Janapada Parijata: ಹೊಸ ಭರವಸೆ ಮೂಡಿಸುವ ಪಾರಿಜಾತ ಕಲಾವಿದ ಗೋಕಾಕದ ಬೆಟಗೇರಿ
Janapada Parijata: ಬೆಳಗಾವಿ ಜಿಲ್ಲೆಯ ಗೋಕಾಕ ಕನ್ನಡ ಜಾನಪದ ರಂಗಭೂಮಿಗೆ ತನ್ನದೆ ಬೆಲೆಯುಳ್ಳ ಕಾಣಿಕೆ ನೀಡಿದೆ. ಭಕ್ತ ಸಿರಿಯಾಳ, ನಿಜಗುಣ ಶಿವಯೋಗಿ, ಸತ್ಯವಾನ ಸಾವಿತ್ರಿ ಹಾಗೂ ಶ್ರೀಕೃಷ್ಣ ಪಾರಿಜಾತದಂಥ ರಂಗ ಕಲೆಗಳ ಪ್ರದರ್ಶನಕ್ಕೆ ಗೋಕಾಕ ಪರಿಸರ ಹೆಸರುವಾಸಿ. ಗೋಕಾಕದ ಹಿರಿಯ ಜಾನಪದ ರಂಗ ಕಲಾವಿದ ಶ್ರೀ ನಿಂಗಯ್ಯಸ್ವಾಮಿ ಪೂಜಾರಿ ಅವರಿಂದ ನಿಜಗುಣ ಶಿವಯೋಗಿ-ಸಣ್ಣಾಟ ಈ ಭಾಗದಲ್ಲಿ ತುಂಬ ಪ್ರಖ್ಯಾತಿಯನ್ನು ಪಡೆದರೆ, ಮಾರುತಿ ಮಾಸ್ತರ ತಟ್ಟಿಮನಿ ಅವರಿಂದ ಸತ್ಯವಾನ ಸಾವಿತ್ರಿ – ಈ ಭಾಗದ ಸುಪ್ರಸಿದ್ದ ರಂಗ ಕಲೆಯೆನಿಸಿದೆ.
ಹಾಗೆಯೇ ಇದೇ ಭಾಗದ ಕೆಮ್ಮನಕೋಲ ಪಾರಿಜಾತ ಕಂಪನಿಯ ಕೃಷ್ಣ ಪಾತ್ರಧಾರಿ ಶ್ರೀಯಲ್ಲಪ್ಪ ಪೂಜೇರ ಅವರಿಂದ ಶ್ರೀಕೃಷ್ಣ ಪಾರಿಜಾತ ಸಾವಿರಾರು ಪ್ರಯೋಗಗಳ ಮೂಲಕ ಅತ್ಯಂತ ಜನಪ್ರಿಯವಾಗಿದೆ.
ಈ ಹಿರಿಯ ನಟರ ಅಪರೋಕ್ಷ ಪ್ರಭಾವ-ಪ್ರೇರಣೆಗಳಿಂದ ಇಲ್ಲಿಯ ಕೆಲ ಯುವಕರು ರಂಗ ಕಲಾವಿದರಾಗಿ ಸೃಷ್ಟಿಗೊಳ್ಳುತ್ತಿರುವದು ಸಂತೋಷದ ಸಂಗತಿ. ಅವರಲ್ಲಿ ಸುಮಾರು ೩೮ ವರ್ಷದ ಗೋಕಾಕದ ಶ್ರೀ ಈಶ್ವರಚಂದ್ರ ಬೆಟಗೇರಿಯವರು, ಪಾರಿಜಾತ ಕೃಷ್ಣ ಮತ್ತು ಕೊರವಂಜಿ ಪಾತ್ರಗಳೆರಡಕ್ಕೂ ಜೀವ ತುಂಬಿ ನಾಡಿನುದ್ದಗಲಕ್ಕೂ ಶ್ರೀಕೃಷ್ಣ ಪಾರಿಜಾತವನ್ನು ಪ್ರದರ್ಶಿಸುವುದರ ಮೂಲಕ ಅದನ್ನು ಉಳಿಸಲು ಶ್ರಮಿಸುತ್ತಿರುವ ಯುವ ರಂಗ ಕಲಾವಿದ.
ಈಶ್ವರಚಂದ್ರ ಬಾಲಕನಿರುವಾಗಲೇ ಕಲೆಯ ಗೀಳನ್ನು ಅಂಟಿಸಿಕೊಂಡವ. ೧೯೬೬ರ ಸುಮಾರಿಗೆ ಇವರ ತಂದೆ ಶಿವಪುತ್ರಪ್ಪ ಶಿವರಾಯಪ್ಪ ಬೆಟಗೇರಿಯವರು ತಮ್ಮ ಹುಟ್ಟೂರಾದ ಬೆಟಗೇರಿಯಲ್ಲಿ ಮೊಟ್ಟಮೊದಲು ಶ್ರೀಕೃಷ್ಣ ಪಾರಿಜಾತ ಮೇಳ ಕಟ್ಟಿ, ಊರೂರು ಅಲೆದು ಪಾರಿಜಾತ ಪ್ರದರ್ಶಿಸಿ, ಅದರ ಪ್ರಸಾರ ಕಾರಕೈಕೊಂಡಿದ್ದರು.
ಈ ಮೇಳದಲ್ಲಿ ಬಾಲಗೋಪಾಲನ ಪಾತ್ರದ ಮೂಲಕ ಪ್ರವೇಶ ಪಡೆದ ಬಾಲ ನಟ ಬೆಟಗೇರಿ ೩-೪ ವರ್ಷ ಇದೇ ಪಾತ್ರವನ್ನು ನಿರ್ವಹಿಸುತ್ತ ಬಂದ. ಆರ್ಥಿಕ ಭದ್ರತೆ ಇಲ್ಲದ ಮೂಲಕ ಈ ಕಂಪನಿ ನಾಮಾವಶೇಷವಾಯಿತು. ಕಂಪನಿ ಬದುಕಿದ್ದ ವರುಷಗಳಲ್ಲಿ ಖರ್ಚುವೆಚ್ಚ ತಾವೇ ಭರಿಸಿರುವುದರಿಂದ ಶಿವಪುತ್ರಪ್ಪನವರ ಬಡತನ ಹೆಚ್ಚಾಯಿತು.
ಆದರೂ ಮಗ ಈಶ್ವರಚಂದ್ರರನ್ನು ಪಾರಿಜಾತದಲ್ಲಿ ನಟನೆಂದು ತೊಡಗಿಸಲು ಬಯಸಿದ್ದರು. ಅದರಲ್ಲಿಯೂ ತನ್ನ ಮಗ ಪಾರಿಜಾತದ ಕೃಷ್ಣನಾಗಿ ರಂಗಭೂಮಿಯ ಮೇಲೆ ಮಿಂಚಬೇಕೆಂಬ ಆಸೆ ಹೊತ್ತಿದ್ದರು. ಆದರೆ ಆಟದಿಂದ ಮಗನ ಭವಿಷ್ಯ ರೂಪುಗೊಳ್ಳಲಾರದು ಎಂಬ ವಿವೇಕದ ನುಡಿಯನ್ನು ಆತನ ಗುರುಗಳಿಂದ ತಿಳಿದ ಶಿವಪುತ್ರಪ್ಪ ಮಗನಿಗೆ ಶಿಕ್ಷಣ ಮುಂದುವರೆಸಲು ಅವಕಾಶ ಕಲ್ಪಿಸಿಕೊಟ್ಟರು.
ದ್ವಿತೀಯ ವರ್ಷದ ಪಿಯುಸಿ ಪಾಸು ಮಾಡಿದ ಬೆಟಗೇರಿಯವರು ಜೀವನ ನಿರ್ವಹಣೆಗಾಗಿ ಸಂಕೇಶ್ವರದಲ್ಲಿ ಟೆಲಿಫೋನ್ ಆಪರೇಟರ್ ಸೇವೆಯನ್ನು ಆರಂಭಿಸಿದರು. ಮುಂದೆ ೧೯೬೨ರಲ್ಲಿ ಗೋಕಾಕದ ದೂರವಾಣಿ ಇಲಾಖೆಗೆ ವರ್ಗವಾಗಿ ಬಂದರು. ಆಗ ಇಲ್ಲಿ ಸತ್ಯವಾನ ಸಾವಿತ್ರಿ ಖ್ಯಾತಿಯ ಶ್ರೀ ಮಾರುತಿ ಮಾಸ್ತರ ತಟ್ಟಿಮನಿ ಅವರು ‘ಗಜಾನನ ಬಯಲಾಟ ಸಂಘ’ ದ ಮೂಲಕ ಈ ಸಣ್ಣಾಟವನ್ನು ಪ್ರದರ್ಶಿಸುತ್ತಿದ್ದರು.
ತಟ್ಟಿಮನಿ ಅವರಿಗೆ ಸತ್ಯವಾನ ಪಾತ್ರ ವಹಿಸಲು ರೂಪುಳ್ಳ ಹುಡುಗ ಬೇಕಾಗಿದ್ದ. ಹುಡುಗನಿಗಾಗಿ ಅವರ ಅನ್ವೇಷಣೆ ನಡೆದಿತ್ತು. ತಟೀಮನಿ ಅವರ ಇಂಗಿತವನ್ನರಿತ ಅಭಿಮಾನಿ ಶ್ರೀ ಗುರುಸಿದ್ದಪ್ಪ ಭರಭರಿ ಸಿದ್ದಾರೂಢ ಆಶ್ರಮ ಗೋಕಾಕ ಇವರು ತಮ್ಮಲ್ಲಿಗೆ ಭಜನೆಗೆ ಬರುತ್ತಿದ್ದ ಬೆಟಗೇರಿಯವರನ್ನು, ಸುಂದರ ರೂಪ ಮಾತ್ರದಿಂದ ಈ ಬಯಲಾಟದೊಳಗೆ ಸೇರಿಸಿದರು.
ಸತ್ಯವಾನನ ಪಾತ್ರ ಬೆಟಗೇರಿ ಅವರಿಗೆ ಕೊಡಲಾಯಿತು. ಈ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುತ್ತ ಅದರ ಜೊತೆಯಲ್ಲಿ ನಾರದ, ಮಂತ್ರಿ, ಪರಮೇಶ್ವರ ಹೀಗೆ ವೈವಿಧ್ಯಮಯ ಪುರುಷ ಪಾತ್ರ ಹಾಗೂ ಮೌಲ್ವಿದೇವಿ ಎಂಬ ಸ್ತ್ರೀ ಪಾತ್ರ ಇವುಗಳನ್ನು ಸುಮಾರು ೧೪ ವರ್ಷಗಳವರೆಗೆ ನಿರಂತರವಾಗಿ ನಿರ್ವಹಿಸುತ್ತ ಬಂದರು.
ನಂತರ ೧೯೮೪-೮೫ರಲ್ಲಿ ಪಾರಿಜಾತದ ಭಾಗವತ ಶ್ರೀ ಸೋಮಲಿಂಗಪ್ಪ ಬಸಪ್ಪ ಸಂಕಣ್ಣವರ ಇವರು ತಮ್ಮೂರು ಮನ್ನಿಕೇರಿಗೆ ಬೆಟಗೇರಿಯವರನ್ನು ಕರೆದೊಯ್ದು ಪಾರಿಜಾತದಲ್ಲಿ ಕೃಷ್ಣನ ಪಾತ್ರ ಅಭಿನಯಿಸಲು ಅವಕಾಶ ಕಲ್ಪಿಸಿಕೊಟ್ಟ ಮೊದಲಿಗರು. ಹಾರ್ಮೋನಿಯಂ ನುಡಿಸುವಿಕೆಯಲ್ಲಿ ಮತ್ತು ತಬಲಾ ವಾದನದಲ್ಲಿ ಪ್ರಸಿದ್ಧರಾದ ಈ ಸೋಮಲಿಂಗಪ್ಪ ಭಾಗವತ ಕಲಾವಿದರೆ ನನ್ನ ಗುರುಗಳೆಂದು ಅಭಿಮಾನ ತಾಳಿ ಕೃತಜ್ಞತೆ ಸೂಚಿಸುತ್ತಾರೆ ಬೆಟಗೇರಿಯವರು.
ಇಲ್ಲಿ ನಿರ್ಭಯವಾಗಿ ಕೃಷ್ಣ ಪಾತ್ರ ನಿರ್ವಹಿಸಿದ ಮಗ ಈಶ್ವರಚಂದ್ರನನ್ನು ತಂದೆ ಶಿವಪುತ್ರಪ್ಪ ಖುಷಿಗೊಂಡು, ಮನತುಂಬಿ ಹರಸುತ್ತಾರೆ. ತನ್ನಾಸೆ ಈಡೇರಿದ ತೃಪ್ತಿ ಶಿವಪುತ್ರಪ್ಪನಿಗೆ ಇಲ್ಲಿಂದ ಮುಂದೆ ಉತ್ತರ ಕರ್ನಾಟಕದ ಬೇರೆ ಬೇರೆ ಪಾರಿಜಾತ ಕಂಪೆನಿಗಳಲ್ಲಿ ಕೃಷ್ಣ ಪಾತ್ರ ವಹಿಸುತ್ತ ಕಂಪೆನಿಯವರಿಗೆ ಸೂಕ್ತ ಕಾಲದಲ್ಲಿ ನಾನಾ ಬಗೆಯ ನೆರವು ನೀಡುತ್ತ ಬಂದ ಜಾನಪದ ರಂಗ ಕಲಾಭಿಮಾನಿ ಶ್ರೀ ಈಶ್ವರಚಂದ್ರ, ಮುಧೋಳದ ಹತ್ತಿರವಿರುವ ಮೆಟಗುಡ್ಡದ ಸುಪ್ರಸಿದ್ದ ಜಾನಪದ ರಂಗ ಕಲಾವಿದೆ, ಸತ್ಯಭಾಮಾ ಪಾತ್ರಧಾರಿ ಕಮಲಾಬಾಯಿ ಅವರ (ಸುಮಾರು ೧೫ ವರ್ಷಗಳ ನಟನಾ ಅನುಭವ ಇರುವವರು, ಕಂಪೆನಿ ಮಾಲೀಕರು) ಪಾರಿಜಾತ ಕಂಪೆನಿಯಲ್ಲಿ ಅವಳ ಜೊತೆ ಒಂದೇ ಒಂದು ಪ್ರದರ್ಶನದಲ್ಲಿ ಕೃಷ್ಣ ಪಾತ್ರಧಾರಿಯಾಗಿ ಅಭಿನಯಿಸಿದ ಶ್ರೇಯಸ್ಸು ಬೆಟಗೇರಿ ಅವರದು.
ಈ ಕಂಪೆನಿಯ ಭಾಗವತ ಕಲಾವಿದ ಶ್ರೀ ಅಜ್ಜಪ್ಪ ಪೆದಣ್ಣವರ ಅವರು ಬೆಟಗೇರಿ ಅವರಿಗೆ ಕೃಷ್ಣ ಪಾತ್ರ ವಹಿಸಲು ಅನುಕೂಲಿಸಿದ್ದನ್ನು ಶ್ರೀ ಬೆಟಗೇರಿಯವರು ಇಂದಿಗೂ ನೆನೆಯುತ್ತಾರೆ.
ಸತ್ಯಭಾಮಾ ಅಭಿನಯ ಖ್ಯಾತಿಯ ಕಮಲಾಬಾಯಿ ಅಂಥವರ ಜೊತೆ ಮಾತ್ರವಲ್ಲ ಪಾರಿಜಾತಕ್ಕಾಗಿಯೇ ಹುಟ್ಟಿಬಂದ ಬಿಲಕುಂದಿ ಬಸಪ್ಪ ಅಂಥವರ ಪಾರಿಜಾತ ಕಂಪೆನಿಯಲ್ಲಿಯೂ ಶ್ರೀಕೃಷ್ಣ ಪಾತ್ರ ಸಾದರಪಡಿಸುವ ಅದೃಷ್ಟ ಬೆಟಗೇರಿ ಅವರದು.
ಬಿಲಕುಂದಿ ಬಸಪ್ಪನ ಪಾರಿಜಾತ ನೋಡಲು ಹೋದ ಬೆಟಗೇರಿ ಅವರು ಕೃಷ್ಣ ಪಾತ್ರವನ್ನು ಅನಿವಾರ್ಯವಾಗಿ ಆಡಲೇಬೇಕಾಗುತ್ತದೆ. ಆಟ ನಡೆಯುವ ಹೊತ್ತಿಗೆ ಯಾವುದೋ ಕಾರಣದಿಂದ ಮೊದಲೆ ನಿಯೋಜಿತಗೊಂಡ ಪಾರಿಜಾತದ ಕೃಷ್ಣ ಪಾತ್ರಧಾರಿ ಬಂದಿರಲಿಲ್ಲ.
ಕಂಪೆನಿಯವರ ತೊಳಲಾಟವನ್ನು ಕಂಡ ಬೆಟಗೇರಿ ಉಳಿದ ಪಾತ್ರಗಳ ಜೊತೆ ಹೊಂದಿಕೊಂಡು ತುಂಬ ಚೆನ್ನಾಗಿ. ಕೃಷ್ಣ ಪಾತ್ರ ಪೂರೈಸಿ ಸಭಿಕರಿಂದ ‘ಸೈ’ ಎನ್ನಿಸಿಕೊಂಡುದುದು ಮಾತ್ರವಲ್ಲ, ಕಂಪೆನಿ ಮಾಲೀಕರಿಂದ ಅಪತ್ಬಾಂಧವ’ ಎಂಬ ಬಿರುದಿಗೂ ಪಾತ್ರರಾದುದು ಇಲ್ಲಿ ಗಮನೀಯ.
ಗೋಕಾಕದ ಡಾ: ಮಹಾದೇವ ಹತಪಾಕಿ ಅವರು ಸೋಮವಾರಪೇಟೆಯಲ್ಲಿ ೧೯೯೦ರಲ್ಲಿ
‘ಶ್ರೀ ಚರಂತೇಶ್ವರ ಭಜನಾ ಮಂಡಳ’ ಸ್ಥಾಪಿಸಿ, ಪ್ರತಿನಿತ್ಯ ಭಜನೆ ಮಾಡುತ್ತಿದ್ದರು. ಹೇಗೋ ಬೆಟಗೇರಿಯವರ ಪರಿಚಯ ಇವರಿಗಾಗಿ ಭಜನೆಯಲ್ಲಿ ಹಾರ್ಮೋನಿಯಂ ಬಾರಿಸಲು ಇವರನ್ನು ಸೇರಿಸಿಕೊಂಡರು. ಅಂದಿನಿಂದ ಇಬ್ಬರೂ ನಿಕಟವರ್ತಿಗಳಾದರು.
ಆದರೆ ಬೆಟಗೇರಿಯವರು ಹಾರ್ಮೋನಿಯಂ ಕಲಾವಿದರಾಗಿ ಮುಂದುವರಿಯಲಿಲ್ಲ. ಹತಪಾಕಿ ಅವರಿಗೆ ಕೆಲವು ದಿನ ಸಹಾಯ ಮಾಡಿದರು ಅಷ್ಟೆ. ಯಾವುದೇ ಕಲೆ ಕುಂಠಿತಗೊಳ್ಳುತ್ತದೆ ಅಥವಾ ನಿಂತು ಬಿಡುತ್ತದೆ ಎಂದು ತೋರಿದಾಗ ಅದು ಮುನ್ನಡೆಯುವಂತೆ ತನ್ನ ಕೈಲಾದ ಸಹಾಯ ಮಾಡುವುದು ಇವರ ಒಂದು ಪ್ರವೃತ್ತಿಯಾಗಿ ಬೆಳೆದು ಬಂದಿತು.
ಒಮ್ಮೆ ‘ಜೀವನ ಯಾತ್ರಾ’ ನಾಟಕವನ್ನು ಹುಕ್ಕೇರಿಯಲ್ಲಿ ಸಿದ್ಧರಾಮೇಶ್ವರ ನಾಟ್ಯ ಸಂಘ, ಗೋಕಾಕದವರು ಹಮ್ಮಿಕೊಂಡಿದ್ದರಂತೆ. ಅದರಲ್ಲಿ ಯಾವಾಗಲೂ ವಕೀಲನ ಪಾತ್ರ ಮಾಡುವ ಬೆಟಗೇರಿಯವರು ಸ್ತ್ರೀಪಾತ್ರಧಾರಿ ಯೊಬ್ಬಳು ಬಾರದಿದ್ದಾಗ ಇದ್ದಕ್ಕಿದ್ದಂತೆ ಅದೇ ರಂಗದ ಮೇಲೆ ಆ ಪಾತ್ರ ನಿರ್ವಹಿಸಿದ ಪ್ರತಿಭಾವಂತರು. ಇನ್ನೊಮ್ಮೆ ಮೈರಾಡದವರ ‘ಏಡ್ಸ್’ ಕುರಿತ ನಾಟಕದಲ್ಲಿ ತಂದೆಯ ಪಾತ್ರಧಾರಿ ಬಂದಿರಲಿಲ್ಲವಂತೆ, ಅಲ್ಲಿಯೂ ಆ ಪಾತ್ರವನ್ನು ವಹಿಸಿ ಚೆನ್ನಾಗಿ ಆಡಿ ಆ ಅಧಿಕಾರಿಗಳ ಆದರಕ್ಕೆ ಪಾತ್ರರಾದವರು.
ಪೂರ್ವ ತಯಾರಿ ಇಲ್ಲದೆ ಯಾವುದೇ ಪಾತ್ರ ನಿರ್ವಹಿಸುವುದು ಹುಟ್ಟು ಕಲಾವಿದನಿಗೆ-ಪ್ರತಿಭಾವಂತನಿಗೆ ಮಾತ್ರ ಸಾಧ್ಯವಾಗುವಂಥದು. ಮೇಲಿನ ಪ್ರಸಂಗಗಳನ್ನು ಗಮನಿಸಿದಾಗ ಶ್ರೀ ಈಶ್ವರಚಂದ್ರ ಬೆಟಗೇರಿಯವರು ಹುಟ್ಟು ಕಲಾವಿದರೆ * ಎಂಬುದಲ್ಲಿ ಎರಡು ಮಾತಿಲ್ಲ ಮತ್ತು ಯಾವ ಪಾತ್ರಕ್ಕಾದರೂ ಹೊಂದಿಕೊಳ್ಳುವ ಮೈಮಾಟ ಅವರದು.
೧೯೯೦ರ ಸುಮಾರಿನಲ್ಲಿ ಡಾ: ಮಹಾದೇವ ಹತಪಾಕಿ ಅವರ ಜೊತೆಗೆ ಬೆಟಗೇರಿ ಸೇರಿಕೊಂಡು ಭಜನಾ ಮಂಡಳಿಯಲ್ಲಿ ನಿಜಗುಣ ಶಿವಯೋಗಿ, ಪುರಂದರದಾಸರ ಪದಗಳನ್ನು ಪಾರಿಜಾತ ಸಂಗೀತ ಶೈಲಿಯಲ್ಲಿ ಹಾಡುವ ಪ್ರಯತ್ನ ಮಾಡುತ್ತಿದ್ದರು. ಪಾರಿಜಾತ ಶೈಲಿಯ ಇವರೀರ್ವರ ಭಜನಾ ಪದಗಳನ್ನು ಅಲಿಸಿದ ಈರಪ್ಪಣ್ಣ ದೇಶನೂರ ಅವರು ಇವರಿಂದ ಪಾರಿಜಾತ ಬಯಲಾಟ ಪ್ರಯೋಗಿಸಬೇಕೆಂದು ಇಚೆ ಹೊಂದಿದರು. ಆದರೆ ಅನಿವಾರ ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ.
ಈಗ ಈರ್ವರಲ್ಲಿ ಪಾರಿಜಾತ ರಂಗಕಲೆಯನ್ನು ಸಂಪೂರ್ಣವಾಗಿ ಕಲಿಯಬೇಕೆಂಬ ಬಲವಾದ ಆಸೆ ಮೂಡಿ ೧೯೯೪-೯೫ರಲ್ಲಿ ಚಿಗಡೊಳ್ಳಿಗೆ ಹೋದರು. ಅಲ್ಲಿ ವಿಲಾಸರಾವ್ ಘೋರ್ಪಡೆ ಅವರ ನಿರ್ದೇಶನದ ಪಾರಿಜಾತದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಹತಪಾಕಿ ಅವರು ಹಾಡು-ಹಾಸ್ಯಯುಕ್ತ ಮಾತಿನಲ್ಲಿ ಚತುರರಾದುದರಿಂದ ಭಾಗವತ ಪಾತ್ರ ನಿರ್ವಹಿಸಿದರು. ಬೆಟಗೇರಿಯವರು ಸ್ತ್ರೀ ರೂಪವನ್ನು ಹೋಲುವವರಾದುದರಿಂದ ಕೊರವಂಜಿ ಪಾತ್ರ ವಹಿಸಿದರು.
ಚಿಗಡೊಳ್ಳಿಯ ಪಾರಿಜಾತದ ಈ ಒಂದೇ ಒಂದು ಪ್ರಯೋಗದಿಂದ ಸ್ಫೂರ್ತರಾದ ಕಲಾವಿದರೀರ್ವರೂ ೧೯೯೫ರ ಯುಗಾದಿಯ ಪಾಡ್ಯ ದಿನ ಹತಪಾಕಿ ಅವರ ನಿರ್ದೇಶನದ ‘ಶ್ರೀ ಗುರು ಜಡಿಸಿದ್ದೇಶ್ವರ ಬಯಲಾಟ ಸಂಘ ಗೋಕಾಕ’ ಎಂಬ ಹೆಸರಿನ ಸ್ವಂತ ಕಂಪೆನಿಯನ್ನು ಕಟ್ಟಿದರು. ಇದರ ಸಂಘಟಕ ಅಥವಾ ಆಶ್ರಯದಾತರು ಶ್ರೀಕಾಂತ ವಿಠಲಪ್ಪ ಅಂಬಿಯವರು. ಇಲ್ಲಿ ಹತಪಾಕಿಯವರು ಭಾಗವತರಾಗಿ, ಬೆಟಗೇರಿಯವರು ಕೃಷ್ಣ ಮತ್ತು ಕೊರವಂಜಿ ಪಾತ್ರಗಳೆರಡನ್ನೂ ನಿರ್ವಹಿಸುತ್ತಲಿದ್ದಾರೆ.
ಪಾರಿಜಾತದ ಕೃಷ್ಣ ಮತ್ತು ಕೊರವಂಜಿ ಈ ದ್ವಿಪಾತ್ರಗಳಲ್ಲಿ ಬೆಟಗೇರಿಯವರ ಅಭಿನಯ ಅನುಪಮ, ಅಸಾಧಾರಣ. ಚಿಗಡೊಳ್ಳಿ, ಗೋಕಾಕ, ಯಡೂರ (ಚಿಕ್ಕೋಡಿ ತಾಲೂಕು) ಕ್ಯಾಸಪ್ಪನಟ್ಟಿ (ಬೈಲಹೊಂಗಲ ತಾಲೂಕ) ಮೊದಲಾದ ಸ್ಥಳಗಳಲ್ಲಿ ಪಾರಿಜಾತದ ಪ್ರದರ್ಶನವನ್ನು ಪಾರಂಪರಿಕ ಹಿನ್ನೆಲೆಯಲ್ಲಿಯೇ ಪ್ರದರ್ಶಿಸಿ, ಪಾರಿಜಾತ ಕಲಾವಿದ-ಕಲಾಸಕ್ತರ ಪ್ರೀತಿ-ವಿಶ್ವಾಸಕ್ಕೆ ಕಾರಣರಾದ ಬೆಟಗೇರಿ ಈ ಕ್ಷೇತ್ರದಲ್ಲಿ ಅಪೂರ್ವ ಸಿದ್ಧಿಯನ್ನು ಪಡೆಯುವಂಥವರು.
ಪಾರಿಜಾತ ರಂಗ ಭೂಮಿಯ ನಾಯಕ ಪಾತ್ರ ಶ್ರೀಕೃಷ್ಣ ಪಾರಿಜಾತಕ್ಕೆ ಹೊಸ ತಿರುವು ತಂದುಕೊಡುವ ಮಹತ್ವದ ಪಾತ್ರ ಕೊರವಂಜಿ. ಇಡೀ ರಾತ್ರಿಯ ಬಯಲಾಟದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಶ್ರೀಕೃಷ್ಣ ಪಾತ್ರಧಾರಿ ಇತರ ಪಾತ್ರಧಾರಿಗಳೊಂದಿಗೆ ರಂಗಭೂಮಿಯ ಮೇಲೆ ಮಾತು ಹಾಡು ಅಭಿನಯಗಳಲ್ಲಿ ತೊಡಗಿಕೊಂಡರೆ, ಕೊರವಂಜಿ ಪಾತ್ರಧಾರಿ ಸುಮಾರು ಮೂರು ಗಂಟೆಗಳ ಕಾಲ ಪ್ರದರ್ಶನ ನೀಡಬೇಕಾಗುತ್ತದೆ.
ವಿಭಿನ್ನ ಮನೋಧರ್ಮದ ದ್ವಿಪಾತ್ರಗಳಲ್ಲಿ ಏಕ ವ್ಯಕ್ತಿ ತನ್ಮಯತೆಯನ್ನು ಸಾಧಿಸುವದು ಅಷ್ಟು ಸುಲಭವಲ್ಲ. ಆದರೂ ಬೆಟಗೇರಿಯವರು ಎರಡೂ ಪಾತ್ರಗಳನ್ನು ನಿರ್ವಹಿಸುತ್ತ ಈ ಗ್ರಾಮೀಣ ಕಲೆಯ ಸೊಗಡನ್ನು ಹಳ್ಳಿ ಹಳ್ಳಿಗೂ ಪ್ರಸಾರ ಮಾಡುತ್ತ ಬರುತ್ತಿರುವದು ಶ್ಲಾಘನೀಯ. ಈಗಾಗಲೇ ಇದರ ಹತ್ತಾರು ಪ್ರಯೋಗಗಳು ಜಯಭೇರಿ ಹೊಡೆದಿವೆ.
ಪಾರಿಜಾತದಲ್ಲಿ ಕೊರವಂಜಿ ಪಾತ್ರವನ್ನು ಪುರುಷರೆ ವಹಿಸುವದು ವಾಡಿಕೆ. ಶ್ರೀಕೃಷ್ಣನೆ ಕೊರವಂಜಿ ವೇಷದಲ್ಲಿ ಕಾಣಿಸಿಕೊಳ್ಳುವುದು ಇಲ್ಲಿಯ ವಿಶೇಷತೆ. ಕೃಷ್ಣ ಪಾತ್ರದ ಇನ್ನೊಂದು ರೂಪವೇ ಆದ ಕೊರವಂಜಿಯ ಮಾತುಗಳು ಪ್ರೇಕ್ಷಕರ ಗಮನ ಸೆಳೆಯುವಂತಿರುತ್ತವೆ. ಕೃಷ್ಣ ಶಕ್ತಿಯ, ಈ ಅಸಮಾನ್ಯ ಅಲೌಖಿಕ ಪಾತ್ರ ವ್ಯಕ್ತಪಡಿಸುವ ಬ್ರಹ್ಮಾಂಡದ ವರ್ಣನೆ ಅನೇಕ ಪುಣ್ಯಕ್ಷೇತ್ರಗಳ ಮಹಿಮೆ ವಿವರಗಳನ್ನು ಕೊರವಂಜಿ ಪಾತ್ರಧಾರಿ ತರುಣ ಬೆಟಗೇರಿಯವರು ಲೀಲಾಜಾಲವಾಗಿ ನೀಡುವುದರ ಮೂಲಕ, ಆ ಪಾತ್ರಕ್ಕೆ ಎಲ್ಲಂದದ ಜೀವಕಳೆ ತಂದವರು.
ನಿಜಾರ್ಥದಲ್ಲಿ ಯಾರ ಶಿಷ್ಯತ್ವವನ್ನು ಪಡೆಯದೆ ಆಕಾಶವಾಣಿಯಲ್ಲಿ ಆಗಾಗ್ಗೆ ಕೇಳಿಸಿದ ಪಾರಿಜಾತ ರಂಗಕಲೆಯ ಮಾತು, ಹಾಡುಗಳನ್ನು ಕ್ಯಾಸೆಟ್ಗಳಲ್ಲಿ ಸೆರೆಹಿಡಿದು ಮುಖೋದ್ಘಾತ ಮಾಡಿ ಸತತ ಪರಿಶ್ರಮದ ಮೂಲಕ ಅಭಿನಯವನ್ನು ರೂಢಿಸಿಕೊಂಡ ಬಹುಮುಖ ಪ್ರತಿಭೆಯ ಕಲಾವಿದ ಶ್ರೀ ಈಶ್ವರಚಂದ್ರ ಕೃಷ್ಣ ಮತ್ತು ಕೊರವಂಜಿ ಎರಡೂ ಪಾತ್ರಗಳನ್ನು ಕೊಂಚ ಉನ್ಮತ್ತರಾಗಿಯೇ ನಟಿಸುವ ಇವರ ನಟನೆ ಸ್ತ್ರೀ ಪುರುಷರೆಲ್ಲರಿಗೂ ಕಚಕುಳಿಯಿಟ್ಟಂತಾಗುತ್ತದೆ.
ಇವರ ಕೃಷ್ಣ ಪಾತ್ರದ ಸ್ತ್ರೀ ಮುಖವನ್ನು ಹೋಲುವ ಮುದ್ದಾದ ಎಳೆ ಮುಖ, ನಯನಗಳ ತೀವ್ರ ಚಲನವಲನ ಅಂತೆಯೇ ಥೇಟ ಸ್ತ್ರೀಯಾಗಿ ಕಂಗೊಳಿಸುವ ಕೊರವಂಜಿ ಪಾತ್ರ – ಇವು ಸ್ತ್ರೀಯರಲ್ಲಿಯೂ ಮೈಚಳಿ ಹುಟ್ಟಿಸುತ್ತವೆ. ತೀರ ಎತ್ತರ, ತೀರ ಗಿಡ್ಡವಲ್ಲದ, ತೀರ ದಪ್ಪ, ತೀರ ತಿಳುವು ಅಲ್ಲದ ಮಾಟ, ಸ್ತ್ರೀನೋಟ, ನಾಜೂಕದ ಮಂದ ನಡಿಗೆ, ಹೊಳೆಯುವ ಕಣ್ಣು-ಒಟ್ಟಾರೆ ನಾರಿಯರಿಗೆ ಇರಬೇಕಾದ ಹೆಚ್ಚು ಕಡಿಮೆ ಎಲ್ಲ ಲಕ್ಷಣಗಳು ಇವರಲ್ಲಿದ್ದುದು ಅವರ ಸ್ತ್ರೀ ಪಾತ್ರದ ಕಲಾಪ್ರತಿಭೆ ಅರಳಲು ಹೆಚ್ಚಿನ ಸಹಕಾರಿಗಳಾದುದು ಗಮನಾರ್ಹ.
ಜತೆಗೆ ಈ ವ್ಯಕ್ತಿಗೆ ನಟನೆಯ ಮೇಲೆ ವಿಶೇಷ ಆಸಕ್ತಿ ಇರುವುದರಿಂದ – ನಿಷ್ಠೆಯಿಂದ ದುಡಿದು, ರಂಗಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಬೆಟಗೇರಿಯವರು ಕೊರವಂಜಿ ಪಾತ್ರ ನಿರ್ವಹಿಸುವಾಗಲೆಲ್ಲಾ ಪುರುಷರಿಗೆ ಅವರು ಸ್ತ್ರೀಯೇ ಇದ್ದಿರಬಹುದೆಂಬ ಶಂಕೆ, ಅನುಮಾನ. ಅಷ್ಟರಮಟ್ಟಿಗೆ ರಂಗದ ಮೇಲಿನ ಇವರ ಅಭಿನಯ ನೈಜವಾಗಿರುತ್ತದೆ. ಹೆಣ್ಣಿನಂತೆ ಆಲಾಪ ಮಾಡುವ, ಇವರ ಗತಿಗತ್ತುಗಳು, ದನಿಬನಿಗಳು ನೋಡುಗರನ್ನು ಬೆರಗುಗೊಳಿಸುತ್ತವೆ.
ಸ್ತ್ರೀವೇಷ ಧರಿಸಿ, ಕೊರಳಲ್ಲಿ ಮುತ್ತಿನ ಸರ ಹಾಕಿಕೊಂಡು, ಕತ್ತಿನ ಸುತ್ತ ರಣಗೂದಲು ಬಿಟ್ಟು, ಟೊಂಕದ ಮೇಲೆ ಕೂಸೊಂದನ್ನು ಎತ್ತಿಕೊಂಡು ಆಗಾಗ್ಗೆ ಸೆರಗು ಸರಿಪಡಿಸಿಕೊಳ್ಳುತ್ತ, ತನ್ನ ಹಿಂದೆ ಮುಂದೆ ಹಣಿಕಿಕ್ಕಿ ನೋಡಿಕೊಳ್ಳುತ್ತ, ಕತ್ತು ಕೊಂಕಿಸುತ್ತ, ರಣಗೂದಲು ತಲೆ ಜಾಡಿಸುತ್ತ, ಕೈ ಬೀಸುತ್ತ ಅತ್ತ ಇತ್ತ ಮೇಲೆ ಕೆಳಗೆ ನೋಡುತ್ತ ಹುಬ್ಬು ಹಾರಿಸುತ್ತ ತುಂಬ ವಯ್ಯಾರದಿಂದ ರಂಗದ ಮೇಲೆ ಬರುವ ನಟಿಸುವ ಬೆಟಗೇರಿಯವರ ಯಮಕ (ಠೀವಿ)ವನ್ನು ಕಂಡ ಕೆಲವು ಕಿಲಾಡಿ ಹುಡುಗರು. ಸ್ತ್ರೀಯೇ ಎಂದು ಭ್ರಮಿಸಿ ಎವೆಯಿಕ್ಕದೆ, ಪಿಟ್ಟೆನ್ನದೆ, ತುದಿಗಾಲ ಮೇಲೆಯೇ ನಿಂತು ವೀಕ್ಷಿಸುತ್ತಾರೆ. ಹರೆಯದ ಹುಡುಗಿಯರು ಕೈಯಿಂದ ಬಾಯಿ ಮುಚ್ಚಿಕೊಂಡು ಮುಸುಮುಸು ಮಾಡುತ್ತಾರೆ.
ಜರದ ಪೇಟಾ ಸುತ್ತಿ, ನಗುಮೊಗದ ಶ್ರೀಕೃಷ್ಣ ಪಾತ್ರಧಾರಿಯಾಗಿ, ವಿಶಿಷ್ಟ ಹಾಡು-ಮಾತು ಅಭಿನಯಗಳ ಮೂಲಕ ರಂಗಭೂಮಿಯನ್ನೇರಿದ ಬೆಟಗೇರಿಯವರನ್ನು ನೋಡಿದ ಪ್ರೇಕ್ಷಕರು ಶ್ರೀಕೃಷ್ಣ ಪರಮಾತ್ಮನೆ ಅವತರಿಸಿ ಬಂದಷ್ಟು ಸಂತೋಷಪಡುತ್ತಾರೆ. ಇವರ ಪಾತ್ರದ ಪ್ರವೇಶದಿಂದ ರಂಗಭೂಮಿಯೇ ತುಂಬಿದಂತಾಗುತ್ತದೆ. ಆ ಪಾತ್ರಕ್ಕೆ ಮುಖ್ಯವಾಗಿ ಬೇಕಾದ ರೂಪು, ಮಾತಿನ ವೈಖರಿ, ಕಂಠ ಮಾಧುರಗಳು ಬೆಟಗೇರಿಯವರಲ್ಲಿರುವುದರಿಂದ ಅವರ ಶ್ರೀ ಕೃಷ್ಣ ಪಾತ್ರ ಸಹಜತೆಯಿಂದ ನಳನಳಿಸುತ್ತದೆ.
ದೃಷ್ಟಿಯಾಗುವಷ್ಟು ಚೆನ್ನಾಗಿ ಕೃಷ್ಣಪಾತ್ರ ಇವರಿಗೆ ಒಪ್ಪುತ್ತದೆ. ಬೆಟಗೇರಿಯವರ ಕೃಷ್ಣ ಪಾತ್ರದ ನಟನೆ ಚುರುಕಾದ ನಟನೆ. ಈ ಪಾತ್ರದ ಸಾಮಾಜಿಕ, ಆಧ್ಯಾತ್ಮಿಕ, ತಾತ್ವಿಕ ವಿಚಾರಗಳು ವಿಪುಲ. ಇಲ್ಲಿ ಸಂಸ್ಕೃತ ಭುಯಿಷ್ಠವಾದ ಭಾಷೆ, ಸಂಸ್ಕೃತ ಶ್ಲೋಕಗಳು, ಸಂಸ್ಕೃತ ಉಪೋದ್ಘಾತಗಳು ಬರುತ್ತವೆ. ಅವನ್ನೆಲ್ಲ ಕಂಠಪಾಠ ಮಾಡಿ ನೆನಪಿನಲ್ಲಿಟ್ಟುಕೊಂಡು ವ್ಯವಸ್ಥಿತವಾಗಿ ಬಿಡಿಬಿಡಿಸಿ ನಿರೂಪಿಸುವ ಬೆಟಗೇರಿಯವರ ಆಗಾಧ ಶಕ್ತಿಗೆ ಬೆಕ್ಕಸ ಬೆರಗಾಗದೆ ಇರಲಾರೆವು.
ಅಂತೆಯೇ ಸೀರೆಯುಟ್ಟು ಲಾಲಿತ್ಯ ಪೂರ್ಣವಾಗಿ ಹೆಜ್ಜೆ ಹಾಕುತ್ತ ಗಂಭೀರ ವದನದಿಂದ ರಂಗದ ಮೇಲೆ ಶ್ರೀ ಬೆಟಗೇರಿ ಪ್ರತ್ಯಕ್ಷರಾದ ಕೂಡಲೆ ಸಭಿಕರಲ್ಲಿ ಕಿವಿಗಡಚಿಕ್ಕುವ ಕರತಾಡನ.
ಹೀಗೆ ಕೃಷ್ಣ ಮತ್ತು ಕೊರವಂಜಿ ಪಾತ್ರಗಳಿಗೆ ಹೇಳಿ ಮಾಡಿಸಿದ ವ್ಯಕ್ತಿ, ವ್ಯಕ್ತಿತ್ವ ಬೆಟಗೇರಿ ಅವರದು. ಈ ಉಭಯ ಪಾತ್ರಗಳಲ್ಲಿಯ ಇವರ ತನ್ಮಯತೆಗೆ ಪ್ರೇಕ್ಷಕರು ಮಂತ್ರಮುಗ್ಧರಾಗಿ ಕುಳಿತಿದ್ದುದನ್ನು ಕಂಡಿದ್ದೇನೆ.
ಇಷ್ಟಾದರೂ ಎನಿತು ಗರ್ವವಿಲ್ಲದ, ವಿನಯಶೀಲ, ಸದ್ಗುಣ ಸಚ್ಚಾರಿತ್ರ್ಯ-ಸತ್ಶೀಲಗಳುಳ್ಳ ರಂಗನಟ ಬೆಟಗೇರಿ. ಪಾರಿಜಾತದ ಅಭಿನಯ, ಹಾಡು, ಮಾತು ನೃತ್ಯಗಳನ್ನು ಅಳವಡಿಸಿಕೊಂಡು ಎತ್ತರಕ್ಕೇರುತ್ತಿರುವ ಈ ನಟ ಪಾರಿಜಾತ ಅಭಿನಯ ಶೈಲಿ ನಟನಾ ಕೌಶಲ್ಯ-ನೃತ್ಯ ವಿನ್ಯಾಸ-ಮುಂತಾದವುಗಳನ್ನು ಇನ್ನೂ ಸರಿಯಾಗಿ ತಾನು ರೂಢಿಸಿಕೊಳ್ಳಲು ತುಂಬ ಪರಿಶ್ರಮಿಸಬೇಕಿದೆ ಎಂದು ಸ್ವವಿಮರ್ಶೆ ಮಾಡಿಕೊಳ್ಳುತ್ತಾರೆ.
ಇಂಥ ಬೆಳವಣಿಗೆಯ ಲಕ್ಷಣಗಳನ್ನು ಹೊಂದಿದ ಬೆಟಗೇರಿಯವರು ನಿಜವಾಗಿಯೂ ಅಭಿನಯ ಪ್ರೌಢಿಮೆಯನ್ನು ಸನಿಹದಲ್ಲಿಯೇ ಸಾಧಿಸಿಕೊಳ್ಳಬಲ್ಲರು.
ಆ ಮುಖೇನ ಈ ರಂಗಕಲೆಯ ಉಳಿವು ಬೆಳವಣಿಗೆಗಳಿಗೂ ಕಾರಣರಾಗಬಲ್ಲ ನಮ್ಮ ಹೆಮ್ಮೆಯ ರಂಗ ನಟ. ತಮ್ಮ ವಿಶಿಷ್ಟ ನಟನಾ ಕೌಶಲ್ಯದ ಮೂಲಕ ದಿನದಿಂದ ದಿನಕ್ಕೆ ಜನಪ್ರಿಯರಾಗುತ್ತಿರುವ ಶ್ರೀ ಬೆಟಗೇರಿ ಅಪಾರ ಬೇಡಿಕೆಯ ಜಾನಪದ ನಟರಾಗುವುದರಲ್ಲಿ ಸಂದೇಹವಿಲ್ಲ. ಅಭಿನಯ ಇವರಿಗೆ ಕರತಲಾಮಲಕ, ಅದನ್ನು ದಿನದಿಂದ ದಿನಕ್ಕೆ ಸ್ವಯಂ ಆಗಿ ಬೆಳೆಸಿಕೊಳ್ಳುತ್ತಲೆ ನಡೆದಿದ್ದಾರೆ. ನಮ್ಮ ಸಾಹಿತಿ-ವಿದ್ವಾಂಸರು, ಜಾನಪದ ಆಸಕ್ತರೆಲ್ಲ ಇವರ ಕಲೆಯನ್ನು ನೋಡಬೇಕಿದೆ.
ಇವರಿಗೆ ಆಕರ್ಷಕ ನಿಲುವು, ಮಧುರ ಕಂಠ, ಹರಿತವಾದ ನಾಲಗೆಗಳಿರುವುದರಿಂದ ಶ್ರೀಕೃಷ್ಣ ಪಾರಿಜಾತದ ಬರೀ ೮-೧೦ ಪ್ರದರ್ಶನಗಳಲ್ಲಿಯೇ ಜನಾನುರಾಗಿಗಳಾಗಿರುವುದು, ಇವರಿಗೆ ಒಳ್ಳೆಯ ಭರವಸೆಯನ್ನು, ಅತ್ಯುತ್ತಮ ಭವಿಷ್ಯವನ್ನು ಸೂಚಿಸುತ್ತದೆ. ಒಟ್ಟಿನಲ್ಲಿ ಪಾರಿಜಾತ ರಂಗಭೂಮಿ ಕೃಷ್ಣ-ಕೊರವಂಜಿಯಾಗಿ ಬೆಳಗುತ್ತಿರುವ ಒಬ್ಬ ಹವ್ಯಾಸಿ ಜಾನಪದ ರಂಗ ಕಲಾವಿದ, ಗೋಕಾಕ ಪರಿಸರದ ಶ್ರೀ ಈಶ್ವರಚಂದ್ರ ಬೆಟಗೇರಿಯವರೆಂಬುದು ಅಭಿಮಾನದ ಸಂಗತಿ. ಜಾನಪದ ರಂಗ ಕಲಾ ಲೋಕದಲ್ಲಿ ಇವರ ಭವಿಷ್ಯ ಉಜ್ವಲವಾಗಲಿ, ನಾಡಿನ ಸಾಂಸ್ಕೃತಿಕ ಬದುಕು ಮಹದತ್ತರಕ್ಕೇರಲಿ……