Janapada: ಜಾನಪದದಲ್ಲಿ ದೆವ್ವ- ಲೇಖನ

Janapada: ಜಾನಪದದಲ್ಲಿ ದೆವ್ವ- ಲೇಖನ

ದೆವ್ವJanapada : ಈಗಾಗಲೇ ನಮ್ಮಲ್ಲಿ ನಗರ ಜಾನಪದ, ಸಸ್ಯ ಜಾನಪದ, ಪ್ರಾಣಿ ಜಾನಪದ, ಖನಿಜ ಜಾನಪದ, ಕಡಲು ಜಾನಪದ, ಕೃಷಿ ಜಾನಪದ, ಆಕಾಶ ಜಾನಪದ ಇತ್ಯಾದಿ ಹೊಸ ಹೊಸ ಅಧ್ಯಯನಗಳು ಪಾಶ್ಚಾತ್ಯ ಸಿದ್ಧಾಂತಗಳ ನೆಲೆಯಲ್ಲಿ ಚರ್ಚೆಗೊಳಗಾಗಿವೆ.

ಈಗ ಜಾನಪದ ಪರಿಷತ್ತು ತನ್ನ ‘ ಜಾನಪದ ಜಗತ್ತು’ ಪತ್ರಿಕೆಯ ಮೂಲಕ ‘ದೆವ್ವಜಾನಪದ’ವನ್ನು ಸೈದ್ಧಾಂತಿಕ ಅಧ್ಯಯನಕ್ಕೊಳಪಡಿಸಲು ಮುಂದಾದುದು ದೆವ್ವ ಜಾನಪದದ ಇನ್ನೊಂದು ಅಧ್ಯಯನ ಶಾಖೆಯನ್ನು ತೆರೆದುತೋರುವ ನೂತನ ಯೋಜನೆ. ದೆವ್ವನ ಬಗೆಗೆ ನಮ್ಮ ಜನರಲ್ಲಿ ಪ್ರಚಲಿತವಿರುವ ತಿಳಿವಳಿಕೆ, ನಂಬಿಕೆ, ಸಂಪ್ರದಾಯ, ಆಚರಣೆಗಳನ್ನರಿಯಲು ತುಂಬ ಕೆಲಸ ನಡೆಯಬೇಕಿದೆ. ದೆವ್ವನ ಪರಿಕಲ್ಪನೆ ಮಾನವ ಸಂಸ್ಕೃತಿಗೇ ಸಂಬಂಧಪಟ್ಟುದು.

ಜನಪದ ಸಮಾಜ ಸಂಪ್ರದಾಯಬದ್ಧವಾದುದು. ಇದು ಹಳೆಯದನ್ನೇ ಅಪ್ಪಿದ, ಹೊಸದನ್ನು ಬೇಗ ಒಪ್ಪಿಕೊಳ್ಳಲಾರದ ಮನೋಧರ್ಮದ್ದು. ದೆಪ್ಪಿನ ವಿಚಾರದಲ್ಲಿಯೂ ಇದು ಸತ್ಯ. ‘ದೆವ್ವ’ ಕುರಿತ ಜಾನಪದರ ಕಲ್ಪನೆಯೇ ವಿಶಿಷ್ಟವಾದುದು, ಕುತೂಹಲಕಾರಿಯಾದುದು. ಜನಪದ ಸಂಸ್ಕೃತಿಯಲ್ಲಿ ದೇವರಿಗೆ ಎಷ್ಟು ಬೆಲೆಯೋ, ಅಷ್ಟೇ ಬೆಲೆ ದೆವಿಗೂ ಇದೆ.

ಆದುದರಿಂದ ದೆವ್ವ ಜಾನಪದ ಅಧ್ಯಯನ ಗಮನಾರ್ಹವೆನಿಸುತ್ತದೆ. ದೆವ್ವ ಜಾನಪದಕ್ಕೆ ಸಾಂಸ್ಕೃತಿಕ ಮಹತ್ವವಿದೆ. ಜನಪದ ಬದುಕು ಮತ್ತು ಸಂಸ್ಕೃತಿಗಳ ವಿವಿಧ ಮಗ್ಗುಲಗಳನ್ನು ಅರಿಯಲು ಈ ಅಧ್ಯಯನ ಸಹಾಯಕ; ಇದರಿಂದ ಜನಪದರ ಭಾವನಾತ್ಮಕ ಸಂಬಂಧ ಎಂಥದು !ಎಂಬುದರ ಕಲ್ಪನೆಯೂ ಮೂಡುತ್ತದೆ.

ದೆವ್ವ – ಭೂತ – ಪ್ರೇತಗಳ ಬಗೆಗೆ ಭಾರತೀಯ ಜನಪದ ಜನಾಂಗ ಆದಿಯಿಂದಲೂ ನಂಬಿಕೆಯನ್ನಿರಿಸಿಕೊಂಡು ಬಂದಿದೆ. ಆದಿಮಾನವ ನಿಸರ್ಗದ ಪ್ರಕೋಪಕ್ಕೆ ಭಯಪಟ್ಟಿದ್ದಾನೆ. ಸೋಜಿಗಪಟ್ಟಿದ್ದಾನೆ. ಸೃಷ್ಟಿಯ ಅಗೋಚರ ಶಕ್ತಿಗಳಲ್ಲಿ ದೈವೀ ಭಾವನೆಯನ್ನಿರಿಸಿದ್ದಾನೆ. ಆ ಔರಣದಿಂದ ಅವನ್ನು ನಾನಾ ರೀತಿಯಲ್ಲಿ ಆರಾಧಿಸಿದ್ದಾನೆ. ದುಷ್ಟ ಶಕ್ತಿಯನ್ನೂ ಅದು ಕೊಡುವ ಬಾಧೆಗೆ ಹೆದರಿ ಆರಾಧಿಸಿದ್ದಾನೆ. ಕೆಲವು ಸಂದರ್ಭಗಳಲ್ಲಿ ದುಷ್ಟಶಕ್ತಿಯನ್ನು ಅಣಕಿಸಿದ್ದಾನೆ.

ಇಂಥ ದುಷ್ಟಶಕ್ತಿಗಳಲ್ಲಿ ‘ದೆವ್ವ’ವೂ ಒಂದು. ಅವನ ದೃಷ್ಟಿಯಲ್ಲಿ ದೆವ್ವ – ಭೂತ – ಪಿಶಾಚಿ ಪ್ರೇತವೆಂದರೆ ಕೇವಲ ಎಲುಬಿನ ಹಂದರವುಳ್ಳ ಮನುಷ್ಯಾಕಾರದ ಸುಡುಗಾಡದಲ್ಲಿ ವಾಸವಾಗಿರುವ ದೈತ್ಯಜೀವಿ. ಇದು ಬದುಕಿರುವಾಗ ಈಡೇರಿಸಿಕೊಳ್ಳಲಾಗದ ಎಷ್ಟೋ ಆಸೆಗಳನ್ನು ಅಕಾಲಮರಣಕ್ಕೀಡಾಗಿ ಸ್ವರ್ಗ /ನರಕಕ್ಕೆ ಹೋಗಲಾರದೆ ಭೂಮಿಯಲ್ಲಿಯೇ ಕಣ್ಣಿಗೆ ಕಾಣಲಾರದೆ ಇದ್ದು, ಬದುಕಿರುವವರನ್ನು ಕಾಡಿಬೇಡಿ ತೀರಿಸಿಕೊಳ್ಳುವುದು.

ತನ್ನಾಸೆಯನ್ನು ಈಡೇರಿಸಿಕೊಳ್ಳುವುದೆಂದರೆ ಬದುಕಿರುವವರನ್ನು ನಾನಾ ಬಗೆಯಾಗಿ ಹಿಂಸಿಸುವುದು. ಆ ಹಿಂಸೆಯಲ್ಲಿ ನೋಯುವುದನ್ನು, ನರಳುವುದನ್ನು ಕಂಡು ತಾನು ಅಟ್ಟಹಾಸಪಡುವುದು, ಸಂತೋಷ ಪಡುವುದು… ಎಂದೆಲ್ಲ ಜಾನಪದರಲ್ಲಿರುವ ನಂಬಿಕೆಯೇ ದೆವ್ವ’ಗಳು ಇರುವುದನ್ನು ಸ್ಥಾಪಿಸುತ್ತದೆ.

ಹರೆಯದ ಹುಡುಗ/ಹುಡುಗಿ ಕೆರೆ, ಹೊಳೆ, ಬಾವಿಗೆ ಬಿದ್ದು ಸತ್ತರೆ, ಉರುಲು ಹಾಕಿಕೊಂಡು ಸತ್ತರೆ, ವಿಷ ಸೇವಿಸಿ ಮರಣಿಸಿದರೆ, ಅಪಘಾತದಲ್ಲಿ ಮಡಿದರೆ, ಹಾವು ಕಡಿದು ತೀರಿದರೆ, ಗಿಡದ ಮೇಲಿಂದ ಬಿದ್ದು ಸತ್ತರೆ, ಆಯುಸ್ಸು ತುಂಬುವ ಮೊದಲೇ ಅಸುನೀಗಿದರೆ, ಖಂಡಿತವಾಗಿಯು ‘ದೆವ್ವ’ ಗಳಾಗುವರು. ಮದುವೆಯಾಗದೆ ಮಡಿದವರಂತೂ ನಿಶ್ಚಿತವಾಗಿಯೂ ದೆವ್ವವಾಗುವರು. ಹರೆಯದ ಹುಡುಗಿ ತೀರಿಹೋದರೆ ‘ಮೋಹಿನಿ’ಯಾಗಿ ಕಾಡುವಳೆಂದು ನಂಬಿಕೆ ಇದೆ.

‘ದೆವ್ವ’ ಇದೊಂದು ಅಮೂರ್ತ ಕಲ್ಪನೆ. ಹೀಗಿದ್ದರೂ ಅದನ್ನು ಕೇವಲ ಎಲುಬುಳ್ಳ ಮನುಷ್ಯಾಕಾರದಲ್ಲಿ, ಬೆಕ್ಕು, ನಾಯಿ, ಹಂದಿಗಳ ರೂಪದಲ್ಲಿ ಕಂಡಿದ್ದೇವೆಂದು ಹೇಳುವವರಿದ್ದಾರೆ. ಅವು ರಾತ್ರಿ ಕಾಣಿಸಿಕೊಳ್ಳುತ್ತವಂತೆ. ನಾಲಿಗೆ ತೆರೆದುಕೊಂಡು, ಕೈಯಲ್ಲಿ ಪಂಜು ಹಿಡಿದು, ಕುಣಿಯುತ್ತ ‘ಕಟ್ ಕಟ್’ ಸದ್ದು ಮಾಡುತ್ತ ಸುಡುಗಾಡದಲ್ಲಿ ತಿರುಗುತ್ತಿರುತ್ತವಂತೆ. ಅಂಥವನ್ನು ‘ಕೊಳ್ಳಿದೆವ್ವ’ ಎಂತಲೂ ಕರೆಯುವರು. ಕೆದರಿದ ತಲೆ, ಚೂಪಾದ ಕೋರೆದಾಡೆಗಳಿಂದ ಕೂಡಿ ಹುಬ್ಬುಗಂಟಿಕ್ಕಿ ಕೊಂಡಿರುತ್ತವಂತೆ; ಮನುಷ್ಯರ ದಾರಿಯಲ್ಲಿ ನಡೆಯುವುದಿಲ್ಲವಂತೆ. ಅಡ್ಡಡ್ಡಾಗಿ ಚಲಿಸುತ್ತವಂತೆ; ಅವುಗಳ ಪಾದಗಳು ಹಿಂದು ಮುಂದಾಗಿರುತ್ತವಂತೆ. ಹೀಗೆ, ನಾನಾ ಕಲ್ಪನೆಗಳನ್ನು ದೆವ್ವನ ಬಗೆಗೆ ಜಾನಪದರು ಇಟ್ಟುಕೊಂಡಿದ್ದಾರೆ.

ಇದ್ದಕ್ಕಿದ್ದಂತೆ ಮನೆ ಮೇಲೆ ಕಲ್ಲು ಬೀಳುವುದು, ಮರದ ಮೇಲಿನಿಂದ ನರಳಿದ ಧ್ವನಿ ಕೇಳುವುದು, ರಾತ್ರಿ ಸಮಯದಲ್ಲಿ ಪರಿಚಿತ ಧ್ವನಿಯಂತೆ ಕೂಗುವುದು, ಇದ್ದುದಿದ್ದಂತೆ ಉರಿಹತ್ತಿಕೊಳ್ಳುವುದು, ನಾಯಿಯಂತೆ ಬೊಗಳುವುದು, ನೆಲಗುಮ್ಮನಂತ ಒದರುವುದು, ಹಂದಿಯಂತೆ ಕಿರಿಚುವುದು, ಗೂಗೆಯಂತೆ ಧ್ವನಿಗೈಯುವುದು… ಇವೆಲ್ಲ ದೆವಿನ ಚರೈಗಳೆನ್ನುವರು. ಇದರಿಂದ ಜನ ಭಯ ಪೀಡಿತರಾಗುವರು. ಚಿಕ್ಕಮಕ್ಕಳಂತೂ ರಾತ್ರಿ ಹೊತ್ತು ಮನೆಯಿಂದ ಹೊರಬರಲಾರರು.

‘ದೆವ್ವ’ದ ಪೀಡೆ ತೊಲಗಿಸಲು ಮುಗ್ಧಜನ, ಅದಕ್ಕೆ ಪೂಜೆ ಸಲ್ಲಿಸಿದೆ, ಬಲಿ ಕೂಡ ಕೊಡುತ್ತ ಬಂದಿದೆ; ಭೂತಗಳನ್ನು ನಾನಾ ಬಗೆಯಾಗಿ ಆರಾಧಿಸಿದೆ. ಈ ‘ಭೂತಾರಾಧನೆ’ ಪ್ರಪಂಚದಲ್ಲೆಲ್ಲ ಇದೆ. ದ.ಕ.ಜಿಲ್ಲೆಯ ಸಾಂಪ್ರದಾಯಿಕ ‘ಭೂತರಾಧನೆ’ ವಿಶಿಷ್ಟವಾದುದು. ಇಲ್ಲಿ ಜನರ ಕಷ್ಟಗಳನ್ನು ನಿವಾರಿಸುವ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವ ‘ಹತ್ತಾರು ಭೂತಗಳು’ ಇವೆಯೆಂಬುದಾಗಿ ಹೇಳುತ್ತಾರೆ.” ‘ಬೇತಾಳೇಶ್ವರ’, ‘ಭೂತೇಶ್ವರ’ ಮುಂತಾದ ಹೆಸರಿನ ಅನೇಕ ಗುಡಿಗಳು ಕರ್ನಾಟಕದಲ್ಲಿವೆ; ಈ ‘ಭೂತ’ದ ಜಾತ್ರೆಗಳೂ ನಡೆಯುತ್ತಿವೆ.

‘ಭೂತ’ದ ಹೆಸರನ್ನು ಊರಿಗೆ, ವ್ಯಕ್ತಿಗಳಿಗೆ ಇಟ್ಟುದೂ ಉಂಟು. ಆದರೂ ‘ದೆವ್ವ’ ಮನುಷ್ಯನಿಗೆ ಹಿತವನ್ನುಂಟು ಮಾಡಿದುದಕ್ಕಿಂತಲೂ ಅಹಿತವನ್ನೇ ಹೆಚ್ಚಾಗಿ ಬಗೆದಿದೆ.

ನಾಡಿನ ಜನಪದ ಜನ’ದೆವ್ವ’ಗೆ-ಗಾಳಿ, ಪಿಶಾಚಿ, ಭೂತ, ಪ್ರೇತ, ಪೀಡೆ, ಜಕ್ಕಣಿ, ಕ್ಷುದ್ರಶಕ್ತಿ, ಸೋಂಕು ಇತ್ಯಾದಿಯಾಗಿ ಕರೆದಿದೆ.

ಜನಪದ ಸಂಸ್ಕೃತಿಯಲ್ಲಿ ಪ್ರಚಲಿತದಲ್ಲಿರುವ ‘ಗಾಳಿ ಬಡಕೋ’, ‘ಗಾಳಿ ಪಾಲಾಗು’, ‘ಗಾಳಿ ಹಿಡಿದವನ್ನಂಗೆ’, ‘ಗಾಳಿ ಹೊಕ್ಕವನಂಗೆ, ಭೂತಚೇಷ್ಟೆ, ಗಾಳಿ ಚೇಷ್ಟೆ, ಮುಂತಾದ ನುಡಿಗಳಲ್ಲಿ ದೆವ್ವ-ಪಿಶಾಚಿ ಈ ದುಷ್ಟಶಕ್ತಿಯ ಅರ್ಥವೇ ಹುದುಗಿದೆ. ಕನ್ನಡ ನಿಘಂಟುವಿನಲ್ಲಿಯೂ ‘ಗಾಳಿ ಪೂಜೆ ಎಂದರೆ ದೆವ್ವಗಾಳಿಗೆ ಪೂಜೆ ಮಾಡುವುದು’ ಎಂದಿದೆ. ‘ದೆವ್ವ ಹಿಡಿದವನಿಗೆ ದೈವದ ಯೋಚನೆ ಏನು?”ಅಯ್ಯನಿಗಿಂತ ದೈಯ ವಾಸಿ’,’ ಅಡವಿ ದೆವ್ವ ಬಂದು ಮನೆದೆವ್ವ ಓಡ್ಲಿತಂತೆ’. ‘ಹೆಣ್ಣದೆವ್ವ ಹಿಡಿದೋರ ಮಾತಾಡ್ತಿದ್ರೆ ಉಟ್ಟ ಪಂಚೇನ ಬಿಚ್ಚಿಸ್ಕಂಡಂಗೇ’ – ಈ ಎಲ್ಲ ಗಾದೆಮಾತುಗಳಲ್ಲಿ ‘ದೆವ್ವ’ದ ವಿಚಾರವೇ ಇದೆ.

ಅಕಾಲಮರಣಕ್ಕೆ ತುತ್ತಾದ ಅತೃಪ್ತಜೀವಿಗಳು ಭೂತ-ಪ್ರೇತ, ದೆವ್ವ-ಪಿಶಾಚಿಗಳಾಗಿ ಅಲೆಯುತ್ತ ತಮಗೆ ಪ್ರಿಯರಾಗಿದ್ದವರ ಮೈಯಲ್ಲಿ ಬಂದು, ಅವರ ಮೂಲಕ ತಮ್ಮ ಅತೃಪ್ತ ಬಯಕೆಗಳನ್ನು ಈಡೇರಿಸಿಕೊಳ್ಳುತ್ತ ತೃಪ್ತಿಪಡುತ್ತವೆ ಎಂಬುದು ಜನಪದರಲ್ಲಿರುವ ಸಾಮಾನ್ಯ ನಂಬಿಕೆ. ನಡುವಯಸ್ಸಿನಲ್ಲಿ ಅಸುನೀಗಿದ ವ್ಯಕ್ತಿ, ತಾನು ಬದುಕಿದ್ದಾಗ ಮೋಹಿಸಿದ ಹುಡುಗಿಯ ಮೈಯಲ್ಲಿ ಗಾಳಿಯಾಗಿ ಹೊಕ್ಕು ಅವಳನ್ನು ನಾನಾ ವಿಧವಾಗಿ ಪೀಡಿಸುತ್ತಾನೆಂದು ಕಂಡು ಕೇಳಿದ ಹಳ್ಳಿಗರು ಹೇಳುತ್ತಾರೆ.

ಯಾವನೋ ಒಬ್ಬ ತನ್ನ ಶತ್ರುವಿನಿಂದ, ಯಾವುದೋ ಕಾರಣಕ್ಕಾಗಿ ಕೊಲೆಗೈಯಲ್ಪಟ್ಟಾಗ, ಆ ಸೇಡಿಗೋಸ್ಕರ ಗಾಳಿಯಾಗಿ ಆತನನ್ನು ಬೆನ್ನು ಹತ್ತಿ ಕಾಡುತ್ತಾನೆನ್ನುವ ನಂಬಿಕೆಯೂ ಜನಪದರಲ್ಲಿದೆ. ತುಪ್ಪದಲ್ಲಿ ನೊಣಬಿದ್ದರೂ ಚೀಪಿ ಒಗೆಯುವಂಥ ವ್ಯಕ್ತಿ ಏನಾದರೂ ಅಕಾಲ ಮರಣಕ್ಕೆ ತುತ್ತಾದರೆ, ಆತನ ಜೀವ ಅಥವಾ ಆತ್ಮ ಲೌಕಿಕ ವಸ್ತುಗಳ ಮೇಲಿನ ಆಸೆ ಆಮಿಷಗಳಿಂದ ಪಿಶಾಚಿಯಾಗಿ ಅಲೆಯುತ್ತದೆ ಎನ್ನುವುದೂ ಕೂಡ ಜನಪದರಲ್ಲಿರುವ ದೃಢವಾದ ನಂಬುಗೆ. ಶವಸಂಸ್ಕಾರಗಳು ಕ್ರಮವಾಗಿ ಮತ್ತು ಸರಿಯಾಗಿ ನಡೆಯದೆ ಮಣ್ಣಾದವರು ಗಾಳಿಯ ರೂಪದಲ್ಲಿ ಕಾಡುತ್ತಾರೆಂಬ ನಂಬಿಕೆಯೂ ಇದೆ. ಬದುಕು ಬೇಸರವಾಗಿ ಉದ್ದೇಶಪೂರ್ವಕ ಪ್ರಾಣ ಕಳೆದುಕೊಂಡವರು ಗಾಳಿಯಾಗಿ ಬೇರೊಬ್ಬರನ್ನು ಪೀಡಿಸುತ್ತಾರೆಂಬ ನಂಬಿಕೆಯಿದೆ.

ಹೆಂಗಸರಿಗೆ ಹೆಂಗಸರ ಗಾಳಿ, ಗಂಡಸರಿಗೆ ಗಂಡಸರ ಗಾಳಿ; ಮತ್ತು ಹೆಂಗಸರಿಗೆ ಗಂಡಸರ ಗಾಳಿ, ಗಂಡಸರಿಗೆ ಹೆಂಗಸರ ಗಾಳಿ ಬಡಿದುಕೊಳ್ಳುವ ಸಾಧ್ಯತೆಯಿದೆಯೆಂದೂ ಇನ್ನೊಂದು ನಂಬಿಕೆಯಿದೆ. ಪ್ರಾಯಶಃ ಅವರವರ ಸಂಬಂಧಗಳ ಮೇಲಿಂದ ಗಾಳಿಯು ಹಿಡಿದುಕೊಳ್ಳುತ್ತದೆಂದು ಕಾಣುತ್ತದೆ. ಉರಿಬಿಸಿಲಿನಲ್ಲಿ, ಅಮಾವಾಸ್ಯೆ ರಾತ್ರಿಯಲ್ಲಿ ಊರಬಯಲಿನಲ್ಲಿ ಒಂಟಿಯಾಗಿ ತಿರುಗಾಡಬಾರದೆಂಬ ನಂಬಿಕೆಯಿದೆ. ಆ ವೇಳೆಯಲ್ಲಿ ಆ ಜಾಗದಲ್ಲಿ ಗಾಳಿ ಸುಳಿದಾಡುತ್ತಿರುತ್ತದೆನ್ನುವ ನಂಬಿಕೆಯಿದೆ. ಗಾಳಿಗೆ ರೂಪವಿಲ್ಲದುದುರಿಂದ, ಕರಿಬೆಕ್ಕು, ಕರಿನಾಯಿ ಮೊದಲಾದ ಪ್ರಾಣಿ ರೂಪದಲ್ಲಿ ಕಾಣಿಸಿಕೊಂಡು ಭಯವನ್ನುಂಟು ಮಾಡುತ್ತದಂತೆ. ಇದ್ದಕ್ಕಿದ್ದಂತೆ ಬೆಂಕಿಯಂತೆ ಕಾಣಿಸಿಕೊಳ್ಳುವುದು, ಮಾಯವಾಗುವುದು, ಮರಗಿಡಗಳನ್ನು ಅಲುಗಾಡಿಸಿದಂತಾಗುವುದು, ಜೋರಾಗಿ ಗಾಳಿಬೀಸಿದಂತಾಗುವುದು – ಇವೆಲ್ಲ ಗಾಳಿಯಿಂದಾಗುವ ಭಯಗಳು. ಇವನ್ನೆಲ್ಲ ಕಂಡವರು ಅದರಲ್ಲಿಯೂ ದುರ್ಬಲ ಮನಸ್ಸಿನವರು (ಹೆಚ್ಚಾಗಿ ಹೆಂಗಸರು) ನಿಂತ, ಕುಳಿತ ಸ್ಥಳದಲ್ಲೇ ಕರಕಂಪನ, ಚೀರುವುದು, ಹಲ್ಲು ಕಡಿಯುವುದು, ಯದ್ವಾತದ್ವಾ ಕುಣಿಯುವುದು, ಹುಚ್ಚುಚ್ಚಾರ ಮಾತನಾಡುವುದು, ನಾಲ್ಕಾರು ಜನ ಹಿಡಿದರೂ ಕೊಸರಿಕೊಳ್ಳುವುದು, ತೊದಲು ಭಾಷೆಯಲ್ಲಿ ಮಾತನಾಡುವುದು ಮಾಡುವರು-ಈ ಎಲ್ಲ ಸೂಚನೆಗಳು ಗಾಳಿ ಹಿಡಿದುದರ ಲಕ್ಷಣಗಳೇ ಎಂದು ನಂಬಲಾಗಿದೆ.

ಗಾಳಿ ಬಿಟ್ಟನಂತರ, ಗಾಳಿಹಿಡಿದಾಗ ತಾನು ಏನೇನು ಮಾಡಿದೆನೆಂಬುದು ಆತನಿಗೆ ತಿಳಿಯದೇ ಹೋಗಿರುತ್ತದೆ. ಬಹುಶಃ ಅಂಥ ಮಾನಸಿಕ ಕ್ರಿಯೆಗೆ (ಭ್ರಮಗೆ) ಆತ ಒಳಗಾಗಿರುವುದರಿಂದ ಹಾಗಾಗುತ್ತದೆಂದು ತೋರುತ್ತದೆ. ಈ ನಂಬಿಕೆಗಳಲ್ಲಿ ವಿಜ್ಞಾನಯುಗದಲ್ಲಿ ಬದುಕುತ್ತಿರುವ ನಮಗೆ ವಿಶ್ವಾಸ ಇಲ್ಲದೇ ಇದ್ದರೂ ಅವುಗಳಲ್ಲಿ ಸತ್ಯ ತೋರದೆ ಇದ್ದರೂ, ಅವು ಶ್ರೀಸಾಮಾನ್ಯರ ಜನಮನದಲ್ಲಿ ಮಾತ್ರ ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದುದು ಮಾತ್ರ ಸುಳ್ಳಲ್ಲ.

ಇಂದಿಗೂ, ಹಳ್ಳಿಗಳಲ್ಲಿ ಅದೇ ಹುಟ್ಟಿದ ಮಕ್ಕಳನ್ನು ಮನೆಯ ಹೊರಗೆ ಒಯ್ಯುವುದಿಲ್ಲ. ಬಸಿರಿಯಾದ ಹೆಣ್ಣುಮಕ್ಕಳು ಸುಡುಗಾಡದ ಸಮೀಪಕ್ಕೆ ಹಾಯುವುದಿಲ್ಲ, ಸುಡುಗಾಡಿನಲ್ಲಿ * ದೆವ್ವ ಇರುತ್ತದೆನ್ನುವ ನಂಬಿಕೆಯ ಕಾರಣದಿಂದ. ಮದುವೆಯಾದ, ಹಸಿಮೈಯಲ್ಲಿರುವ ನವದಂಪತಿಗಳು, ಪುಷ್ಪವತಿಯರಾದ ಹೆಣ್ಣುಮಕ್ಕಳೂ ಸುಮಾರು ದಿನಗಳವರೆಗೆ ಮನೆಯ ಒಳಗಡೆಯೇ ಇರುತ್ತಾರೆ. ಹೊರಗಡೆ ಬರುವುದಿಲ್ಲ. ಏಕೆಂದರೆ ಗಾಳಿಗೆ ಬಸುರಿ, ಬಾಣಂತಿ, ಹಸುಗೂಸುಗಳೆಂದರೆ ಎಲ್ಲಿಲ್ಲದ ಪ್ರಾಣವಂತೆ.” ತನ್ನ ಪ್ರಾಣಪ್ರಿಯರಾದ ಇವರನ್ನು ಗಾಳಿ ಬಡಿದುಕೊಳ್ಳಬಾರದೆನ್ನುವ ಕಾರಣದಿಂದ ಗ್ರಾಮೀಣರು ಎಷ್ಟೇ ಎಚ್ಚರಿಕೆ ವಹಿಸಿದರೂ, ದುಷ್ಟಶಕ್ತಿಯಾದ ಗಾಳಿ ಹೇಗೋ ಮೈಯಲ್ಲಿ ಸೇರುವುದುಂಟು.

ಆ ಸಂದರ್ಭದಲ್ಲಿ ಮೂರುದಾರಿ ಕೂಡಿದ ಸ್ಥಳದಲ್ಲಿಂದ ಹಿಡಿಮಣ್ಣು ತಂದು, ಗಾಳಿ ಬಡಿದವರ ಮುಖದ ಮೇಲೆ ಮೂರುಬಾರಿ ನಿವಾಳಿಸಿ ‘ಥ’ ಎಂದು ಉಗುಳಿ, ಅದನ್ನು ಒಲೆಯಲ್ಲಿ ಹಾಕುವುದುಂಟು. ಆಗ ಗಾಳಿ ಸುಟ್ಟು ಭಸ್ಮವಾಗಿ ಮತ್ತೆ ಬರುವುದಿಲ್ಲವೆಂಬ ನಂಬಿಕೆಯಿದೆ. ಮೈಯಲ್ಲಿ ಗಾಳಿ ಸೇರಿದೆ ಎಂಬ ಸಂಶಯ ಬಂದಲ್ಲಿ ಐದು ಪ್ರಕಾರದ ಪಳಾರ (ಪಂಚಪಳಾರ)” ವನ್ನು ಮೂರುದಾರಿ ಕೂಡಿದಲ್ಲಿ ಇಟ್ಟು ತಿರುಗಿ ನೋಡದೆ ಬರುತ್ತಾರೆ. (ತಿರುಗಿ ನೋಡಿದರೆ ಮತ್ತೆ ಆ ದೆವ್ವ ಎಲ್ಲಿ ತಮ್ಮ ಬೆನ್ನಹಿಂದೆಯೇ ಬರುತ್ತದೆಯೋ ಏನೋ ಎಂಬ ಭಯ). ಹೀಗೆ ಮಾಡಿದರೆ ಬಡಿದುಕೊಂಡ ಗಾಳಿ ತೊಲಗುತ್ತ ದೆನ್ನುವ ಭಾವನೆ ಜನಪದರದು. ಗಾಳಿಗೆ ಹಾರವಾಗಿ ಇಟ್ಟ ಪಂಚಪಳಾರವನ್ನು ಕೆಲವರು ಎಡಗಾಲಿನಿಂದ ಒದ್ದು ತೆಗೆದುಕೊಂಡು ತಿನ್ನುವುದುಂಟು.

ಕಾಲಿನಿಂದ ಒದೆದು ತಿಂದರೆ ದೆವ್ವ ಬಡಿಯುವುದಿಲ್ಲವೆನ್ನುವ ಪ್ರತೀತಿಯೂ ಇದೆ. ಹಾಗೆಯೇ ದೆವ್ವ ಬಡಿದವರು ಇಟ್ಟ ಪಳಾರವನ್ನು, ಆಸೆಯ ಕಣ್ಣುಗಳಿಂದ ಯಾರಾದರೂ ನೋಡಿದರೆ, ಹಿಡಿದವರನ್ನು ಬಿಟ್ಟು, ಅಂಥವರನ್ನು ದೆವ್ವ ಬಡಿದುಕೊಳ್ಳುತ್ತದೆನ್ನುವ ನಂಬಿಕೆಯೂ ಹಳ್ಳಿಗರಲ್ಲಿದೆ. ಈ ಗಾಳಿ ಮನುಷ್ಯರಿಗೆ ಮಾತ್ರ ಹಿಡಿದುಕೊಳ್ಳುವುದಿಲ್ಲ. ಹಿಂಡುವ ಎಮ್ಮೆ, ಆಕಳು, ಅವುಗಳ ಕರುಗಳನ್ನೂ ಹಿಡಿದುಕೊಳ್ಳುವುದುಂಟು. ಪ್ರಾಣಿಗಳನ್ನು ಹಿಡಿದುಕೊಂಡ ಗಾಳಿಯನ್ನು ತೊಲಗಿಸಲೂ ಸಹ ಮನುಷ್ಯರಿಗೆ ಕೈಕೊಂಡ ಮೇಲಿನ ಕ್ರಮಗಳನ್ನೇ ಅನುಸರಿಸುತ್ತಾರೆ. ಇವೆಲ್ಲ ಸಂಗತಿಗಳನ್ನು ಕೇಳಿದವರಿಗೆ, ಕಣ್ಣಾರೆ ಕಂಡವರಿಗೆ ಮನಶ್ಯಾಸ್ತ್ರಾದಿ ವಿಜ್ಞಾನಗಳು ಹೇಳುವ ಕಾರಣಗಳಲ್ಲಿ ನಂಬಿಕೆಯಿರುವುದಿಲ್ಲ. ಅಷ್ಟೆ ಏಕೆ ! ಹೊಸಮನೆ ಕಟ್ಟಿಸಿ ಹಾಗೆಯೇ ಪ್ರವೇಶಿಸದೆ, ದೆವ್ವ ಗಾಳಿ ಪಿಶಾಚಿಗಳು ಬಡಿಯಬಾರದೆಂದು, ಅದಕ್ಕೆ ಶಾಂತಿ ಮಾಡಿಸಿ, ಒಳಪ್ರವೇಶಿಸುವ ಮನಶ್ಯಾಸ್ತ್ರಜ್ಞರಿಗೇ ಅದು ಹೇಳುವ ಕಾರಣಗಳಲ್ಲಿ ನಂಬಿಕೆ ಉಳಿದಿರುವುದಿಲ್ಲ.

ಇನ್ನು ಈ ಗಾಳಿಯ ಬಗೆಗೆ ಆದಿವಾಸಿಗಳ ಭಾವನೆ ಹೇಗಿರಬೇಡ ! ಗಾಳಿ ಮನುಷ್ಯ, ಪ್ರಾಣಿಗಳಲ್ಲಷ್ಟೇ ಅಲ್ಲ, ಸಸ್ಯಗಳಲ್ಲಿಯೂ ಕಂಡುಬರುವುದುಂಟು. ‘ಗಾಳಿ ಬೀಸಿ ಗಿಡಮರಗಳು ಒಂದಕ್ಕೊಂದು ತಿಕ್ಕಿ ಬೆಂಕಿ ಹುಟ್ಟಿಕೊಂಡರೆ, ಗಾಳಿಯ ರಭಸಕ್ಕೆ ಮರಗಳು ಮುರಿದುಬಿದ್ದರೆ, ಅದರಲ್ಲಿರುವ ದೆವ್ವ-ಪಿಶಾಚಿ ಶಕ್ತಿಯೇ ಕಾರಣವೆಂದು ಆದಿವಾಸಿಗಳ ನಂಬಿಕೆಯಾಗಿತ್ತು. ಮರಮುರಿದು ಬೀಳುವಾಗ ಆಗುವ ಶಬ್ದದಲ್ಲಿ ಗಾಳಿಯ ದೈತ್ಯಶಕ್ತಿಯಿದೆಯೆನ್ನುವ ಭಾವನೆ ಆದಿವಾಸಿಗಳ ಕಾಲದಲ್ಲಿತ್ತು.

ತದನಂತರ ಆ ಮರ ಒಣಗಿಹೋದಾಗ, ಅದರಲ್ಲಿರುವ ಪ್ರೇತಶಕ್ತಿ ತೊಲಗಿ ಹೋಗಿರುತ್ತದೆಂದು ಜನರ ನಂಬಿಕೆಯಾಗಿತ್ತು.”“ಗಾಳಿಗೆ ಅಲ್ಲಾಡಿದ ಮರದ ಎಲೆಗಳು ಧ್ವನಿಗೈದರೆ, ಅದು ತಮ್ಮ ಪೂರ್ವಜರ ಧ್ವನಿಯೆನ್ನುವ ನಂಬಿಕೆಯೂ ಇತ್ತು.’ ಸಮುದ್ರತೀರದ ಗಾಳಿಯ ಮರಗಳಲ್ಲಿ ಗಾಳಿ ಭೋರೆಂದು ಬೀಸುತ್ತಿದ್ದರೆ, ಪುರಾತನ ಮಾನವನಿಗೆ ಗಾಳಿಯ ಮರಗಳಲ್ಲಿ ಆತ್ಮವಿದೆ ಎಂಬ ಭಾವನೆಯಿತ್ತು. ಆದುದರಿಂದ ಆ ಮರಗಳಿಗೆ “Weeping Trees” ಎಂದು ಕರೆಯುತ್ತಾರಂತೆ.“ ಹುಣಸೇಮರದಲ್ಲಿ, ಆಲದ ಮರದಲ್ಲಿ, ಬೇವಿನ ಮರದಲ್ಲಿ, ಜಾಲಿ ಮರದಲ್ಲಿ ಮತ್ತು ಕಳ್ಳಿಗಿಡದಲ್ಲಿ ಗಾಳಿವಾಸಿಸುತ್ತದೆನ್ನು ನಂಬಿಕೆ ಜನಪದರಲ್ಲಿಯೂ ಇದೆ.

ಹಾಗೆ ನೋಡಿದರೆ ಎಲ್ಲ ಗಿಡ-ಮರಗಳಲ್ಲಿಯೂ ಗಾಳಿ ನೆಲೆಸಿರುತ್ತದೆಂದು ಹೇಳಬಹುದು. (ಇದಕ್ಕೆ ಮಕ್ಕಳು ‘ದೆವ್ವನ ಆಟ’ ಆಡುವಾಗ ಹೇಳುವ ಹಾಡೇ ನಿದರ್ಶನ, ಈ ಆಟ ಆಡುವಾಗ, ನಾಲ್ಕಾರು ಮಕ್ಕಳು ಅಡಗಿಕೊಳ್ಳುತ್ತಾರೆ. ಅವರಲ್ಲಿ ಒಬ್ಬರನ್ನು ಪತ್ತೆಮಾಡಿ, ಮುಟ್ಟಬೇಕು. ಮುಟ್ಟಬೇಕಾದ ಮಗುವಿಗೆ ಇನ್ನೊಂದು ಮಗು, ಅದರ ಬೆನ್ನ ಮೇಲೆ ಚಪ್ಪರಿಸುತ್ತಾ – ‘ಮಾವಿನ ಗಿಡದಾಗ ದೆವ್ವ ಬಂದ ಇದಕೋ ಬಡಕೋ, ಬೇವಿನ ಗಿಡದಾಗ ದೆವ್ವ ಬಂದ ಇದಕೊ ಬಡಕೋ, ಹುಣಸೀಗಿಡದಾಗ ದೆವ್ವ ಬಂದ ಇದಕೊ ಬಡಕೋ… ಇತ್ಯಾದಿಯಾದ ತಮಗೆ ತಿಳಿದಿರುವ ಎಲ್ಲ ಗಿಡಗಳಲ್ಲಿಯ ದೆವ್ವಗಳನ್ನು ಜ್ಞಾಪಿಸಿಕೊಂಡು,’ ‘ದೆವ್ವ ತುಂಬಿ’ಸುವುದು.

ಆಗ ಆ ಮಾತು ನಿಜವಾಗಿಯೂ ತನ್ನಲ್ಲಿ ದೆವ್ವ ತುಂಬಿದೆಯೆಂದು ಭಾವಿಸಿ, ಬೇಸರವಿಲ್ಲದೆ ಓಡಾಡಿ, ಅಡಗಿಕೊಂಡವರನ್ನು ಹುಡುಕತೊಡಗುವನು.) ಆದುದರಿಂದ ಮದುಮಕ್ಕಳು- ಬಾಣಂತಿಯರು ಹಸುಗೂಸುಗಳು, ಆಲದಮರ, ಹುಣಸೀಮರ, ಜಾಲಿಗಿಡ, ಕಳ್ಳಿಗಿಡ – ಮೊದಲಾದವುಗಳು ಇರುವ ಕಡೆ ಹೋಗಬಾರದೆನ್ನುತ್ತಾರೆ. ಈ ನಂಬಿಕೆಯಲ್ಲಿ ಅರ್ಥವಿದ್ದಂತೆ ತೋರುತ್ತದೆ. ಮದುವೆ ವ್ಯಕ್ತಿಯ ಬದುಕಿನಲ್ಲಿ ಮಹತ್ವದ ಘಟ್ಟ. ಇದಕ್ಕಾಗಿ ಕುಟುಂಬದವರು ಸಾಕಷ್ಟು ದುಡ್ಡು ಖರ್ಚು ಮಾಡುತ್ತಾರೆ. ವಿವಾಹಕ್ಕೆ ಸಂಬಂಧಿಗಳು ಸ್ನೇಹಿತರೆಲ್ಲ ಬಂದಿರುತ್ತಾರೆ. ಅವರ ಸಲುವಾಗಿ ಊಟದ ವ್ಯವಸ್ಥೆ ಮಾಡಿಸಿರುತ್ತಾರೆ, ಬಟ್ಟೆ, ಒಡವೆ ಖರೀದಿಸಿರುತ್ತಾರೆ. ಚಪ್ಪರ ಹಾಕಿಸಿರುತ್ತಾರೆ.

ಊದು-ಬಾರಿಸುವವರನ್ನು ಕರೆಸಿರುತ್ತಾರೆ. ಇದೆಲ್ಲ ಖರ್ಚು-ವೆಚ್ಚ ಮದುಮಕ್ಕಳ ಸಲುವಾಗಿ ಅಲ್ಲವೆ! ಇವರಿಗೆ ಅಕಸ್ಮಾತ್ ಏನಾದರೂ ಅಪಾಯ ಒದಗಿದರೆ, ಇಷ್ಟೆಲ್ಲ ತೊಂದರೆಯಿಂದ ಕಾರ್ಯಕ್ರಮ ಏರ್ಪಡಿಸಿದ್ದು ಹಾಳಾಗುತ್ತದೆ. ಆದುದರಿಂದ ಅಪಾಯದ ಸ್ಥಳಕ್ಕೆ ಮದುಮಕ್ಕಳು ಹೋಗಬಾರದೆನ್ನುತ್ತಾರೆ. ಈ ಗಿಡ-ಮರಗಳು ಇರುವುದು ಹೆಚ್ಚಾಗಿ ಬೇಲಿ, ಮುಳ್ಳು `ಕಂಟೆಗಳಿರುವಲ್ಲಿ. ಮೇಲಾಗಿ, ಜಾಲಿಗಿಡದ ಮುಳ್ಳು, ಕಳ್ಳಿಗಿಡದ ಹಾಲು ಅಪಾಯವನ್ನುಂಟುಮಾಡುವಂಥವು.

ಹೀಗೆ, ಕಲ್ಲು, ಮುಳ್ಳುಗಳಿರುವಲ್ಲಿಗೆ ಹೋಗುವುದರಿಂದ ಅವು ಚುಚ್ಚಿ ಗಾಯಮಾಡಬಹುದು. ಅದೂ ಅಲ್ಲದೆ, ಅಲ್ಲಿಯ ಹಾವೂ ಕಚ್ಚಿ ಸಾಯಿಸಬಹುದು. ಹಾಗಾಗಿ ಇಂಥ ಕಡೆಗೆ ಮದುಮಕ್ಕಳು ಹೋಗಬಾರದೆನ್ನುವ ನಂಬಿಕೆಯಿದೆ. ಆದರೆ, ಕೆಲವರು ಇದನ್ನು ನಂಬದೆ ಅದರ ವಿರುದ್ಧವಾಗಿ ಮೊಂಡವಾದ ಮಾಡುವಾಗ, ಅವರನ್ನು ಹೆದರಿಸಲು, ಹುಣಸಿ, ಜಾಲಿ… ಮರಗಳಲ್ಲಿ ದುಷ್ಟಶಕ್ತಿಗಳಿರುತ್ತವೆ.

ಅವು ಮದುಮಕ್ಕಳನ್ನು ಹಿಡಿದುಕೊಳ್ಳುತ್ತವೆ ಎಂಬ ನಂಬಿಕೆಯನ್ನು ಮುಂದಿಡುತ್ತಾರೆಂದು ತೋರುತ್ತದೆ. ಈ ಹೆದರಿಕೆಯಿಂದ ಆ ಮರಗಳ ಹತ್ತಿರ ಯಾರೂ ಸುಳಿಯುವುದಿಲ್ಲ. ‘ಭೀತಿಯೇ ಭೂತವಲ್ಲವೆ?’ ಇನ್ನು, ಬಾಣಂತಿಯರು-ಹಸುಮಕ್ಕಳು- ತುಂಬ ಸೂಕ್ಷ್ಮ ಪ್ರಕೃತಿಯವರಿರುತ್ತಾರೆ. ಅಂಥವರಿಗೆ, ಈ ಮರಗಳಿರುವ ಸ್ಥಳದಲ್ಲಿಯ, ಕಲ್ಲು, ಮುಳ್ಳು, ತಾಕುವಷ್ಟರಲ್ಲಿಯೇ ಅಪಾಯ ಒದಗುತ್ತದೆ. ಆದುದರಿಂದ ವಿಶೇಷವಾಗಿ, ಇಂಥವರು ಅಲ್ಲಿ ಹೋಗಬಾರದೆನ್ನುವ ಕಾರಣದಿಂದ ಗಾಳಿದೆವ್ವ ಇದೆ ಎನ್ನುವ ನಂಬಿಕೆ ಮುಂದೊಡ್ಡುತ್ತಾರೆ.

ಹಾಗೆಯೇ ಧೂಳುಗಾಲಿನಿಂದ ಮನೆಯೊಳಗೆ ಹೋಗಬಾರದು. ಹೊರಗಿನ ಗಾಳಿ ಕಾಲುಗಳ ಮೂಲಕ ಒಳಪ್ರವೇಶಿಸುತ್ತದೆಂಬ ನಂಬಿಕೆಯೂ ಇದೆ. ಆದುದರಿಂದ ಕೈಕಾಲು ತೊಳೆದುಕೊಂಡು ಮನೆಯೊಳಗೆ ಸೇರಬೇಕೆನ್ನುತ್ತಾರೆ. ಕಾಲಿಗೆ ಮೆತ್ತಿದ ಧೂಳಿಕಣಗಳು, ಒಳಗೆ ಬಾರದಿರಲಿ ಎಂಬ ಕಾರಣದಿಂದ, ಕಾಲು ತೊಳೆದುಕೊಂಡು ಬರಬೇಕು ಎನ್ನುವ ಸೂಚನೆ ಮೇಲಿನ ನಂಬಿಕೆಗಳಲ್ಲಿ ಇದ್ದಂತೆ ತೋರುತ್ತದೆ. ಹಾಗೆಯೇ ಬಕ್ಕ (ಬರೀ) ತಲೆಯಲ್ಲಿ, ಬರೀ ಮೈಯಲ್ಲಿ ಊರ ಹೊರವಲಯಕ್ಕೆ ತಿರುಗಾಡಲು ಹೋಗಬಾರದು. ಅಲ್ಲಿಯ ದೆವ್ವ ಬಡಿದುಕೊಳ್ಳುತ್ತದೆ ಎಂತಲೂ ನಂಬಿಕೆಯಿದೆ.

ಊರ ಹೊರವಲಯದಲ್ಲಿರುವ ಒಣಗಿದ ಗಿಡಮರಗಳ ಟೊಂಗೆ ಏನಾದರೂ, ತಲೆಯ ಮೇಲೆ, ಮೈಮೇಲೆ ಮುರಿದು ಬಿದ್ದು ಅಪಾಯವಾಗದಿರಲಿ ಎಂಬ ಎಚ್ಚರಿಕೆಯ ಸೂಚನೆ ಮೇಲಿನ ನಂಬಿಕೆಯಲ್ಲಿ ಇದ್ದಂತೆ ತೋರುತ್ತದೆ. ರಾತ್ರಿ ಹೊತ್ತು ಗಿಡದ ಬುಡದಲ್ಲಿ ಕೂಡಬಾರದು, ಮಲಗಬಾರದು. ಏಕೆಂದರೆ ಅಲ್ಲಿ ದೆವ್ವಗಳಿರುತ್ತವೆ ಎಂಬ ನಂಬಿಕೆ. ರಾತ್ರಿಯಲ್ಲಿ ಗಿಡಮರಗಳು ಆಮ್ಲಜನಕ ತೆಗೆದುಕೊಂಡು, ಇಂಗಾಲದ ಡೈ ಆಕ್ಸೆಡ್ ಹೊರಹಾಕುತ್ತವೆ. ಇದು ಮನುಷ್ಯನ ಉಸಿರಾಟಕ್ಕೆ ಬೇಡವಾದುದು. ಈ ವೈಜ್ಞಾನಿಕ ವಿಚಾರ ಮೇಲಿನ ನಂಬಿಕೆಯಲ್ಲಿ ಸೂಚಿತವಾದಂತಿದೆ.

ಗಾಳಿ ಕಲ್ಲು:

ಮೈಮೇಲೆ ಬಂದಿರುವ ಗಾಳಿಯನ್ನು ಬಿಡಿಸಲು ಅಥವಾ ಓಡಿಸಲು ನಮ್ಮ ಗ್ರಾಮೀಣರು ಅನುಸರಿಸುತ್ತ ಬಂದ ಒಂದು ಸಾಂಪ್ರದಾಯಿಕ ಪದ್ಧತಿಯೇ ಗಾಳಿಕಲ್ಲು. ಕಲ್ಲಿನಲ್ಲಿ ಮನುಷ್ಯಾಕೃತಿಯನ್ನು ಬಿಡಿಸಿ, ಬಡಿದುಕೊಂಡ ಗಾಳಿಯ ಹೆಸರಿನ ಮೊದಲನೇ ಅಕ್ಷರವನ್ನು ಅದರಲ್ಲಿ ಕೆತ್ತಿ, ಅದರ ಮೇಲೆ ಹೆಂಡ, ನೀರು ಸುರುವಿ, ಬಯ್ಯುತ್ತ ದೆವ್ವ ಓಡಿಸಲು ಪೂಜಾರಿ ಪ್ರಯತ್ನಿಸುತ್ತಾನೆ. ಹೀಗೆ ಮಾಡುವುದರಿಂದ ಮೈಮೇಲಿನ ದೆವ್ವ ಕಲ್ಲಿನಲ್ಲಿ ಸೇರಿಕೊಳ್ಳುತ್ತದೆಂದೂ ಮತ್ತೆ ಬರುವುದಿಲ್ಲವೆಂದೂ ನಂಬಿಕೆಯಿದೆ. ಊರ ಅಗಸಿಬಾಗಿಲಲ್ಲಿ ಮತ್ತು ದೇವಸ್ಥಾನದ ಮೆಟ್ಟಿಲುಗಳಲ್ಲಿ ಇಂಥ ಕಲ್ಲುಗಳಿರುತ್ತವೆ. ಓಡಾಡುವಾಗ ಜನ ಅದನ್ನು ತುಳಿಯುತ್ತಾರೆ. ಅದರ ಮೇಲೆ ‘ಭೂ’ ಎಂದು ಉಗುಳುತ್ತಾರೆ. ಇದರಿಂದ ಹಿಂಸೆಯಾಗಿ, ಅಲ್ಲಿಯ ಗಾಳಿ ಮತ್ತೆಂದೂ ಸುಳಿಯುವುದಿಲ್ಲವೆಂದು ನಂಬುತ್ತಾರೆ.

ಗಿಡಕ್ಕೆ ಮಳೆ ಬಡಿಯುವುದು:

ಗಾಳಿಯಾದ ಗಂಡಸರು-ಹೆಂಗಸರು ವಿಚಿತ್ರವಾಗಿ ವರ್ತಿಸುವುದು, ಆವೇಶದಿಂದ ಮಾತನಾಡುವುದು, ಕೂಗಾಡುವುದು, ಕಿರಿಚಾಡುವುದು, ಓಡಾಡುವುದು ಮಾತ್ರವಲ್ಲ ಅಸಾಧ್ಯ ಕೆಲಸಗಳನ್ನು ಸಾಧ್ಯಮಾಡಿ ತೋರಿಸುತ್ತಾರೆ. ಮರಹತ್ತುತ್ತಾರೆ, ಭಾರ ಎತ್ತುತ್ತಾರೆ. ಗಾಳಿ ಬಂದ ಆವೇಶದಲ್ಲಿ ಹೀಗೆಲ್ಲ ಮಾಡುತ್ತಾರೆಂದು ತೋರುತ್ತದೆ. ಮನುಷ್ಯ ಆವೇಶಕ್ಕೊಳಗಾದಾಗ ಆತನ ಶಕ್ತಿ ಇಮ್ಮಡಿಯಾಗುತ್ತದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕರೋಶಿ’ಯ ದರ್ಗಾಕ್ಕೆ ಗಾಳಿಯಾದವರು ಅಮಾವಾಸ್ಯೆಗೆ ಬರುತ್ತಾರೆ. ಅವರು ದರ್ಗಾದ ಸಮೀಪಕ್ಕೆ ಬರುತ್ತಲೇ, ಹಿಂದೆಂದೂ ಗಿಡ ಏರದವರು, ಏರಿ ನಿಲ್ಲುತ್ತಾರೆ. ಆಗ ಮುಲ್ಲಾ/ ಖಾಜಿ ಆ ಗಿಡಕ್ಕೆ ಗಟ್ಟಿಯಾಗಿ ಮಳಿ ಬಡಿಯುತ್ತಾನೆ. ಗಿಡಕ್ಕೆ ಮಳೆ ಬಡಿಯುವುದರಿಂದ, ಹಿಡಿದ ದೆವ್ವ ಬಿಟ್ಟುಹೋಗುತ್ತದೆ, ಮರಳಿ ಮತ್ತೆಂದೂ ಬರುವುದಿಲ್ಲವೆಂಬ ನಂಬಿಕೆಯಿದೆ. ಗಾಳಿಯಾದ ಎಲ್ಲ ಜಾತಿಯವರೂ ಕರೋಶಿಯ ದರ್ಗಾಕ್ಕೆ ನಡೆದುಕೊಳ್ಳುತ್ತಾರೆ.

ಹಾಗೆಯೇ, ಧಾರವಾಡ ಜಿಲ್ಲೆಯ ಲಕ್ಷ್ಮೀಶ್ವರದ ‘ದೂದ್ ಫೀರಾ’ ಎಂಬ ಸಂತನ ಸಮಾಧಿಗೆ ದೆವ್ವ ಬಡಿದವರು ಬರುತ್ತಾರೆ. ಇಲ್ಲಿಯೂ ‘ಮುಲ್ಲಾ’ ಬೇವಿನಮರಕ್ಕೆ ಮಳಿ ಜಡಿಯುವುದರ ಮೂಲಕ ದೆವ್ವ ಬಿಡಿಸುತ್ತಾನೆ. ಮೈಯಲ್ಲಿಯ ದೆವ್ವ ಗಿಡದಲ್ಲಿ ಸೇರಲಿ, ಮತ್ತೆ ತಿರುಗಿ ಬಾರದಿರಲಿ ಎಂಬುದರ ದ್ಯೋತಕವಾಗಿಯೇ, ಮರಕ್ಕೆ ಗಟ್ಟಿಯಾಗಿ ಮೊಳೆ ಜಡಿಯುತ್ತಾರೆಂದು ತೋರುತ್ತದೆ.

ಹನುಮಂತ ದೇವರ ಮಹಿಮೆ:

ವಿಜಾಪುರ ಜಿಲ್ಲೆಯ ಅಚನೂರಿನ ಹನುಮಂತದೇವರಿಗೆ ‘ದೆವ್ವ’ ಹಿಡಿದವರನ್ನು ಕರೆದೊಯ್ಯುತ್ತಾರೆ. ಅಲ್ಲಿ ಇವರು ಗುಡ್ಡದಲ್ಲಿಯ ದೊಡ್ಡ ದೊಡ್ಡ ಕಲ್ಲುಗಳನ್ನು ಹೊತ್ತು ನಡೆಯುತ್ತಾರೆ. ಹೀಗೆ ಭಾರವಾದ ಕಲ್ಲುಗಳನ್ನು ಹೊತ್ತು ನಡೆಯುವುದರಿಂದ, ಅವರಲ್ಲಿದ್ದ ಗಾಳಿ ಬಿಟ್ಟು ದೂರ ಹೋಗುತ್ತದೆಂದು ಜನಗಳ ನಂಬಿಕೆ. ಗಾಳಿ ತುಂಬಿದವರು ಮಾತ್ರ, ಇಂಥ ಕಲ್ಲು ಹೊರಲು ಸಾಧ್ಯ ಎಂದೂ ನಂಬಿಕೆಯಿದೆ. ಇದೆಲ್ಲ ಅಲ್ಲಿಯ ಹನುಮಂತ ದೇವರ ಮಹಿಮೆಯಂತೆ. ಹೀಗೆ, ಭಾರವಾದ ಕಲ್ಲನ್ನು ಹೇರುವುದು, ಒಂದು ರೀತಿಯಲ್ಲಿ ಗಾಳಿಯಾದವನಿಗೆ ಶಿಕ್ಷೆಯೇ, ಶಿಕ್ಷಿಸುವುದರ ಮೂಲಕ ಗಾಳಿ ಮಾಯವಾಗುತ್ತದೆಂಬ ನಂಬಿಕೆಯೂ ಇನ್ನೊಂದೆಡೆಯಿದೆ. ಕಲ್ಲು ಹೊತ್ತರೆ ಗಾಳಿ ತೊಲಗುತ್ತದೆನ್ನುವ ಒಂದು ಭಾವನೆಯಷ್ಟೇ.

ಗಾಳಿಯಾದವರು, ಹನುಮಂತದೇವರಿಗೆ ಸುಮಾರು ೫ ವಾರ ತಪ್ಪದೇ ತೊಯ್ದ ಬಟ್ಟೆಯಲ್ಲಿ ಪ್ರದಕ್ಷಿಣೆ ಹಾಕಿದರೆ, ಗಾಳಿ ಓಡಿಹೋಗುತ್ತದೆಂಬ ಬಲವಾದ ನಂಬುಗೆ. ಹನುಮಂತ ಶನಿದೇವರು ಎಂಬ ನಂಬಿಕೆ ಗ್ರಾಮೀಣರದು. ಅಲ್ಲದೆ, ಈತ ದೆವ್ವ – ಭೂತ ಪಿಶಾಚಿಗಳನ್ನು – ಮೆಟ್ಟಿನಿಂತವ – ಆದುದರಿಂದ ಹನುಮಂತನಿಗೆ ನಡೆದುಕೊಂಡರೆ ‘ಗಾಳಿ’ ಬಿಡುತ್ತದೆಂಬ ನಂಬಿಕೆಯಲ್ಲಿ ಜನಪದರಿಗೆ ಅಚಲ ವಿಶ್ವಾಸವಿದೆ.

ಕವಡಿ ಲೋಬಾನ:

ಮೊಹರಂ ಹಬ್ಬದಲ್ಲಿ ‘ಅಲ್ಲಾ ದೇವರ’ನ್ನು ಕೂಡ್ರಿಸಿದಾಗ, ವ್ಯಕ್ತಿಯ ಮೈಯೊಳಗಿದ್ದ ಗಾಳಿದೆವ್ವ ಎಚ್ಚರಗೊಂಡು ಒದರಾಟ, ಚೀರಾಟ ಆರಂಭಿಸುತ್ತದೆ. ಮುಲ್ಲಾ ಕವಡಿಲೋಬಾನ ಹಾಕಿ ಗಾಳಿಯನ್ನು ಓಡಿಸುತ್ತಾನೆ. ಇದಕ್ಕೆ ‘ದೆವ್ವ’ ಇನ್ನಷ್ಟು ಕೂಗಾಟ ಮಾಡಿ ಹೆದರಿ ಓಡಿಹೋಗುತ್ತದೆಂದು ಅನುಭವಿಕರೆಲ್ಲರ ಹೇಳಿಕೆ. ಕವಡಿ ಲೋಬಾನ ಗಾಳಿಯ ಶತ್ರುವಂತೆ. ಈ ಲೋಬಾನದಿಂದ ದೆವ್ವ ಬಿಡಿಸುವುದು ಒಂದು ತಂತ್ರವೆಂದು ತೋರುತ್ತದೆ. ಇದಕ್ಕೆ ‘ಗುಗ್ಗಳ’, ಊದು ಎಂತಲೂ ಕರೆಯುವ ವಾಡಿಕೆ. ಗುಗ್ಗಳದಲ್ಲಿ ಹೊರಗಿನ ಕ್ರಮಗಳನ್ನು ತಡೆಯುವ ಮತ್ತು ಒಳಗಿನ ದುಷ್ಟಶಕ್ತಿಯನ್ನು ಹೊರ ಹಾಕುವ ಸಾಮರ್ಥ್ಯವಿದೆ.

ಹಸು ಹಾಲು ಕರೆಯದಿದ್ದರೆ, ಗಾಳಿ ಸೋಂಕಿದೆಯೆಂಬ ನಂಬಿಕೆಯಿಂದ, ಅದರ ಕೆಚ್ಚಲಿಗೆ ಕವಡಿ ಲೋಬಾನ ಹಿಡಿಯುತ್ತಾರೆ. ಚಿಕ್ಕಮಕ್ಕಳನ್ನು ಎರೆದು, ಬಾಣಂತಿಯರಿಗೆ ಸ್ನಾನಮಾಡಿಸಿಯೂ ಗಾಳಿ ಸೋಂಕಬಾರದೆಂಬ ಕಾರಣದಿಂದ ಕವಡಿ ಲೋಬಾನವನ್ನು ಬೆಂಕಿಯಲ್ಲಿ ಹಾಕಿ ಹಿಡಿಯುತ್ತಾರೆ.

ಹಾಗೆಯೇ ಮೆಣಸಿನಕಾಯಿ ಇಳಿ ತೆಗೆಯುವ, ಪೊರಕೆ ಕಡ್ಡಿಗಳನ್ನು ಮುರಿದು ಸುಡುವ, ಅರಳಿಯನ್ನು ಗೋಡೆಗೆ ಅಂಟಿಸಿ ಸುಡುವ, ಮಂತ್ರಿಸಿದ ಅರಿಸಿನ ಬೇರನ್ನು ತೋಳಿಗೆ ಕಟ್ಟುವ, ಭತ್ತ ಅಥವಾ ಗೋದಿಯ ತೆನೆಯನ್ನು ಮನೆಯ ಸೂರಿಗೆ ನೇತು ಹಾಕುವುದರ ಮೂಲಕವಾಗಿಯೂ ದೆವ್ವ ಪಿಶಾಚಿಯನ್ನು ಓಡಿಸಲು ಸಾಧ್ಯವೆಂದು ಜನಪದರ ನಂಬಿಕೆ.

ಚಿಕ್ಕ ಆಲೂಗಡ್ಡೆ, ಚಿಕ್ಕ ಗಜ್ಜರಿ, ಬೆಳ್ಳುಳ್ಳಿ ಇವುಗಳಲ್ಲಿ ಯಾವುದೇ ಒಂದು ಹತ್ತಿರವಿದ್ದರ ‘ಗಾಳಿ’ ಸೋಂಕುವುದಿಲ್ಲವೆಂಬ ನಂಬಿಕೆಯಿದೆ. ಮಲಗಿಕೊಂಡಾಗ, ತಲೆಯ ಹತ್ತಿರ, ಚಪ್ಪಲಿ, ಕಸಬರಿಗಿ ಇರಿಸಿಕೊಂಡಿದ್ದರೆ ಗಾಳಿ ಬರುವುದಿಲ್ಲವೆಂಬ ಇನ್ನೊಂದು ನಂಬಿಕೆಯಿದೆ. ಕಸಬರಿಗಿ, ಚಪ್ಪಲಿಗಳಂತೆ ಕಬ್ಬಿಣಕ್ಕೂ ದೆವ್ವ ಹೆದರುತ್ತದೆಂಬ ನಂಬಿಕೆಯೂ ಇದೆ.

ಮಂತ್ರ – ತಂತ್ರ – ಯಂತ್ರ:

ಗಾಳಿ ಹಿಡಿದುಕೊಂಡವರ ಮಾತುಕತೆ, ಹಾವ-ಭಾವ, ಅದನ್ನು ಬಿಡಿಸಲು ಪ್ರಯತ್ನಿಸುವ ಮಂತ್ರಗಾರ ; ಆತನ ಮಂತ್ರ ತಂತ್ರ ಯಂತ್ರ ಮೊದಲಾದವುಗಳು ಪ್ರಪಂಚದ ಬಹು ಭಾಗಗಳಲ್ಲಿ ಇಂದಿಗೂ ಕಂಡುಬರುತ್ತಿರುವುದು ತುಂಬ ವಿಚಿತ್ರವೆನಿಸಿದರೂ ವಾಸ್ತವ ಸಂಗತಿಯೇ ಆಗಿದೆ. ಕರ್ನಾಟಕದ ನಾನಾ ಕಡೆಗಳಲ್ಲಿ ಗಾಳಿ ಬಿಡಿಸುತ್ತಾರೆ. ಖಾಜಿ/ ಮುಲ್ಲಾ ಅಥವಾ ಸ್ವಾಮಿಗಳು ಸಾಮಾನ್ಯವಾಗಿ ಗಾಳಿ ಬಿಡಿಸುತ್ತಾರೆ. ಧರ್ಮಸ್ಥಳ, ಮಹದೇಶ್ವರ ಬೆಟ್ಟ, ವಿಜಾಪುರ ಜೋಡಗುಂಬಜ್, ಬೆಳಗಾವಿಯ ಕರೋಶಿ-ಮೊದಲಾದ ಪ್ರಮುಖ ಸ್ಥಳಗಳಲ್ಲದೆ ಕರ್ನಾಟಕದ ಇತರ ಭಾಗಗಳಲ್ಲಿಯೂ ದೆವ್ವ ಬಿಡಿಸುತ್ತಾರೆ. ಗಾಳಿ ಬಿಡಿಸುವ ಮಾಂತ್ರಿಕರು ಸಾಮಾನ್ಯವಾಗಿ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಸಿಕ್ಕುತ್ತಾರೆ.

ಹೆಣ್ಣುಮಕ್ಕಳಿಗೇ ಹೆಚ್ಚಾಗಿ ಬಡಿದುಕೊಳ್ಳುವ ಈ ಗಾಳಿಯನ್ನು ತೊಲಗಿಸಲು, ಮಂತ್ರಗಾರ ಕೈಗೊಳ್ಳುವ ಕ್ರಮ ತುಂಬ ಗಂಭೀರವಾಗಿರುತ್ತದೆ, ಭಯಂಕರವಾಗಿರುತ್ತದೆ. ಮಂತ್ರವಾದಿ ಗಾಳಿ ಹೊಕ್ಕವಳ ಕೂದಲನ್ನು ಕೈಯಿಂದ ಜಗ್ಗಿಹಿಡಿದು, ಬಾಯಲ್ಲಿ ಪಿಟಿ ಪಿಟಿ ಎಂದು ಮಂತ್ರ ಹೇಳುತ್ತ ಅವಳ ಮೈಮೇಲೆ ವಿಭೂತಿ ಪುಡಿ ಅಥವಾ ಬೂದಿಯನ್ನು ಉಫ್ ಎಂದು ಊದುತ್ತಾನೆ. ನಿಂಬೆಹಣ್ಣನ್ನು ಮಂತ್ರಿಸಿ, ಅವಳ ಮೈಮೇಲೆ ನಿವಾಳಿಸಿ ಒಗೆಯುತ್ತಾನೆ. ಇಷ್ಟಕ್ಕೆ ಅವಳ ಮೈಯಿಂದ ದೆವ್ವ ಹೊರಗೆ ಬರದೇ ಇದ್ದಾಗ, ಬೇವಿನಸೊಪ್ಪಿನಿಂದ ಮುಖಕ್ಕೆ ಚೆನ್ನಾಗಿ ಹೊಡೆಯುತ್ತಾನೆ. ಇದಕ್ಕೂ ಬಗ್ಗದೇ ಇರುವ ಗಾಳಿಯನ್ನು ನೋಡಿ ಮಂತ್ರಗಾರ ಸಿಟ್ಟಿನಿಂದ ಕಣ್ಣುಗಳನ್ನು ಕೆಂಪಗೆ ಮಾಡಿ, ಚಪ್ಪಲುಗಳಿಂದ, ಅವಳ ದೇಹದ ಸಿಕ್ಕ ಸಿಕ್ಕ ಭಾಗಗಳಲ್ಲಿ ಚೆನ್ನಾಗಿ ಹೊಡೆಯುತ್ತ ನೀನು ಯಾರು ? ಇಲ್ಲಿಗೇಕೆ ಬಂದೆ ? ನಿನ್ನ ಆಸೆ ಏನು ? ಮೊದಲಾದ ಪ್ರಶ್ನೆಗಳನ್ನು ಹಾಕುತ್ತಾನೆ. ಮಂತ್ರಗಾರನ ಬಡಿತಕ್ಕೆ ಮತ್ತು ಆತನು ಹಾಕುವ ಮಂತ್ರಗಳಿಗೆ ಮಣಿದ ‘ಗಾಳಿ’ ತನ್ನ ನಿಜಸಂಗತಿಯನ್ನು ಆತನ ಮುಂದೆ ಅರುಹುತ್ತದೆ.

‘ಇನ್ನು ಮೇಲೆ ನೀನು ಬರಕೂಡದೆಂದು’ ಗಾಳಿಗೆ ಹೇಳಿದ ಮಂತ್ರಗಾರ, ಯಂತ್ರವೊಂದನ್ನು ಮಾಡಿ ಗಾಳಿ ಬಂದವಳ ಕೊರಳಲ್ಲಿ ಕಟ್ಟುತ್ತಾನೆ. ಮುಂದೆಂದೂ ಅವಳಿಗೆ ಗಾಳಿ-ಪಿಶಾಚಿಗಳು ಆಂಟಿಕೊಳ್ಳುವುದಿಲ್ಲವೆಂದು ನಮ್ಮ ಜನಪದರು ಹೇಳುತ್ತಲೇ ಬಂದಿದ್ದಾರೆ. ಇಂಥ ವಿಚಿತ್ರ ಸಂಗತಿಗಳು ನಂಬಲಸಾಧ್ಯವಾದರೂ ಒಂದರೆಡು ಸಲ ಅವು ಸತ್ಯಸಂಗತಿಗಳಾಗಿದ್ದುದು ಹಳ್ಳಿಗರಿಂದಲೇ ತಿಳಿದುಬರುತ್ತದೆ.

‘ಗಾಳಿ ಹಿಡಿದ ಹೆದ್ದೂಬ್ಬಳನ್ನು ಒಮ್ಮೆ ಸಿದ್ಧಗಂಗಾ ಕ್ಷೇತ್ರಕ್ಕೆ ಕರೆತಂದಿದ್ದರು. ಸ್ವಾಮಿಗಳು ಆಕೆಯ ಸ್ವಲ್ಪ ಕೂದಲನ್ನು ಬೆರಳಲ್ಲಿ ಸುತ್ತಿಕೊಂಡು (ಹಾಗೆ ಸುತ್ತಿಕೊಂಡರೆ ಮೈಮೇಲಿರುವ ಗಾಳಿ ಪರಾರಿಯಾಗಲು ಸಾಧ್ಯವಿಲ್ಲವಂತೆ) ಮಂತ್ರಗಳನ್ನು ಪಠಿಸಿ, ವಿಭೂತಿಯ ಧೂಳನ್ನು ಆಕೆಯ ಮೈಮೇಲೆ ಉರುಬಿದಾಗ ಸುಟ್ಟುಕೊಂಡವಳಂತೆ ಬೆದರಿದ ಆಕೆ ಎಲ್ಲವನ್ನೂ ಹೇಳುವುದಾಗಿ ಬಾಯಿಬಿಟ್ಟಳು. ಸ್ವಾಮಿಗಳು ಒಂದೊಂದು ಪ್ರಶ್ನೆ ಕೇಳುತ್ತ ಹೊರಟರು. ಅವಳ ಮೈಮೇಲಿದ್ದ ಗಾಳಿ ಉತ್ತರಿಸುತ್ತ ಹೋಯಿತು. ತಾನು ಇಂಥವಳೆಂದೂ ಹಗೆಗಳು ಅನ್ಯಾಯದಿಂದ ತನ್ನನ್ನು ಸಾಯಿಸಿದರೆಂದೂ ಅದಕ್ಕಾಗಿ ದೆವ್ವವಾಗಿ ಅವರ ಮನೆಯ ಇಷ್ಟು ಜನರನ್ನು ಆಹುತಿ ತೆಗೆದುಕೊಂಡೆನೆಂದೂ ಗಾಳಿ ಹೇಳಿತು. ಬಾವಿಯ ಬಳಿ ನೀರು ಕುಡಿಯಲು ಬಂದಾಗ ಬಾವಿಗೆ ತಳ್ಳಿದರೆಂದೂ ಅವರ ಹೆಸರು ಇಂಥದೆಂದೂ ಗಾಳಿ ಹೇಳಿದ ಮಾತುಗಳು ವಾಸ್ತವ ವಿಷಯಗಳಾಗಿದ್ದವು. ಇಷ್ಟು ಜನರನ್ನು ಕೊಂದು ಗಳಿಸಿದ ಶಾಪ ಸಾಕೆಂದು, ಇನ್ನು ಆ ಕ್ಷೇತ್ರದಲ್ಲಿ ತಂಗಿ ಪಾಪ ಪರಿಹಾರ ಮಾಡಿಕೊಳ್ಳಬೇಕೆಂದೂ ಒಪ್ಪಿಗೆಯಿದ್ದರೆ ಏನಾದರೂ ಗುರುತು ಕೊಡತಕ್ಕದ್ದೆಂದೂ ಸ್ವಾಮಿಗಳು ಕೇಳಿದಾಗ ಗಾಳಿಹಿಡಿದ ಹೆಣ್ಣು ತನ್ನ ತಲೆಯಿಂದ ಒಂದು ಹಿಡಿಗೂದಲನ್ನು ಕಿತ್ತುಕೊಟ್ಟಿತು.

ಆಮೇಲೆ ಆಕೆಯ ಮೈಮೇಲೆ ಮತ್ತೆ ದೆವ್ವ ಇರಲಿಲ್ಲವೆಂದೂ ಸುಖವಾಗಿದ್ದಾಳೆಂದೂ ತಿಳಿದುಬಂತಂತೆ. ವ್ಯಕ್ತಿಯಲ್ಲಿ ಉಂಟಾಗಿರಬಹುದಾದ ಭ್ರಮೆಯೇ ಇಂಥ ನಂಬಿಕೆಗಳಿಗೆ ಮೂಲವಿರಬೇಕು ಎಂದು ಸಮಾಧಾನಪಡಬಹುದಾದರೂ, ಈ ನಿಟ್ಟಿನಲ್ಲಿ ಅಧ್ಯಯನ ಸಂಶೋಧನೆ ನಡೆಯಬೇಕಿದೆ.

ಮೈಮೇಲೆ ದೆವ್ವ ಬಂದವರಿಗೆ ಕುತ್ತಿಗೆಯಲ್ಲಿ, ರಟ್ಟೆಯಲ್ಲಿ ಅಥವಾ ನಡುವಿನಲ್ಲಿ -ಮಂತ್ರವಾದಿ ಮಂತ್ರಿಸಿದ ದಾರ ಅಥವಾ ತಾಯಿತದ ಯಂತ್ರ ಮಾಡಿ ಕಟ್ಟುತ್ತಾನೆ. ಮಂತ್ರಿಸಿದ ಬರೀ ಚೀಟಿ ಕೂಡ ಕಟ್ಟುತ್ತಾನೆ. ತಗಡಿನ ಮೇಲೆ, ಚಲ್ಮದ ಮೇಲೆ, ಕಾಗದದ ಮೇಲೆ ಮಾಂತ್ರಿಕ `ಚಿಹ್ನೆಗಳನ್ನೋ, ಅಕ್ಷರಗಳನ್ನೋ ಬರೆಯುತ್ತಾನೆ. ಮಂತ್ರಕ್ಕೆ ಮಣ್ಣಿನ ಪ್ರತಿಮೆ, ವೀಳೆಯದೆಲೆ, ಅಡಿಕೆ, ತೆಂಗಿನಕಾಯಿ ಮೊದಲಾದ ನಿರ್ದಿಷ್ಟ ವಸ್ತುಗಳೇ ಬೇಕಾಗುತ್ತವೆ.

ಮಂತ್ರವಾದಿ ತನ್ನೀ ವಿದ್ಯೆಯನ್ನು ಯಾರಿಗೂ ಹೇಳಿಕೊಡುವುದಿಲ್ಲ. ಸಾಯುವಾಗ ತನ್ನ ಮಗನಿಗೆ ಮಾತ್ರ ಹೇಳುತ್ತಾನೆ. ದಾರ-ತಾಯಿತಗಳನ್ನು ಈತನಿಂದ ಕಟ್ಟಿಸಿಕೊಂಡರೆ, ಈಗಾಗಲೇ ಮೈಮೇಲೆ ಬಂದ ದೇವರು/ದೆವ್ವ ಬಿಟ್ಟುಹೋಗುತ್ತದೆ; ಬರಬಹುದಾದುದು ಬರುವುದಿಲ್ಲ. ಈ ನಂಬಿಕೆಯೇ ಮಂತ್ರಗಾರನ ಮೇಲೆ ಗ್ರಾಮೀಣರು ಅಷ್ಟೊಂದು ವಿಶ್ವಾಸವಿರಿಸಲು ಕಾರಣವಾಗಿದೆ. ಹಾಳುಬಾವಿ, ಮರ, ಸುಡುಗಾಡುಗಳಲ್ಲಿಯ ಯಾವುದೇ ದೆವ್ವ, ಮನೆ ಪ್ರವೇಶಿಸಬಾರದೆಂಬ ಕಾರಣದಿಂದ, ಎಂಟೂ ದಿಕ್ಕುಗಳಲ್ಲಿ, ಸೀಸೆಯಲ್ಲಿ ಮಂತ್ರಿಸಿದ ತಾಯಿತ ನಿಂಬೆಹಣ್ಣು ಮೊದಲಾದುವನ್ನು ಹಾಕಿ ಹುಗಿಯುತ್ತಾರೆ. ಇದು ಹೊರದೆವ್ವಗಳಿಗೆ ಬೇಲಿಯಿದ್ದಂತೆ. ಹಾಗೆಯೇ ಗಾಳಿ ದೈವ -ದೆವ್ವ ಮೈಯಲ್ಲಿ ಸೇರಿದ್ದರೆ ಮಂತ್ರಿಸಿದ ನಿಂಬೆಹಣ್ಣನ್ನು ಮೂರು ದಾರಿ ಸಂಗಮಿಸಿದಲ್ಲಿ ಮೂರೂ ಸಂಜೆ ಹೊತ್ತಿನಲ್ಲಿ ಇಟ್ಟು ಬರಬೇಕು.

ಇವನ್ನು ಮೊದಲು ಯಾರು ಗಮನಿಸುತ್ತಾರೊ, ಅವರಿಗೆ ಇವು ಸೇರಿಕೊಳ್ಳುತ್ತವೆ. ಮೊದಲಿನವರಿಗೆ ಮರಳಿ ಬರುವುದಿಲ್ಲ. ಮಂತ್ರಿಸಿದ ನಿಂಬೆಹಣ್ಣನ್ನು ಒದ್ದು ದಾಟಿದರೆ, ಅದರಲ್ಲಿಯ ದೇವ-ದೆವ್ವ, ಅಂತಹವರಿಗೇ ಬಡಿದುಕೊಳ್ಳುವುದಿಲ್ಲ. ಮಂತ್ರವಾದಿ ಮಂತ್ರ ಮಾಡುವಾಗ ಏನಾದರೂ ತಪ್ಪಿದರೆ, ಅವು ಈತನ ಮೇಲೆ ಬರುತ್ತವೆಯೆಂಬ ನಂಬಿಕೆಯೂ ಇದೆ. ಮಂತ್ರಿಸಿದ ಬೊಂಬೆ ಸುಡುವುದರ ಮೂಲಕವೂ ಗಾಳಿದೆವ್ವ ಬಿಡಿಸುತ್ತಾನೆಂಬ ನಂಬಿಕೆಯಿದೆ.

ಈ ಮಂತ್ರವಾದಿಗಳು ಮಾಟ ಮಾಡುವುದರ ಮೂಲಕ ಇನ್ನೊಬ್ಬರಿಗೆ ತೊಂದರೆ ಕೊಡುವುದೂ ಉಂಟು. ಇವರು ಮಂತ್ರದಿಂದ ಸುಂಟರಗಾಳಿ ಸೃಷ್ಟಿಸಿ, ಇನ್ನೊಬ್ಬರಿಗೆ ಕೇಡು ಬಗೆಯುತ್ತಾರೆಂಬ ನಂಬಿಕೆ ಅನೇಕ ಕಡೆ ಇದೆ. ಮಂತ್ರದಿಂದ ಸುಂಟರಗಾಳಿಯನ್ನು ತಡೆ ಹಿಡಿಯಲು ಸಾಧ್ಯ. ಮಂತ್ರವಾದಿ ಇಂಥ ಅದ್ಭುತ ಶಕ್ತಿ ಹೊಂದಿರುತ್ತಾನೆಂಬ ನಂಬಿಕೆಯೂ ಇದೆ. ಇಂಥ ಮಾಟಗಾರನನ್ನು ಜನ ನಂಬುತ್ತಾರೆ. ಗೌರವದಿಂದ ಕಾಣುತ್ತಾರೆ.

ನೈಸರ್ಗಿಕ ಶಕ್ತಿಯನ್ನು ಕೈವಶ ಮಾಡಿಕೊಂಡಿದ್ದೇನೆ ಎಂಬ ನಂಬಿಕೆ ಸಾಮಾನ್ಯರಲ್ಲಿ ಹುಟ್ಟುವಂತೆ ಮಾಡಿ, ಅವರಿಗೆ ಮಂಕುಬೂದಿ ಎರಚಿರುತ್ತಾನೆ; ದುರ್ಬಲ ಮನಸ್ಸಿನವರನ್ನು ತನ್ನ ಬುಟ್ಟಿಯಲ್ಲಿ ಹಾಕಿಕೊಂಡಿರುತ್ತಾನೆ. ರಾಮಾಯಣ – ಮಹಾಭಾರತಗಳಲ್ಲಿಯೂ ಮಾಟ-ಮಂತ್ರ-ತಂತ್ರ ಯಂತ್ರಗಳು ಉಲ್ಲೇಖವಾಗಿವೆ.

ದೆವ್ವ ಭಾರತೀಯ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗದಂತಿದೆ. ಈ ಜನ ನಂಬಿಕೆಗಳ ಮೂಲಕ ಗಾಳಿ ದೆವ್ವಗಳಿಗೆ ಜೀವಕೊಟ್ಟು ರೂಪಕೊಟ್ಟು, ಮಾತನಾಡಿಸಿ, ಕುಣಿಸಿದ್ದಾರೆ. ಈ ದೆವ್ವನ ಬಗೆಗೆ ತುಂಬ ಕುತೂಹಲಕರ ಸಂಗತಿಗಳನ್ನು ಜನಪದ ಮನಸ್ಸು ಕಲ್ಪಿಸಿರುವುದು ಚಕಿತಗೊಳಿಸುತ್ತದೆ.

ಗ್ರಾಮೀಣ ಜನ ಎಲ್ಲ ಬಿಡಬಹುದು ; ಜಾತಿ ಬಿಟ್ಟರೂ ಬಿಡಬಹುದು; ಈ ದೆವ್ವದ ಬಗೆಗಿನ ನಂಬಿಕೆಯನ್ನು ಬಿಡಲಾರರು. ಬಹುಜನ ವಿಚಾರವಾದಿಗಳು, ಏಕೆ ? ವಿಜ್ಞಾನಿಗಳೂ ಕೂಡ ಇದರ ಬಗೆಗೆ ನಂಬಿಕೆಯುಳ್ಳವರಾಗಿದ್ದಾರೆ. ಅಕಸ್ಮಾತ್ ಇದು ಇದ್ದರೆ, ತಮಗೇನಾದರೂ ಕೇಡು ಬಗೆದರೆ ಎಂಬ ಭಯದಿಂದ ಎಲ್ಲರೂ ನಂಬುತ್ತಾರೆ. ನಂಬುತ್ತಲೇ ಬಂದಿದ್ದಾರೆ. ಮನಸ್ಸಿನ ಈ ನಂಬಿಕೆ – ಕಲ್ಪನೆ ದೂರಾಗಲು ದೇವರೇ ಬರಬೇಕಲ್ಲವೆ!!

ಈ ದೆವ್ವನ ಬಗೆಗೆ ಜನ ನಂಬಿಕೆಯನ್ನಿರಿಸಿಕೊಂಡುದನ್ನು ತುಂಬ ಸುಲಭವಾಗಿ ಗುರುತಿಸಬಹುದು. ಆದಿಮಾನವ ತನಗೆ ಯಾವುದೇ ಕಷ್ಟ ತೊಂದರೆಯಾದಾಗ, ಪ್ರಕೃತಿ ಮುನಿಸಿಕೊಂಡಾಗ, ರೋಗರುಜಿನ ಬಂದಾಗ ಅವುಗಳಿಗೆ ನಿಶ್ಚಿತಕಾರಣ ತಿಳಿಯಲಾರದೆ, ಭಯಗ್ರಸ್ತನಾಗಿ, ಅವೆಲ್ಲಕ್ಕೆ ದೆವ್ವ-ಪಿಶಾಚಿಗಳೆ ಕಾರಣ, ಅಥವಾ ದೇವರಶಾಪ ಎಂದು ಊಹಿಸಿದ.

ತನ್ನ ಗುಂಪಿನಲ್ಲಿ ಯಾರಾದರೂ ಮತಿಭ್ರಮಣೆಗೊಳಗಾಗಿ ಕೂಗಾಟ, ಚೀರಾಟ ಆರಂಭಿಸಿದಾಗ ತಾಳ್ಮೆಗೆಟ್ಟ ಆತ, ಇವರಿಗೆ ದೆವ್ವ ಬಡಿದಿರಬೇಕು ಎಂದು ಕಲ್ಪಿಸಿದ. ‘ಐರೋಪ್ಯ’ ದೇಶಗಳಲ್ಲಿ ಮಾನಸಿಕ ಕಾಯಿಲೆಗಳಿಗೆ ತುತ್ತಾದವರನ್ನು ಪಿಶಾಚಿಗಳು ಎಂದು ನಂಬಿ, ಅವರಿಂದ ಇತರರಿಗೆ ತೊಂದರೆಯಾಗುತ್ತದೆ ಎಂದು ಭಾವಿಸಿ, ಅವರನ್ನು ಜೀವಂತ ಸುಟ್ಟುಬಿಡುತ್ತಿದ್ದರು. ಹಾಗೆಯ ಕೆಲವು ವಿಧಿ ವಿಧಾನಗಳಿಂದ ಕೆಲವರು ದುಷ್ಟಶಕ್ತಿಗಳನ್ನು ವಶಪಡಿಸಿಕೊಂಡು ಬೇರೆಯವರಿಗೆ ಕಷ್ಟ, ಕಾಯಿಲೆ, ಕಸಾಲೆಗಳನ್ನು ಹಾಗೂ ಸಾವನ್ನು ತರಬಲ್ಲರು ಎಂಬ ನಂಬಿಕೆ ಜಗತ್ತಿನ ಎಲ್ಲ ಜನಾಂಗಗಳಲ್ಲಿ ಕಂಡುಬರುತ್ತದೆ. ಮಾಟ ಮತ್ತು ಮಂತ್ರ ಪ್ರಪಂಚದಾದ್ಯಂತ ವಿವಿಧ ಹೆಸರುಗಳಲ್ಲಿ ಅಂದಿನಿಂದ ಇಂದಿನವರೆಗೂ ಪ್ರಚಲಿತವಿದೆ.”

ಏನೇ ಆದರೂ ದೆವ್ವ ಎನ್ನುವುದು ನಮ್ಮ ಚಿತ್ರದ ವಿಕಲ್ಪವೇ ಹೊರತು, ಹೊರಜಗತ್ತಿನ ಪರಿಕಲ್ಪನೆಯಲ್ಲ. ಅದರ ನಿಜವಾದ ಇರವಿನ ಬಗೆಗೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ. ‘ಭೂತ ಪ್ರೇತಗಳ ಬಗೆಗೆ ಇನ್ನೂ ಯಾರೂ ಕಟ್ಟಕಡೆಯ ತೀರ್ಮಾನ ಹೇಳಿಲ್ಲ ” ಎಂಬ ದೇಜಗೌ ಅವರ ಮಾತೂ ಗಮನಿಸುವಂಥದು. ಈ ಮಾನಸಿಕ ವ್ಯಾಪಾರ ಕುರಿತ ವಿಶ್ಲೇಷಣೆ ನಡೆಯಬೇಕಿದೆ. ‘ಫ್ರಾಯ್ಡ್ ‘ನ ನಂತರ ಈ ದಿಶೆಯಲ್ಲಿ ನಮ್ಮ ಸಂಶೋಧನೆ ಮುಂದುವರಿದಂತೆ ಕಾಣುತ್ತಿಲ್ಲ.

ಗಾಳಿಗೇ ದೆವ್ವ ಎನ್ನಲು ಕಾರಣ

ಮೈಯಲ್ಲಿ ಬಂದ ದೆವ್ವ ಕಣ್ಣಿಗೆ ಕಾಣುವುದಿಲ್ಲ ಎಂಬ ನಂಬಿಕೆಯಿದೆ. ಗಾಳಿ ಕೂಡ ಕಣ್ಣಿಗೆ ಕಾಣುವುದಿಲ್ಲ. ಅದಕ್ಕೆ ಪ್ರಾಣವೆಂತಲೂ ಕರೆಯುತ್ತಾರೆ. ಪ್ರಾಣ ಇಡೀ ದೇಹವನ್ನು ಆವರಿಸಿರು ಇದೆ. ದೆವ್ವ-ಕೂಡ (ಏಕಕಾಲದಲ್ಲಿ ಅಲ್ಲ) ಮೈ-ಮನ ತುಂಬಿರುತ್ತದೆಂಬ ಭಾವನೆಯಿದೆ. ಹೀಗೆ, ಬೀಸುವ ಗಾಳಿ ಪ್ರಾಣರೂಪದಲ್ಲಿ ಮೈಯನ್ನೆಲ್ಲ ಹೇಗೆ ಆವರಿಸಿರುತ್ತದೆಯೋ ಹಾಗೆಯೇ ದೆವ್ವ ಕೂಡ ಗಾಳಿರೂಪದಲ್ಲಿ ಶರೀರವನ್ನು ಪ್ರವೇಶಿಸಿರುತ್ತದೆನ್ನುವ ನಂಬಿಕೆಯೇ ಬಹುಶಃ ಗಾಳಿಗೂ, ದೆವ್ವ ಎನ್ನುವ ಕಲ್ಪನೆಗೂ ಸಂಬಂಧ ಇದ್ದಂತೆ ತೋರುತ್ತದೆ. ಒಂದೇ ನುಡಿಯಲ್ಲಿ ಹೇಳುವುದಾದರೆ-ಗಾಳಿಯ ನಿರಾಕಾರತ್ವ – ಸ್ಪರ್ಶಾದಿ ಕೆಲವು ಲಕ್ಷಣಗಳು, ದೆವ್ವಗಳಲ್ಲಿ ಕಾಣುವುದರಿಂದ, ಗಾಳಿಯನ್ನೇ ದೆವ್ವ ಎಂದು ಗ್ರಾಮೀಣ ಜನ ಕರೆಯಲು ಕಾರಣವಾದಂತೆ ತೋರುತ್ತದೆ.

ಈ ಗಾಳಿ, ದೆವ್ವ ಎನ್ನುವ ನಂಬಿಕೆ ಪಟ್ಟಣಿಗರಿಗಿಂತಲೂ ಹಳ್ಳಿಗರಲ್ಲಿಯೇ ಹೆಚ್ಚು ಕಾರಣ, ಬೇರೆ ನಿಟ್ಟಿನಲ್ಲಿ ಆಲೋಚಿಸಲು ಅವರಿಗೆ ಅವಕಾಶಗಳೇ ಇರುವುದಿಲ್ಲ. ವೈಚಾರಿಕ ಕೊರತೆಯೂ ಇನ್ನೊಂದು ಕಾರಣ. ಹಳ್ಳಿಗಳಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಇಲ್ಲದಿರುವುದು, ಮೇಲಾಗಿ ಬಡತನ, ಎಲ್ಲಕ್ಕೂ ಹೆಚ್ಚಾಗಿ ಪರಂಪರಾಗತವಾಗಿ ಬಂದ ನಂಬಿಕೆಗಳಲ್ಲಿ ವಿಶ್ವಾಸ. ಹೀಗಾಗಿ, ಅತ್ಯಂತ ಪುರಾತನ ಕಾಲದಿಂದಲೂ, ಇಂದಿನ ಈ ಕ್ಷಣದವರಗೂ, ದವ್ವ ಮಾಟ ಮಂತ್ರಗಳ ಬಗೆಗೆ ನಂಬಿಕೆಗಳು ಕಂಡುಬರುತ್ತವೆ. ದೆವ್ವ – ಕುರಿತ ನಂಬಿಕೆಗಳು ಅಧಿಕ. ದೆವ್ವ ಭೂತ ನೋಡಿದ್ದೇವೆ; ಅವುಗಳ ಜೊತೆಗೆ ಮಾತನಾಡಿದ್ದೇವೆ.

ಅವು ಹಿಂದು ಮುಂದಾಗಿ ಗಾಳಿಯಲ್ಲಿ ಸಂಚರಿಸುತ್ತವೆ; ಸತ್ತವರ ಆತ್ಮಗಳೇ ದೆವ್ವ, ಕಬ್ಬಿಣಕ್ಕೆ ದೆವ್ವ ಅಂಜುತ್ತದೆ, ರಂಗೋಲಿಗೆ ದೆವ್ವ ಹೆದರುತ್ತದೆ. ಅತಿ-ಲೋಭಿ, ಬಾಣಂತಿ, ಕೆಟ್ಟವರು, ಲಂಬಾಣಿಗಳು ಸತ್ತರೆ ತೀವ್ರವಾಗಿ ದೆವ್ವ ಆಗುತ್ತಾರೆ ಎಂದು ವಾದಿಸುವವರೂ, ಸಾಧಿಸುವವರೂ ಜಾನಪದರಲ್ಲಿ ಅಸಂಖ್ಯ.

ಗಾಳಿ ಓಡಿಸಲು, ಗಾಳಿಯಾದ ವ್ಯಕ್ತಿಗೆ ನಾನಾ ರೀತಿಯ ಹಿಂಸೆಯನ್ನು ಮಂತ್ರವಾದಿ ನೀಡುತ್ತಾನೆ. ಬೇವಿನಸೊಪ್ಪು, ಪೊರಕೆ, ಚಪ್ಪಲಿಯಿಂದ ಹೊಡೆಯುವುದು; ಕಿವಿ ಹರಿಯುವಂತೆ, ಕೂದಲು ಕೀಳುವಂತೆ ಜಗ್ಗುವುದು, ಕೈ ಕಾಲು ಕಿರಿಬೆರಳನ್ನು ಹತ್ತಿಕ್ಕಿ ಹಿಡಿಯುವುದು, ಬೆನ್ನ ಮೇಲೆ ಭಾರ ಹೊರಿಸುವುದು…. ಇತ್ಯಾದಿ ಮಂತ್ರವಾದಿ ಕೊಡುವ ಹಿಂಸೆಗಳಿಂದ, ಗಾಳಿ ಬಿಟ್ಟು ಓಡುತ್ತದೆಂಬ ನಂಬಿಕೆಯಿದೆ.

ಈ ನಂಬಿಕೆಗಳೇ ಕಾಲಾನಂತರದಲ್ಲಿ ಜನಪದ ಕತೆಗಳ ಹುಟ್ಟಿಗೆ ಕಾರಣವಾಗುತ್ತವೆ. ಗಾಳಿ, ದೆವ್ವ ಎನ್ನುವ ನಂಬಿಕೆಯ ಕಾರಣದಿಂದ ಜನಪದರ ಬದುಕು ದುರಂತಮಯವಾಗಿವೆ. ಸಮಾಜದಲ್ಲಿ ಇದರಿಂದ ಶ್ರೀಸಾಮಾನ್ಯರಿಗೇ ಹಾನಿ ಹೆಚ್ಚು.

ದೆವ್ವ ಗಾಳಿ:

‘ದೆವ್ವನ’ ಆರ್ಭಟ ಈ ಗಾಳಿಯಲ್ಲಿ ಕಾಣಬರುವುದರಿಂದ ಇದಕ್ಕೆ ‘ದೆವ್ವಗಾಳಿ’ ಎನ್ನುತ್ತಾರೆ. ಈ ಗಾಳಿ ಬೀಸಲು ಸುರು ಮಾಡಿದರೆ ದೆವ್ವ ಬರುತ್ತದೆನ್ನುವ ನಂಬಿಕೆಯಿದೆ. ಆದುದರಿಂದ ದೆವ್ವಗಾಳಿ ಎದ್ದಾಗ ಅದು ತಮ್ಮ ಹತ್ತಿರ ಸುಳಿಯಬಾರದೆಂದು ಅದಕ್ಕೆ ‘ಧೂ’ ಎಂದು ಉಗುಳುತ್ತಾರೆ. ಉಗುಳುವುದರಿಂದ ದೆವ್ವಗಾಳಿ ಹತ್ತಿರ ಬರುವುದಿಲ್ಲವೆಂಬ ನಂಬಿಕೆ.

ಈ ಗಾಳಿ ಬೀಸುವಾಗೆ, ಅದರಲ್ಲಿ ಒಂದಿಷ್ಟು ಉಪ್ಪು ಹಾಕಿದರೆ ಅದರಲ್ಲಿರುವ ದೆವ್ವ ಕಣ್ಣಿಗೆ ಕಾಣಿಸುತ್ತದೆ ಎಂಬ ನಂಬಿಕೆಯೂ ಇದೆ. ‘ದೆವ್ವಗಾಳಿ ಬಿಟ್ಟಾಗ ಅಗ್ಗಿಷ್ಟಗಿ (ಬಾಣಂತಿ ಬೆಂಕಿ) ಹೊರಗಿಡಬಾರದು’ ಎಂಬ ನಂಬಿಕೆಯಲ್ಲಿ, ದೆವ್ವ ಅಗ್ಗಿಷ್ಟಿಗೆಯಲ್ಲಿ ಸೇರಿಕೊಂಡು ಬಾಣಂತಿಗೆ ಮೆಟ್ಟಬಾರದೆನ್ನುವ ಎಚ್ಚರಿಕೆಯ ಸೂಚನೆ ಇದ್ದಂತೆ ತೋರುತ್ತದೆ. ಗಾಳಿಗೆ ಅಗ್ಗಿಷ್ಟಗಿಯನ್ನು ತೆರೆದಿಟ್ಟರೆ, ಅದರಲ್ಲಿರುವ ಕಿಡಿಗಳು ಹಾರಿಹೋಗಿ ಅನಾಹುತವಾಗುವ ಸಂಭವ ಇರುತ್ತದೆ. ಆ ಕಾರಣದಿಂದಲೂ ಮೇಲಿನ ಮಾತನ್ನು ಆಡಿರುವ ಸಾಧ್ಯತೆಯಿದೆ. ‘ದೆವ್ವಗಾಳಿಗೆ ಹಾರಿಹೋದ ಬಟ್ಟೆಗಳನ್ನು ಮರಳಿ ತರಬಾರದು, ಏಕೆಂದರೆ ದೆವ್ವ ಮನೆಯೊಳಗೆ ಬರುತ್ತದೆಂಬ ನಂಬಿಕೆಯೂ ಇದೆ.

ಒಟ್ಟಿನಲ್ಲಿ ನಂಬಿಕೆ ಜಾನಪದ ಸಂಸ್ಕೃತಿಯ ಜೀವಾಳ. ಅಂತೆಯೇ ಜಾನಪದರು ‘ದೆವ್ವ’ನ ಬಗೆಗೆ ಅಚಲ ನಂಬಿಕೆಯಿರಿಸಿಕೊಂಡು ಬಂದಿದ್ದಾರೆ. ಜಾನಪದ ಸಮಾಜದ ಈ ನಂಬಿಕೆಯನ್ನು ಪ್ರಶ್ನಿಸುವ ಹಕ್ಕು ನಮಗಿಲ್ಲವಾದರೂ, ಈ ದೆವ್ವನ ಬಗೆಗಿನ ನಂಬಿಕೆ ಆಚರಣೆಗಳ ಹಿಂದಿರುವ ಜಾನಪದ ಮನಸ್ಸನ್ನು ನಮ್ಮ ಪಾರಂಪರಿಕ ಸಂಸ್ಕೃತಿಯ ತಿಳಿವಳಿಕೆಯ ದೃಷ್ಟಿಯಿಂದ ಅಧ್ಯಯಿನಿಸುವುದು ತಪ್ಪಲ್ಲವಲ್ಲ!

_________________

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment