್ಷಿಯು ಯೂಪವನ್ನು (ಯಜ್ಞಪಶುವನ್ನು ಕಟ್ಟುವ ಕಂಬ) ಅರಸುತ್ತಾ ತನ್ನ ಶಿಷ್ಯರೊಂದಿಗೆ ಕಾಡಿಗೆ ಬರುತ್ತಾರೆ. ಆಗ ದಿಕ್ಕು ಕಾಣದೆ ರೋದಿಸುತ್ತಾ ಇದ್ದ ಸೀತೆಯನ್ನು ಕಾಣುತ್ತಾರೆ. ಆಕೆಯನ್ನು ಸಂತೈಸಿ, ವಿಚಾರಿಸುತ್ತಾರೆ. ನಿನ್ನ ತಂದೆಯಾದ ಜನಕನಿಗೆ ನಾವು ಬೇರೆಯವರಲ್ಲ. ಹಾಗಾಗಿ ನೀನು ನಮ್ಮ ಆಶ್ರಮಕ್ಕೆ ಬಂದು ನೆಲೆಸಬೇಕು, ಯಾವುದೇ ಸಂದೇಹ ಬೇಡವೆಂದು ಹೇಳುತ್ತಾರೆ.

I. ಒಂದು ವಾಕ್ಯದಲ್ಲಿ ಉತ್ತರಿಸಿ:

1. ಸೌಮಿತ್ರಿಯು ಸೀತೆಯನ್ನು ಎಲ್ಲಿಗೆ ಕರೆದುಕೊಂಡು ಹೋದನು?

ಸೌಮಿತ್ರಿಯು ಸೀತೆಯನ್ನು ಗಂಗಾನದಿಯ ದಡದಲ್ಲಿರುವ ಘೋರವಾದ ಕಾಡಿಗೆ ಕರೆದುಕೊಂಡು ಹೋದನು.

2. ರಾಮನ ಆಜ್ಞೆ ಏನು?

ರಾಮನ ಆಜ್ಞೆ ‘ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರಬೇಕು’ ಎಂಬುವುದು ಆಜ್ಞೆಯಾಗಿತ್ತು.

3. ಲಕ್ಷ್ಮಣನ ಮಾತು ಕೇಳಿದ ಸೀತೆ ಭೂಮಿಗೆ ಹೇಗೆ ಬಿದ್ದಳು?

ಲಕ್ಷ್ಮಣನ ಮಾತು ಕೇಳಿದ ಸೀತೆ ಬಿರುಗಾಳಿ ಹೊಡೆತಕ್ಕೆ ಸಿಲುಕಿದ ಫಲಿತ ಬಾಳೆಗಿಡ ನೆಲಕ್ಕೆ ಬೀಳುವ ಹಾಗೆ ಭೂಮಿಗೆ ಬಿದ್ದಳು.

4. ಕಾಡಿನಲ್ಲಿ ತನಗೆ ಯಾರ ನೆರವುಂಟೆಂದು ಸೀತೆ ಹೇಳುತ್ತಾಳೆ?

ಕಾಡಿನಲ್ಲಿ ತನಗೆ ಕಾಡಿನಲ್ಲಿ ಕ್ರೂರ ಮೃಗಗಳ ನೆರವುಂಟು ಎಂದು ಹೇಳುತ್ತಾಳೆ.

5. ಸೀತೆ ಯಾರಲ್ಲಿ ತಪ್ಪಿಲ್ಲವೆಂದು ಹೇಳುತ್ತಾಳೆ?

ಸೀತೆ ಕರುಣಾಳುವಾದ ರಾಮನಲ್ಲಿ ತಪ್ಪಿಲ್ಲ ಎಂದು ಹೇಳುತ್ತಾಳೆ.

6 . ಸೀತೆಯು ಲಕ್ಷ್ಮಣನಿಗೆ ಏನೆಂದು ಹಾರೈಸಿ ಬೀಳ್ಕೊಡುತ್ತಾಳೆ?

ಸೀತೆಯು ಲಕ್ಷ ಲಕ್ಷ್ಮಣನಿಗೆ ನೀನು ಹೋಗುವ ದಾರಿಯಲ್ಲಿ ಹೆಜ್ಜೆ-ಹೆಜ್ಜೆಗೆ ಸುಖವಾಗಲಿ ಎಂದು ಹಾರೈಸಿ ಬೀಳ್ಕೊಡುತ್ತಾಳೆ.

7. ಭೂದೇವಿಯ ಮಗಳು ಯಾರು? ಭೂದೇವಿಯ ಮಗಳು ಸೀತೆ.

8. ವಾಲ್ಮೀಕಿ ಏನನ್ನು ಹುಡುಕುತ್ತಾ ವನಕ್ಕೆ ಬಂದನು?

ವಾಲ್ಮೀಕಿ ಯೂಪವನ್ನು ಹುಡುಕುತ್ತಾ ವನಕ್ಕೆ ಬಂದನು.

9. ರಾವಣಾರಿ ಎಂದರೆ ಯಾರು?

ರಾವಣಾರಿಎಂದರೆ ರಾಮ.

10. ಸೀತೆಯನ್ನು ಆಶ್ರಮಕ್ಕೆ ಕರೆತಂದವರು ಯಾರು?

ಸೀತೆಯನ್ನು ಆಶ್ರಮಕ್ಕೆ ಕರೆತಂದವರು ವಾಲ್ಮೀಕಿ ಮಹರ್ಷಿಗಳು.

II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:

1.

ಸೀತೆ ಪ್ರವೇಶಿಸಿದ ಕಾಡು ಹೇಗಿತ್ತು?

ಉಗ್ರವಾದ ಮೃಗಪಕ್ಷಿಗಳಿಂದ ತುಂಬಿದ್ದ ಆ ಕಾಡು ಗಿಡಮರಗಳ ಪೊದೆಯಿಂದ ಕೂಡಿ ಭಯಾನಕವಾಗಿತ್ತು. ಇಂತಹ ಕಾಡಿನಲ್ಲಿ ಹೆಜ್ಜೆ ಇಡಲು ಕಷ್ಟವಾಗುತ್ತಿತು.

2. ಲಕ್ಷ್ಮಣ ದುಃಖಿತನಾಗಲು ಕಾರಣವೇನು?

ತಾಯಿಯ ರೂಪದ ಅತ್ತಿಗೆಯಾದ ಸೀತೆಯನ್ನು ಈ ಘೋರವಾದ ಅರಣ್ಯದಲ್ಲಿ ಏಕಾಂಗಿಯಾಗಿ ಬಿಟ್ಟು ಹೋಗಬೇಕಲ್ಲಾ ಎಂದು ಲಕ್ಷ್ಮಣ ದುಃಖಿತನಾಗುತ್ತಾನೆ.

3. ಮೂರ್ಛಿತಳಾದ ಸೀತೆಯನ್ನು ಲಕ್ಷ್ಮಣ ಹೇಗೆ ಉಪಚರಿಸಿದನು?

ಮೂರ್ಛಿತಳಾದ ಸೀತೆಯನ್ನು ಕಂಡು ಲಕ್ಷ್ಮಣನು ದೊಡ್ಡದೊಂದು ಎಲೆಯನ್ನು ನೆರಳಿಗೆಂದು ಹಿಡಿದು ತನ್ನ ಉತ್ತರೀಯದಿಂದ ಗಾಳಿ ಹಾಕುತ್ತಾ ರಾಮನ ಸೇವೆ ಈ ರೀತಿಯಾಗಿ ಸಂದುದೇ ಎಂದು ಆಕೆಯನ್ನು ಉಪಚರಿಸಿದನು.

4. ಸೀತೆಯು ಸೌಮಿತ್ರಿಯನ್ನು ಹಿಂತಿರುಗಿ ಹೋಗೆಂದು ಏಕೆ ಹೇಳಿದಳು?

ಶ್ರೀರಾಮನು ಏಕಾಂಗಿಯಾಗಿದ್ದಾನೆ. ನೀನು ಹೋಗುವುದು ತಡಮಾಡಿದರೆ ಕೋಪಿಸಿಕೊಳ್ಳಬಹುದು. ಅರಸ ಏನೆ ಹೇಳಲಿ ಸೇವಕನಾದ ನಾವು ಅದನ್ನು ಕೇಳಬೇಕು ಎಂದು ಹೇಳಿದಳು.

5. ಸೀತೆಯನ್ನು ಕಾಡಿನ ಪ್ರಾಣಿಗಳು ಹೇಗೆ ಉಪಚರಿಸಿದವು?

ಕಾಡಿನ ಮೃಗಪಕ್ಷಿಗಳು ಸೀತೆಯ ಕಷ್ಟವನ್ನು ಕಂಡು ಮರುಗಿ ತಮ್ಮೊಳಗಿನ ದ್ವೇಷಭಾವವನ್ನು ಬಿಟ್ಟು ಆಹಾರವನ್ನು ತೊರೆದು ದುಃಖಿಸುತ್ತಿದ್ದವು.ಅವಳ ಸುತ್ತನಿಂತು ಕಣ್ಣೀರು ಹಾಕಿದವು.

ಐದಾರು ವಾಕ್ಯದಲ್ಲಿ ಉತ್ತರಿಸಿ:

1

ಸೀತೆ ಲಕ್ಷ್ಮಣರು ಮಹಾರಣ್ಯ ಪ್ರವೇಶಿಸಿದ ಸನ್ನಿವೇಶವನ್ನು ವಿವರಿಸಿರಿ.

ಸೀತೆ ಮತ್ತು ಲಕ್ಷ್ಮಣರು ಅಯೋಧ್ಯೆಯಿಂದ ಹೊರಟು ಗಂಗಾನದೀ ತೀರದಲ್ಲಿ ರಥದಿಂದ ಇಳಿದರು.ಇಬ್ಬರೂ ಮೊದಲಿಗೆ ಗಂಗಾನದಿಗೆ ನಮಸ್ಕರಿಸಿದರು. ಗಂಗೆಯಲ್ಲಿ ಮಿಂದು, ನಾವಿಕರ ನೆರವಿನಿಂದ ದೋಣಿಯಲ್ಲಿ ಗಂಗೆಯನ್ನು ದಾಟಿ ಘೋರ ಅರಣ್ಯವನ್ನು ಪ್ರವೇಶಿಸಿದರು.ಅರಣ್ಯವು ಉಗ್ರ ಮೃಗ ಪಕ್ಷಿಗಳ ಸಮೂಹದಿಂದ, ಅದರ ನಾದದಿಂದ ಗರ್ಜಿಸುತ್ತಿದೆ.ಕಾಲಿಡಲು ರಿಡಲು ಸಾಧ್ಯವಿಲ್ಲವೆಂಬ ಪೊದೆಗಳ ಕರ್ಕಶವಾದ ಹಾದಿಯಲ್ಲಿ ಅವರು ಮುಂದುವರಿದರು.ಆ ಭಯಂಕರವಾದ ಅರಣ್ಯವು ಜಾನಕಿಗೆ ಹಲವು ಬಗೆಯ ಭ್ರಮೆಯನ್ನು ಮೂಡಿಸಿತು. ಆಶ್ರಮಗಳು ಅವಳ ಕಣ್ಣಿಗೆ ಬೀಳಲಿಲ್ಲ. ಇದರಿಂದ ಕಂಗಾಲಾದಳು.ಈ ರೀತಿ ಸೀತೆ ಲಕ್ಷ್ಮಣರು ಮಹಾ ಅರಣ್ಯವನ್ನು ಪ್ರವೇಶಿಸಿದರು.

2 ಕಾಡಿನಲ್ಲಿ ಜಾನಕಿ ಏನೇನು ಕಾಣಲು ಬಯಸಿದಳು?

ಭಯಾನಕವಾದ, ದಟ್ಟವಾದ ಕಾಡಿಗೆ ಪ್ರವೇಶಿಸಿದ ಜಾನಕಿಗೆ ಭಯ, ಆತಂಕದಿಂದ ದಾರಿ ಕಾಣದಾದಳು. ಆಕೆ ಅಂದು ಕೊಂಡದ್ದು ಋಷಿಮುನಿಗಳ ಆಶ್ರಮಕ್ಕೆ ಭೇಟಿ ನೀಡಬೇಕು ಎಂದು.ಉತ್ತಮವಾದ ಮುನಿಗಳ ಪವಿತ್ರವಾದ ವನಗಳನ್ನು ಅವಳು ನಿರೀಕ್ಷಿಸಿದ್ದಳು.ಸಿದ್ಧರ ಆಶ್ರಮ ಮಂಗಳಕರವಾದ ಸ್ಥಳಗಳನ್ನು, ಹವಿಸ್ಸಿನ ಕಂಪು ಬೀರುವ ಹೊಗೆಯನ್ನು ಯಜ್ಞ, ಯಾಗ, ಹೋಮಾದಿಗಳನ್ನು ನಿರೀಕ್ಷಿಸುತ್ತಿದ್ದಳು. ಋಷಿಗಳು ವಾಸಮಾಡುವ ಕುಟೀರಗಳಿಂದ ಹೊರಹೊಮ್ಮುವ ವೇದಶಾಸ್ತ್ರ ಪಾರಾಯಣದ ಧ್ವನಿಗಳನ್ನು ಜಾನಕಿಯು ಬಯಸಿದ್ದಳು. ಇದಾವುದೂ ಇಲ್ಲದ ದಟ್ಟವಾದ ಅರಣ್ಯವನ್ನು ನೋಡಿ ಜಾನಕಿ ನಿರಾಶಳಾದಳು.

3 ಸೀತೆಯನ್ನು ಕಾಡಿನಲ್ಲಿ ಬಿಡಲು ಬಂದ ಲಕ್ಷ್ಮಣನ ಬೇಗುದಿ ಹೇಗಿತ್ತು ?

ಶ್ರೀರಾಮನ ಆಜ್ಞೆಯನ್ನು ಮೀರಲಾರದೆ ಸೀತೆಯನ್ನು ಕಾಡಿನಲ್ಲಿ ಬಿಟ್ಟುಹೋಗಲು ಬಂದ ಲಕ್ಷ್ಮಣನಿಗೆ ಆತೀವ ದುಃಖವಾಯಿತು. ಆ ದುಃಖವನ್ನೆಲ್ಲ ಆತ ನುಂಗಿಕೊಂಡಿದ್ದನು. ಒಂದು ವೇಳೆ ಸೀತೆಯನ್ನು ಬಿಡದಿದ್ದರೆ ರಾಮನ ಆಜ್ಞೆ ಮೀರಿದ ಹಾಗಾಗಬಹುದು. ಬಿಟ್ಟರೆ ಸೀತೆಗೆ ನೋವಾಗಬಹುದು. ಎನ್ನುವ ಆಲೋಚನೆ ಅವನದು. ರಾಮನು ಸೀತೆಯನ್ನು ಬಿಟ್ಟ ವಿಷಯ ತಿಳಿಸಿದರೆ ಸೀತೆಯ ಸ್ಥಿತಿ ಹೇಗಾಗಬಹುದು. ಮತ್ತು ಆ ವಿಷಯವನ್ನು ಹೇಗೆ ತಿಳಿಸುವುದು ಎಂದು ಪೇಚಾಡುತ್ತಾನೆ. ಸೀತೆಯನ್ನು ಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಹೋಗುವುದು ಹೇಗೆ ?ಅಂತೂ ವಿಷಯವನ್ನು ತಿಳಿಸಿದಾಗ ಸೀತೆ ಪ್ರಜ್ಞೆ ತಪ್ಪುತ್ತಾಳೆ. ಆಗ ಲಕ್ಷ್ಮಣ ಅಳುತ್ತಲೇ ಆಕೆಯನ್ನು ಉಪಚರಿಸುತ್ತಾನೆ. ಬಿಟ್ಟು ಹೋಗುವ ಸಂದರ್ಭದಲ್ಲಿ ಇಡೀ ಪರಿಸರದಲ್ಲಿರುವ ಪ್ರಾಣಿ, ಪಕ್ಷಿ, ತರು-ಲತೆ, ದಿಕ್ಕಿನ ದೇವತೆ, ಪಂಚಭೂತ, ನೆಲತಾಯಿ (ಭೂಮಿ ತಾಯಿ)ಯಲ್ಲಿ ಹೇಳಿ ಹೋಗುತ್ತಾನೆ. ಈಕೆಯನ್ನು ನೋಡಿಕೊಳ್ಳಿರೆಂದು.

4 ರಾಮನ ಆಜ್ಞೆಯನ್ನು ಲಕ್ಷ್ಮಣನು ಸೀತೆಗೆ ಹೇಗೆ ತಿಳಿಸಿದ ?

ಸೀತೆಯು ಋಷಿಮುನಿಗಳ ಆಶ್ರಮ, ಅವನ್ನು ನೋಡುವ ಇಚ್ಛೆಯವಳಾಗಿದ್ದಳು. ಆದರೆ ಲಕ್ಷ್ಮಣ ಆಕೆಯನ್ನು ಕರೆದುಕೊಂಡು ಬಂದದ್ದು ದಟ್ಟವಾದ ಅರಣ್ಯಕ್ಕೆ. ಆಕೆ ಕೇಳುತ್ತಾಳೆ; ಏಕಾಗಿ ನನ್ನನ್ನು ಈ ದಟ್ಟವಾದ ಅರಣ್ಯಕ್ಕೆ ಕರೆದುಕೊಂಡು ಬಂದಿದ್ದೀಯ. ಆಗ ಲಕ್ಷ್ಮಣನು ಶ್ರೀರಾಮನ ಇಚ್ಛೆಯನ್ನು ಸೀತೆಗೆ ತಿಳಿಸುತ್ತಾನೆ. ಶ್ರೀರಾಮನನ್ನು ಒಂದು ಅಪವಾದವು ಆವರಿಸಿರಲು ನಿನ್ನನ್ನು ಪರಿತ್ಯಜಿಸಿದ್ದಾನೆ. ಅವನ ಆಜ್ಞೆಯಂತೆ ನಿನ್ನನ್ನು ಕಾಡಿಗೆ ಕರೆದುತಂದು ಬಿಟ್ಟಿದ್ದೇನೆ. ರಾಜನ ಆಜ್ಞೆಯನ್ನು ಮೀರದೆ ನಾನು ಈ ಕಾರ್ಯಕ್ಕೆ ಮುಂದಾದೆ ಎನ್ನುತ್ತಾನೆ. ಹೀಗೆ ರಾಮನ ಆಜ್ಞೆಯನ್ನು ಲಕ್ಷ್ಮಣನು ಸೀತೆಗೆ ತಿಳಿಸಿದ.

5. ಸೀತೆ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಹೇಗೆ ದುಃಖಿಸುತ್ತಾಳೆ?

ರಾಮನು ವಿಶ್ವಾಮಿತ್ರರೊಡನೆ ಮಿಥಿಲಾಪುರಕ್ಕೆ ಬಂದು ಅಲ್ಲಿ ಜನಕನು ಏರ್ಪಡಿಸಿದ್ದ ಸ್ಪರ್ಧೆಯಾದ ಹರಧನಸ್ಸನ್ನು (ಶಿವಧನಸ್ಸು) ಮುರಿದು, ತನ್ನನ್ನು ಮದುವೆಯಾದ. ನಂತರದಲ್ಲಿ ನಾವು ಸುಖವಾಗಿದ್ದೆವು. ರಾವಣನು ನನ್ನನ್ನು ಹೊತ್ತೊಯ್ದಾಗ, ಕಪಿಸೈನ್ಯವನ್ನು ಕಳಿಸಿಕೊಟ್ಟು, ಲಂಕೆಗೆ ಸೇತುವೆ ಕಟ್ಟಿ, ರಾಕ್ಷಸರೊಡನೆ ಹೋರಾಡಿ ನನ್ನನ್ನು ಕಾಪಾಡಿದ್ದ. ಆ ನಂತರದಲ್ಲಿ ನನ್ನನ್ನು ಅಗ್ನಿಪರೀಕ್ಷೆಗೆ ಒಡ್ಡಿ ಪರೀಕ್ಷಿಸಿದ್ದು. ಹೀಗೆ ಈ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾಳೆ. ಮೊದಲು ಈ ರೀತಿ ಇಚ್ಛೆಪಟ್ಟು ನನ್ನನ್ನು ಮದುವೆಯಾದದ್ದು, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದುದನ್ನು ಮರೆತು ಯಾವ ಕಾರಣಕ್ಕಾಗಿ ನನ್ನನ್ನು ಈ ರೀತಿ ಕಾಡುಪಾಲು ದೂಡಿದನೆಂದು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಯೋಚಿಸುತ್ತಾಳೆ.

ಕಾಡಿನಲ್ಲಿ ಸೀತೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಲಕ್ಷ್ಮಣನು ಯಾರಿಗೆ ಹೇಗೆ ವಹಿಸುತ್ತಾನೆ?

ರಾಮ ತನ್ನನ್ನು ತ್ಯಜಿಸಿದನೆಂದು ತಿಳಿದ ಸೀತೆ, ಚೇತರಿಸಿಕೊಂಡು ಲಕ್ಷ್ಮಣನಲ್ಲಿ ಆಯೋಧ್ಯೆಗೆ ಹಿಂದಿರುಗು ಎನ್ನುತ್ತಾಳೆ. ಆಗ ಲಕ್ಷ್ಮಣ ಕಾಡಿನಲ್ಲಿರುವ ಪ್ರತಿಯೊಂದು ಶಕ್ತಿಗಳಲ್ಲಿಯೂ ಸೀತೆಯನ್ನು ಕಾಪಾಡಬೇಕು ಎಂದು ಬೇಡಿಕೊಳ್ಳುತ್ತಾನೆ. ಅರಣ್ಯವನ್ನು, ಕಾಡಿನಲ್ಲಿರುವ ಮರಗಳಲ್ಲಿ ಬೇಡಿಕೊಳ್ಳುತ್ತಾನೆ. ಕ್ರಿಮಿಕೀಟಗಳಲ್ಲಿ, ಪಕ್ಷಿಗಳಲ್ಲಿ, ಗಿಡಮರಬಳ್ಳಿಗಳಲ್ಲಿ, ಪ್ರಾರ್ಥಿಸಿ ನನ್ನ ತಾಯಿಯನ್ನು ರಕ್ಷಿಸಬೇಕು ಎನ್ನುತ್ತಾನೆ. ಹುಲ್ಲಿನ ಪೊದೆಗಳನ್ನು ಕೇಳಿಕೊಳ್ಳುತ್ತಾನೆ. ಕೇಳಿಕೊಳ್ಳುತ್ತಾನೆ. ಪಂಚಭೂತಗಳಲ್ಲಿ (ಆಕಾಶ, ಭೂಮಿ, ನೀರು, ಗಾಳಿ, ಅಗ್ನಿ) ಬೇಡುತ್ತಾನೆ. ದಿಕ್ಕಿನ ದೇವತೆಗಳನ್ನು ಪ್ರಾರ್ಥಿಸಿಕೊಳ್ಳುತ್ತಾನೆ. ಧರ್ಮ ದೇವತೆಯನ್ನು ಬೇಡಿಕೊಳ್ಳುತ್ತಾನೆ. ಜಗನ್ ಮಾತೆ ಎನಿಸಿರುವ ಗಂಗಾದೇವಿಯನ್ನು ಹಾಗೂ ಸೀತೆಯ ತಾಯಿ ಭೂದೇವಿಯನ್ನು ಕುರಿತು ತನ್ನ ತಾಯಿಯಾದ ಜಾನಕಿಯನ್ನು ಸಲಹಬೇಕೆನ್ನುತ್ತಾನೆ. ಸೀತೆಯನ್ನು ನಿಮ್ಮ ಮಗಳಂತೆ ಕಾಪಾಡಬೇಕು ಎಂದು ಕೈ ಮುಗಿದು ಪ್ರಾರ್ಥಿಸುತ್ತಾನೆ.

7 ಸೀತೆ ಕಲ್ಮರಂ ಕರಗುವಂತೆ ದುಃಖಿಸಿದ ಪರಿಯನ್ನು ವಿವರಿಸಿರಿ.

ಲಕ್ಷ್ಮಣನು ತಾಯಿಯನ್ನು ಸಲಹಬೇಕೆಂದು ಪ್ರಕೃತಿಗೆ ಪ್ರಾರ್ಥಿಸಿ ಮುಂದೆ ನಡೆದನು. ಸೀತೆ ಏಕಾಂಗಿಯಾಗಿ ಕಾಡಿನಲ್ಲಿ ದುಃಖಿಸುತ್ತಿದ್ದಳು. ಮುಂದಿನ ದಾರಿ ಕಾಣದೆ ದಿಕ್ಕೆಟ್ಟವಳಾಗಿ ಮರುಗುತ್ತಾಳೆ. ಭೂಮಿಯ ಮಗಳಾದ ಸೀತೆ ಬಳಿಕ ಚೇತರಿಸಿಕೊಂಡು ತನಗಿನ್ನು ದಾರಿಯಾವುದೆಂದು ಚಿಂತಿಸುತ್ತಾಳೆ. ನಾನು ಮುಂದೆ ಎಲ್ಲಿಗೆ ಹೋಗಬೇಕು, ಎಂದು ದಿಕ್ಕು ದಿಕ್ಕುಗಳನ್ನು ನೋಡಿ, ದಿಕ್ಕು ತೋಚದಾದಳು. ಅವಳ ದೇಹದ ಭಾಗವೆಲ್ಲವೂ ಶಿಥಿಲವಾಗಿತ್ತು. ಮೈ ತುಂಬಾ ಧೂಳು ಮೆತ್ತಿಕೊಂಡಿತ್ತು. ತಲೆಕೂದಲು ಬಿಚ್ಚಿದ ಸ್ಥಿತಿಯಲ್ಲಿದ್ದು ಆ ವಿಕೃತಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ರೋದಿಸತೊಡಗಿದಳು. ಮಿಥಿಲೆಯ ಜನಕರಾಜನ ವಂಶದಲ್ಲಿ ಮಗಳಾಗಿ ಜನಿಸಿದವಳು ನಾನು. ಈ ಕತೆ ರಘುವಂಶದ ದಶರಥನ ಮಗನಿಗೆ ಹೆಂಡತಿಯಾಗಿ ಹೋದವಳು. ಅಲ್ಲಿನ ಸೊಸೆ ಈ ಶ್ರೇಷ್ಠತೆ ಒಂದು ಕಡೆಯಾದರೆ, ಆ ಶ್ರೇಷ್ಠತೆಯನ್ನು ಹೊಂದಿಯೂ ಇಂತಹ ದಟ್ಟ ಅಡವಿಯಲ್ಲಿ ವ್ಯಥೆ ಪಡುವಂತಾಯಿತೇ?ಎಂದು ಹಲುಬುತ್ತಾಳೆ. ಈ ದುಃಖಕ್ಕೆ ಸ್ಪಂದಿಸುವ ಹಾಗೆ ಕಲ್ಲು ಮರವೂ ಕರಗುವಂತೆ ಸೀತೆ ದುಃಖಿಸಿದಳು ಎಂದು ಕವಿ ವರ್ಣಿಸಿದ್ದಾನೆ.

8 ವಾಲ್ಮೀಕಿ ಸೀತೆಯನ್ನು ಹೇಗೆ ಸಂತೈಸುತ್ತಾನೆ?

ಇತ್ತ ಲಕ್ಷ್ಮಣನು ರಾಮನ ಆಜ್ಞೆಯ ಮೇರೆಗೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ. ದುಃಖದಲ್ಲಿದ್ದ ಸೀತೆ ಏಕಾಂಗಿಯಾಗಿ ಮುಂದಿನ ದಾರಿ ಕಾಣದೆ ಕಂಗೆಟ್ಟಿರುತ್ತಾಳೆ. ಈ ಸಮಯದಲ್ಲಿ ಅಲ್ಲಿಗೆ ತಮ್ಮ ಶಿಷ್ಯರೊಡಗೂಡಿ ಬಂದ ವಾಲ್ಮೀಕಿ ಮಹರ್ಷಿಗಳು ಸೀತೆಯನ್ನು ಕಾಣುತ್ತಾರೆ. ಅವರು ಯಜ್ಞಕ್ಕೆ ಯೂಪವನ್ನು (ಯಜ್ಞ ಪಶುವನ್ನು ಕಟ್ಟುವ ಕಂಬ) ಅರಸುತ್ತಾ ಬಂದಿದ್ದರು. ಸೀತೆಯು ದುಃಖದಿಂದ ದಿಕ್ಕುತೋಚದೆ ಗ್ರೀಷ್ಮಋತುವಿನ ಆ ಸಮಯದಲ್ಲಿ ನೊಂದಿರುವ ಸೀತೆಯನ್ನು ಸಂತೈಸುತ್ತಾರೆ. ದೇವಿ, ಶೋಕಿಸಬೇಡ, ನೀನು ಅವಳಿ ಮಕ್ಕಳನ್ನು ಪಡೆಯಲಿರುವೆ. ಇನ್ನು ಸಂದೇಹವನ್ನು ವ್ಯಕ್ತಪಡಿಸಬೇಡ. ನಾನು ಜನಕ ಮಹಾರಾಜನಿಗೆ ಅನ್ಯರಲ್ಲ ಪರಿಚಿತರು. ನೀನು ನಮ್ಮ ಆಶ್ರಮಕ್ಕೆ ಬಂದು ಸುಖವಾಗಿರು. ಅಲ್ಲಿ ನಿನ್ನ ಎಲ್ಲ ಬಯಕೆಗಳನ್ನು ನೆರವೇರಿಸಿ ನೋಡಿಕೊಳ್ಳುತ್ತೇವೆ. ನಾವು ರಕ್ಷಿಸುತ್ತೇವೆ ಹೆದರದಿರು ಎಂದು ಸಂತೈಸಿ, ಸಮಾಧಾನ ಪಡಿಸುತ್ತಾರೆ.

9. ಕರುಣಾಳು ರಾಘವನಲ್ಲಿ ತಪ್ಪಿಲ್ಲ ಎಂಬ ಸೀತೆಯ ನಿಲುವನ್ನು ವಿಶ್ಲೇಷಿಸಿ.

ಶ್ರೀ ರಾಮ ಲೋಕ ಅಪವಾದಕ್ಕೆ ಹೆದರಿ ಸೀತೆಯನ್ನು ಕಾಡಿಗೆ ಕಳುಹಿಸಿದನು. ಇದನ್ನು ಲಕ್ಷ್ಮಣನಿಂದ ತಿಳಿದ ಸೀತೆ ಸುದಾರಿಸಿಕೊಂಡು ಮತ್ತೆ ಮಾತನಾಡುತ್ತಾಳೆ. ಇದರಲ್ಲಿ ಕರುಣಾಳುವಾದಂತಹ ರಾಮನ ತಪ್ಪಿಲ್ಲ. ಕಡುಪಾಪವನ್ನು ಮಾಡಿ ಹೆಣ್ಣಾಗಿ ಜನಿಸಿದ್ದೇ ನನ್ನ ತಪ್ಪು. ನನ್ನನ್ನು ಅಷ್ಟು ಪ್ರೀತಿಸುತ್ತಿದ್ದ ಶ್ರೀರಾಮ ಅಪವಾದ ಬಂದಾಗ ಈ ಕೆಲಸ ಮಾಡಿರಬಹುದು. ನಾನು ಹಿಂದೆ ಯಾವ ತಪ್ಪನ್ನು ಎಸಗಿದ್ದೆನೋ. ಅದರ ಫಲವಾಗಿ ಈ ಸ್ಥಿತಿ ಬಂದಿರಬಹುದು ಎಂದುಕೊಳ್ಳುತ್ತಾಳೆ. ಪ್ರಸ್ತುತ ವಿಚಾರಗಳಿಗೆ ಹೋಲಿಸಿದರೆ ಇಲ್ಲಿ ಹೆಣ್ಣಾದವಳು ಪುರುಷನನ್ನು ಅನುಸರಿಸುವುದು ಮಾತ್ರ. ಪುರುಷನ ನಿರ್ಧಾರವನ್ನು ಪ್ರಶ್ನಿಸುವುದಕ್ಕೆ ಬದಲಾಗಿ ನನ್ನ ಸ್ಥಿತಿಯೇ ಹೀಗೆ. ಹೆಣ್ಣಾಗಿ ಹುಟ್ಟಿದ್ದೇ ನನ್ನ ತಪ್ಪು ಎನ್ನುವವರೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ ಎಂಬ ಸೀತೆಯ ನಿಲುವು ವ್ಯಕ್ತವಾಗುತ್ತದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment