History Notes-02-Inscriptions | ಶಾಸನಗಳು, ಶಾಸನಗಳ ಮಹತ್ವ
History Notes-02 ‘ಶಾಸನಗಳ ವ್ಯವಸ್ಥಿತವಾದ ಅಧ್ಯಯನವೇ ಶಾಸನ ಶಾಸ್ತ್ರ’. ಇದು ಪುರಾತತ್ವ ಶಾಸ್ತ್ರದ ಒಂದು ಶಾಖೆಯಾಗಿದ್ದು, ಪ್ರಾಚೀನ ಭಾರತದ ಇತಿಹಾಸ ರಚನೆಗೆ ಪೂರಕವಾದ ಮಹತ್ವದ ಮಾಹಿತಿಯನ್ನು ಒದಗಿಸುತ್ತದೆ. ಭಾರತದಲ್ಲಿ ಸುಮಾರು 75,000 ಕ್ಕೂ ಹೆಚ್ಚು ಶಾಸನಗಳು ದೊರೆತಿದ್ದು ಅವು ಪಾಲಿ, ಪ್ರಾಕೃತ, ಸಂಸ್ಕೃತ, ತಮಿಳು, ಕನ್ನಡ, ಮಲೆಯಾಳಂ, ತೆಲಗು ಮುಂತಾದ ಭಾಷೆಗಳಲ್ಲಿ ರಚನೆಯಾಗಿದ್ದು, ಬ್ರಾಹ್ಮ ಮತ್ತು ಖರೋಷ್ಠಿ ಲಿಪಿಯಲ್ಲಿವೆ.
ಶಾಸನಗಳು ರಾಜನ ರಾಜಾಜ್ಞೆಗಳಾಗಿವೆ. ಇವುಗಳನ್ನು ರಾಜ ಮಾಹಾರಾಜರು, ಸಾಮಂತ ದೊರೆಗಳು, ಮಾಂಡಲಿಕರು, ದಾರ್ಶನಿಕರು, ರಾಣಿಯರು, ಅಧಿಕಾರಿ ವರ್ಗದವರು, ಜನ ಸಾಮಾನ್ಯರು ಬರೆಸಿದ್ದಾರೆ. ಶಾಸನ ಬರೆಸಲು ಸ್ಥಂಭ, ಶಿಲಾಫಲಕ, ಬಂಡೆಗಲ್ಲು, ಗೋಡೆ, ಲೋಹಪಟ, ಪ್ರತಿಮೆ, ಗುಹೆಗಳನ್ನು ಬಳಸಿಕೊಳ್ಳಾಗಿದೆ. ಇಂತಹ ಬರಹಗಳನ್ನು ‘ ಶಾಸನ ಗಳೆಂದು ಕರೆಯಲಾಗಿದೆ.
ಶಾಸನಗಳು ಸಾಮಾನ್ಯವಾಗಿ ದಾನ, ದತ್ತಿ, ವೀರಮರಣ, ಸಹಗಮನ, ಅರಸರ ಕಾಲ, ಸಾಮ್ರಾಜ್ಯ ವಿಸ್ತಾರ, ದಂಡಯಾತ್ರೆ, ರಾಜರ ಹೆಸರು, ಬಿರುದು, ಕಾಲಾನುಕ್ರಮಣಿಕೆ ಮುಂತಾದ ವಿಷಯಗಳನ್ನು ಒಳಗೊಂಡಿದ್ದು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಮುಲ್ಯ ಮಾಹಿತಿಯನ್ನು ಒದಗಿಸುತ್ತವೆ. ಪ್ರಸಿದ್ದ ಶಾಸನ ಶಾಸ್ತ್ರಜ್ಞರಾದ ಜಾನ್ಪ್ಲಿಟ್ರವರು “ನಮ್ಮ ನಾಡಿನ ರಾಜಕೀಯ ಇತಿಹಾಸವು ಮುಖ್ಯವಾಗಿ ಶಾಸನಗಳನ್ನು ಆಧರಿಸಿ ರಚನೆಯಾಗಿದೆ. ಅವುಗಳ ನೆರವಿಲ್ಲದೆ ಯಾವುದೇ ಐತಿಹಾಸಿಕ ಘಟನೆಗಳ ಮತ್ತು ವ್ಯಕ್ತಿಗಳ ಕಾಲವನ್ನು ನಿಖರವಾಗಿ ಗುರುತಿಸುವದು ಸಾಧ್ಯವಾಗಲಾರದು” ಎಂದು ಅಭಿಪ್ರಾಯ ಪಟ್ಟಿರುವರು.
ಭಾರತದಲ್ಲಿ ಇಲ್ಲಿಯವರಿಗೆ ದೊರೆತ ಶಾಸನಗಳಲ್ಲಿ ಪ್ರಾಚೀನ ಶಾಸನಗಳೆಂದರೆ ಸಿಂಧೂ ನದಿ ನಾಗರಿಕತೆಯ ‘ಮುದ್ರಾಶಾಸನ ಗಳು. ಇವು ಚಿತ್ರ ಲಿಪಿಯಲ್ಲಿದ್ದು, ಓದಲು ಸಾಧ್ಯವಾಗಿಲ್ಲ. ಓದಲು ಸಾಧ್ಯವಾದ ಶಾಸನಗಳಲ್ಲಿ ಸೊಹಾರ್ ಶಾಸನವು ಅತ್ಯಂತ ಪ್ರಾಚೀನ ವಾದದ್ದಾಗಿದೆ. ನಂತರದ ಸ್ಥಾನವನ್ನು ಅಶೋಕನ ಶಾಸನಗಳು ಪಡೆದುಕೊಳ್ಳುತ್ತವೆ. ಅಶೋಕನ ಶಾಸನಗಳು ಚಾರಿತ್ರಿಕ ದೃಷ್ಟಿಯಿಂದ ಮಹತ್ವವಾಗಿದ್ದು, ಪ್ರಾಚೀನ ಭಾರತದ ಇತಿಹಾಸ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರಿಂದ ಅಶೋಕನನ್ನು ‘ಶಾಸನ ಶಾಸ್ತ್ರದ ಪಿತಾಮಹ ಎಂದು ಕರೆಯಲಾಗಿದೆ.
ಪ್ರಾಚೀನ ಭಾರತದ ಶಾಸನಗಳನ್ನು ನಾಲ್ಕು ಪ್ರಕಾರಗಳಾಗಿ ವಿಂಗಡಿಸಬಹುದು
1. ದತ್ತಿ ಶಾಸನಗಳು (Donative records),
2. ಧಾರ್ಮಿಕ ಶಾಸನಗಳು (Religious records)
3. ಆಡಳಿತಾತ್ಮಕ ಶಾಸನಗಳು (Administrative records)
4. ಜ್ಞಾಪನ ಶಾಸನಗಳು (Commemorative reocrds)
ಮಹತ್ವದ ಶಾಸನಗಳು : (Important Inseription)
1. ಅಲಹಾಬಾದ್ ಸ್ತಂಭ ಶಾಸನ :
ಗುಪ್ತದೊರೆ ಸಮುದ್ರಗುಪ್ತನ ದಂಡನಾಯಕ ಹರಿಷೇಣನಿಂದ ರಚಿಸಲ್ಪಟ್ಟಿದೆ. ಇದು ಐತಿಹಾಸಿಕ ದಾಖಲೆಯಾಗಿದ್ದು, ಸಮುದ್ರ ಗುಪ್ತನ ಬಗ್ಗೆ ಮಹತ್ವದ ಮಾಹಿತಿ ನೀಡುತ್ತದೆ. ಮೌರ್ಯದೊರೆ ಅಶೋಕನು ಕೌಶಾಂಬಿಯಲ್ಲಿ ಸ್ಥಾಪಿಸಿದ್ದ ಸ್ಥಂಭಶಾಸನದ ಮೇಲೆ ಸಮುದ್ರ ಗುಪ್ತನ ಶಾಸನವನ್ನು ಬರೆಸಲಾಗಿದೆ. ಈ ಶಾಸನವನ್ನು ಫಿರೋಜ್ಷಾ ತುಘಲಕನು ಅಲಹಾಬಾದಿಗೆ ಸ್ಥಳಾಂತರಿಸಿದನು. ನಾಗರಿ ಲಿಪಿ ಹಾಗೂ ಸಂಸ್ಕೃತ ಭಾಷೆಯಲ್ಲಿ ರಚಿತವಾಗಿದೆ. ಇದು 33 ಸಾಲುಗಳನ್ನೊಳಗೊಂಡ ಸುದೀರ್ಘ ವಾಕ್ಯವಾಗಿದೆ. ಸಮುದ್ರ ಗುಪ್ತನ ದಿಗ್ವಿಜಯಗಳು, ಸೈನಿಕ ಸಾಮರ್ಥ್ಯ, ಅವನ ವ್ಯಕ್ತಿತ್ವವನ್ನು ತಿಳಿಸುತ್ತದೆ.
2. ಮೆರಾಲಿ ಸ್ತಂಭ ಶಾಸನ :
ದೆಹಲಿಯ ಬಳಿ ಮೆರಾಲಿ ಎಂಬ ಗ್ರಾಮದಲ್ಲಿ ದೊರೆತಿರುವ ಕಬ್ಬಿಣದ ಸ್ಥಂಭ ಶಾಸನವು ಚಂದ್ರಗುಪ್ತ ವಿಕ್ರಮಾದಿತ್ಯನ ಸೈನಿಕ ಸಾಧನೆಗಳನ್ನು ಉಲ್ಲೇಖಿಸುತ್ತದೆ. ಅವನ ಶ್ರೇಷ್ಠತೆ, ಸಾಮ್ರಾಜ್ಯ ವಿಸ್ತಾರ, ಸಾಮ್ರಾಜ್ಯದ ವೈಭವ, ಆರ್ಥಿಕ ಸಮ್ಯುದ್ಧಿಯನ್ನು ತಿಳಿಸುತ್ತದೆ. ಈ ಶಾಸನವು ಗುಪ್ತರ ಕಾಲದ ವಿಜ್ಞಾನ ಮತ್ತು ಲೋಹ ತಾಂತ್ರಿಕ ಪ್ರಗತಿಯ ಸಂಕೇತವಾಗಿದೆ.
3. ಐಹೊಳೆ ಶಾಸನ :
ಬಾದಾಮಿ ಹತ್ತಿರ ಐಹೊಳೆಯ ಮಗುತಿ ಜಿನಾಲಯದ ಗೋಡೆಯ ಮೇಲೆ ಜೈನ ಕವಿ ರವಿ ಕೀರ್ತಿಯಿಂದ ರಚಿಸಲ್ಪಟ್ಟಿದೆ. ಇದು ಕ್ರಿ.ಶ. 643ರಲ್ಲಿ ಸಂಸ್ಕೃತ ಭಾಷೆಯಲ್ಲಿ ಕೆತ್ತಲ್ಪಟ್ಟಿದೆ. ಎರಡನೇ ಪುಲಿಕೇಶಿಯ ದಿಗ್ವಿಜಯಗಳನ್ನ ಮತ್ತು ಚಾಲುಕ್ಯ ಸಂತತಿಯ ಪೂರ್ವಚರಿತ್ರೆಯನ್ನು ತಿಳಿಯಲು ಅತ್ಯಂತ ಸಹಾಯಕಾರಿಯಾಗಿದೆ. ಈ ಶಾಸನವು ‘ಶಾಲಿವಾಹನ ಶಕ’ ಮತ್ತು ‘ಕಲಿಯುಗ’ ಎರಡನ್ನು ಉಪಯೋಗಿಸಿ (ಶಕ. 556, ಕಲಿ 3735 ಅಂದರೆ ಕ್ರಿ. ಶ. 634) ಕಾಲವನ್ನು ಸ್ಪಷ್ಟವಾಗಿ ಉಲ್ಲೇಖಿಸುವುದರಿಂದ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ದಾಖಲೆಯಾಗಿದೆ. ರವಿಕೀರ್ತಿಯು ಜಿನೇಂದ್ರನಿಗೆ ಜಿನಾಲಯ ನಿರ್ಮಿಸಿದನೆಂದು, ಹೇಳುವ ಈ ಶಾಸನ ರವಿಕೀರ್ತಿಯು ಕಾಳಿದಾಸ ಮತ್ತು ಭಾರವಿಗೆ ಸಮಾನನಾಗಿದ್ದನೆಂದು ತಿಳಿಸುತ್ತದೆ.
4. ಜೂರ ಪ್ರಶಸ್ತಿ :
ರಾಷ್ಟ್ರಕೂಟ ದೊರೆ ಮುಮ್ಮಡಿ ಕೃಷ್ಣನ ಈ ಪ್ರಶಸ್ತಿಯು ಮಧ್ಯಪ್ರದೇಶದ ಜೂರ ಎಂಬ ಗ್ರಾಮದಲ್ಲಿ ದೊರೆತಿದೆ. ಹತ್ತನೆಯ ಶತಮಾನದ ಈ ಶಾಸನದ ಭಾಷೆ ಮತ್ತು ಲಿಪಿ ಕನ್ನಡ. ಕೃಷ್ಣನ ಉತ್ತರದ ದಂಡಯಾತ್ರೆಯಗಳನ್ನು, ವ್ಯಕ್ತಿತ್ವ, ಗುಣ ಮುಂತಾದವುಗಳನ್ನು ತಿಳಿಸುತ್ತದೆ. ಕೃಷ್ಣನ ಉತ್ತರ ಭಾರತದ ದಂಡಯಾತ್ರೆಯನ್ನು ತಿಳಿಯಲು ಪ್ರಮುಖ ಆಧಾರವಾಗಿದೆ. ಈ ಶಾಸನ ತಯಾರಿಸಿದ ಉಬ್ಬಿಕಾ ಮೈ ಶೆಟ್ಟಿ ಮತ್ತು ಶಿಲೆಯ ಮೇಲೆ ಕೆತ್ತಿದ ಚಿಮ್ಮಯ್ಯ ಎಂಬವರ ಹೆಸರನ್ನು ಉಲ್ಲೇಖಿಸುತ್ತದೆ.
5. ಮಧುಬನ್ ತಾಮ್ರ ಶಾಸನ :
ಹರ್ಷವರ್ಧನನ ಈ ತಾಮ್ರ ಶಾಸನವು ಹರ್ಷಶಕೆ 25ರಲ್ಲಿ ರಚಿಸಲಾಗಿದೆ. (ಕ್ರಿ.ಶ. 631), ಸಂಸ್ಕೃತ ಭಾಷೆ ಮತ್ತು ಸಿದ್ದಿಮಾತೃಕೆ ಲಿಪಿಯಲ್ಲಿದೆ. ವರ್ಧನ ವಂಶದ ಹರ್ಷವರ್ಧನನ ವಂಶಾವಳಿಯನ್ನು ಉಲ್ಲೇಖಿಸುವುದು ಈ ಶಾಸನದ ವೈಶಿಷ್ಟ್ಯ. ನರವರ್ಧನ, ರಾಜ್ಯವರ್ಧನ, ಆದಿತ್ಯವರ್ಧನ, ಪ್ರಭಾಕರವರ್ಧನ, ಎರಡನೇ ರಾಜ್ಯವರ್ಧನ ಮತ್ತು ಹರ್ಷವರ್ಧನರು ಕ್ರಮವಾಗಿ ರಾಜ್ಯವಾಳಿದರೆಂದು ತಿಳಿಸುತ್ತದೆ. ‘ಸೋಮಕುಂಡಿಕಾ’ ಎಂಬ ಗ್ರಾಮದ ವಿವರ, ದಾನದವಿವರ ಈ ಶಾಸನದಲ್ಲಿದೆ. ಆಗಿನ ಆಡಳಿತ ಕ್ರಮದ ಅಧ್ಯಯನಕ್ಕೆ ಈ ಶಾಸನ ಅತ್ಯಂತ ಉಪಯುಕ್ತವಾಗಿದೆ.
6. ಉತ್ತರ ಮೇರೂರು ಶಾಸನ :
ಒಂದನೆಯ ಪರಾಂತಕನ ಕಾಲದ (ಕ್ರಿ.ಶ. 919 ಮತ್ತು 921) ಎರಡು ಶಾಸನಗಳು ಚಿಂಗ್ಲೆ ಪುಟಜಿಲ್ಲೆಯ ಉತ್ತರ ಮೇರೂರು ಎಂಬ ಗ್ರಾಮದಲ್ಲಿ ದೊರೆತಿವೆ. ಉತ್ತರ ಮೇರೂರ ಗ್ರಾಮದ ಆಡಳಿತ ವ್ಯವಸ್ಥೆ ಚುಣಾವಣೆ ಪದ್ಧತಿ, ಪ್ರತಿನಿಧಿಗಳು, ಅವರ ಅರ್ಹತೆ, ಅನರ್ಹತೆ, ಸಮಿತಿಗಳು ಮುಂತಾದವುಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಆಡಳಿತ ಕ್ಷೇತ್ರಕ್ಕೆ ಚೋಳರು ನೀಡಿದ ವೈಶಿಷ್ಟ್ಯಪೂರ್ಣ ಕೊಡುಗೆಯನ್ನು ತಿಳಿಸುವ ಮಹತ್ವದ ದಾಖಲೆಯಾಗಿದೆ.
7. ಕುಡುಮಿಯಾಮಲೈ ಶಾಸನ :
ಪಲ್ಲವದೊರೆ ಒಂದನೇ ಮಹೇಂದ್ರವರ್ಮನ (ಕ್ರಿ.ಶ 580-630) ಕಾಲದ ಶಾಸನವಾಗಿದೆ. ಕುಡುಮಿಯಾ ಮಲೈ ಎಂಬಲ್ಲಿ ದೊರೆತ ಈ ಶಾಸನವನ್ನು ಮಹೇಂದ್ರವರ್ಮನ ಆದೇಶದ ಮೇರೆಗೆ ಕೆತ್ತಲಾಗಿದೆ. ಮಹೇಂದ್ರ ವರ್ಮನಿಗೆ ಸಂಗೀತ ಮತ್ತು ಕಲೆಗಳಲ್ಲಿದ್ದ ಅಭಿರುಚಿಯನ್ನು ಇದು ತಿಳಿಸುತ್ತದೆ.
ಶಾಸನಗಳ ಮಹತ್ವ :
ಶಾಸನಗಳು ಸಂಕ್ಷಿಪ್ತ ಮಾಹಿತಿಯನ್ನು ನೀಡುವ ಅಮುಲ್ಯ ಆಕರಗಳಾಗಿದ್ದು, ಐತಿಹಾಸಿಕ ಮಹತ್ವ ಪಡೆದಿವೆ. ಡಾ.ಪಿ.ಬಿ. ದೇಸಾಯಿ ಅವರ ಪ್ರಕಾರ ಶಾಸನಗಳು ದೊರೆಯದಿದ್ದರೆ ನಮ್ಮ ಚರಿತ್ರೆಯೊಂದು ಕತ್ತಲೆಯ ಗವಿಯಂತೆ ವಿಕಾರವಾಗಿ ತೋರುತ್ತಿತ್ತು. ಶಾಸನಗಳು ಚರಿತ್ರೆಯಲ್ಲಿನ ಪ್ರಮುಖ ವ್ಯಕ್ತಿಗಳು, ಘಟನೆಗಳು, ಕಾಲಜ್ಞಾನ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದ ಅನೇಕ ವಿವರ ಗಳನ್ನು ಒದಗಿಸುತ್ತವೆ.
1. ಶಾಸನಗಳು ಇತಿಹಾಸದ ಪುನರಚನೆಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸುತ್ತವೆ. ರಾಜರ ವಿವರ, ಅಧಿಕಾರಿಗಳು, ಆಡಳಿತದ ವಿವರಗಳು, ಆಡಳಿತ ವಿಭಾಗಗಳು, ಆಡಳಿತ, ಕಾಲ, ಯುದ್ಧವಿವರ, ಸಾಮ್ರಾಜ್ಯ ವಿಸ್ತಾರ, ಮೇರೆಗಳು ಮುಂತಾದ ವಿಷಯ ಗಳನ್ನು ಒಳಗೊಂಡಿರುವ ಶಾಸನಗಳು ರಾಜಕೀಯ ಮತ್ತು ಆಡಳಿತ ಇತಿಹಾಸವನ್ನು ತಿಳಿಯಲು ಮಹತ್ವದ ಆಕರಗಳಾಗಿವೆ.
2. ಶಾಸನಗಳಲ್ಲಿ ನಮೂದಿಸಲ್ಪಟ್ಟಿರುವ ದೇವಾಲಯ, ಮಠ, ಬಸದಿ, ವಿಹಾರ, ಪೂಜಾವಿಧಾನ, ಧಾರ್ಮಿಕ ಪಂಗಡ, ದೇವಾಲಯಕ್ಕೆ ನೀಡಿದ ದಾನ ಮುಂತಾದ ವಿಷಯಗಳು ಧಾರ್ಮಿಕ ಸ್ಥಿತಿಯನ್ನು ತಿಳಿಯಲು ಸಹಾಯಕವಾಗುತ್ತವೆ.
3. ಶಾಸನಗಳಲ್ಲಿ ಉಲ್ಲೇಖವಾಗಿರುವ ವಿದ್ಯಾಕೇಂದ್ರಗಳಾದ ಮಠ, ಅಗ್ರಹಾರ, ಘಟಕಾಸ್ಥಾನ, ಬ್ರಹ್ಮಪುರಿ, ಅಲ್ಲಿಯ ಬೇಧನಾ ವಿಧಾನ, ವಿಷಯಗಳು, ಗುರುಗಳು ಮುಂತಾದ ಪ್ರಾಚೀನ ಕಾಲದ ಶೈಕ್ಷಣಿಕ ಇತಿಹಾಸವನ್ನು ಅಧ್ಯಯನ ಮಾಡಲು ಸಹಾಯಕವಾಗಿವೆ.
4. ಭೂಮಿಯ ವಿವರ, ಭೂದಾನ, ಬೆಳೆಯ ಉಲ್ಲೇಖ, ತೆರಿಗೆ, ಆಗ ಪ್ರಚಲಿತವಿದ್ದ ನಾಣ್ಯಗಳು ಮುಂತಾದ ವಿವರಗಳು ಆರ್ಥಿಕ ಇತಿಹಾಸವನ್ನು ಅರಿಯಲು ಬಹಳ ಉಪಯುಕ್ತವಾಗಿವೆ. ವ್ಯಾಪಾರ, ವಾಣಿಜ್ಯ, ವ್ಯಾಪಾರಿ ಸಂಘಗಳು, ಅವರ ದಾನಗಳು ಅನೇಕ ಶಾಸನಗಳಲ್ಲಿ ಉಲ್ಲೇಖಿತವಾಗಿವೆ.
5. ಶಾಸನಗಳು ರಾಜರ ವಂಶಾವಳಿ, ರಾಜರ ಹೆಸರು, ಕಾಲಾನುಕ್ರಮ ಮುಂತಾದ ವಿಷಯಗಳ ಜೊತೆಗೆ ಸಪ್ತರ್ಷಿಶಕೆ, ವೀರನಿರ್ವಾಣ ಸಂವತ್ಸರ, ಬುದ್ಧ ನಿರ್ವಾಣ ಶಕೆ ಸೆಲ್ಯೂಕಿಡ್ ಶಕೆ, ಪಾರ್ಥಿಯನ್ಶಕೆ, ವಿಕ್ರಮ ಸಂವತ್, ಶಾಲಿವಾಹನ ಶಕೆ, ವಿಕ್ರಮ ಶಕೆ, ಹರ್ಷಶಕೆ, ಗುಪ್ತಶಕೆ, ಕಲಿಯುಗ ಮುಂತಾದವುಗಳ ಉಲ್ಲೇಖ ಕಾಲಗಣನಾ ಶಾಸ್ತ್ರದ ಅಧ್ಯಯನಕ್ಕೆ ಶಾಸನಗಳು ಅಮುಲ್ಯ ಆಕರಗಳಾಗಿವೆ.
6. ಶಾಸನಗಳಲ್ಲಿ ಉಲ್ಲೇಖಿತ ವಾಗಿರುವ ವ್ಯಕ್ತಿಗಳು, ಸಾಮಾಜಿಕ ಸ್ಥಾನಮಾನ, ಜಾತಿ, ಉಪ ವೃತ್ತಿಗಳು ಸಾಮಾಜಿಕ ಮೌಲ್ಯಗಳು ಮುಂತಾದ ಸಾಮಾಜಿಕ ಚಟುವಟಿಕೆಗಳ ಚಿತ್ರಣವನ್ನು ನೀಡುತ್ತವೆ. ಇದರಿಂದ ಸಾಂಸ್ಕೃತಿಕ ಚಟುವಟಿಕೆಗಳ ಅಧ್ಯಯನಕ್ಕೆ ಶಾಸನಗಳು ವಿವರವನ್ನೊದಗಿಸುತ್ತವೆ.
7. ಶಾಸನಗಳ ಅಧ್ಯಯನದಿಂದ ಲಿಪಿ, ಬಾಷೆ, ಉಗಮ, ಬೆಳವಣಿಗೆ, ವಿಕಾಸವನ್ನು ತಿಳಿಯಬಹುದು. ಶಾಸನಗಳು ಎಲ್ಲೆಲ್ಲಿ, ಯಾವ ಯಾವ ಕಾಲದಲ್ಲಿ ಯಾವ ಯಾವ ಲಿಪಿ, ಭಾಷೆಗಳಿದ್ದ ವೆಂದು ತಿಳಿಸುತ್ತವೆ. ಸಾಹಿತ್ಯ, ಕವಿಗಳು, ಸಾಹಿತ್ಯ ಪ್ರೋತ್ಸಾಹವನ್ನು ತಿಳಿಯಲು ಶಾಸನಗಳು ಸಹಾಯಕವಾಗಿವೆ.
8. ಎ. ವಿ. ಸ್ಮಿತ್ ರವರ ಪ್ರಕಾರ “ಶಿಲಾ ಶಾಸನಗಳು ನಂಬಲಾರ್ಹ ಆಧಾರಗಳಾಗಿವೆ. ಕಾರಣ ಅವುಗಳು ಬಹುಬೇಗ ನಾಶವಾಗದೇ ಉಳಿಯಬಲ್ಲವು ಮತ್ತು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ”.
ಹೀಗೆ ಶಾಸನಗಳು ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಆಡಳಿತ, ಭಾಷೆ, ಸಾಹಿತ್ಯ, ವಿದ್ಯೆ, ಧರ್ಮ, ಕಲೆ ಮುಂತಾದ ಇತಿಹಾಸವನ್ನು ಪುನರಚನೆಯಲ್ಲಿ ಮಹತ್ವದ ಪಾತ್ರ ವಹಿಸಿವೆ.
1 thought on “History Notes-02-Inscriptions | ಶಾಸನಗಳು, ಶಾಸನಗಳ ಮಹತ್ವ”