History: Cultural Contribution of Rastrakutas:ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆಗಳು ನೋಟ್ಸ್-03
History Cultural Contribution of Rastrakutas: ರಾಷ್ಟ್ರಕೂಟರು ರಾಜಕೀಯ ಸಾಧನೆ ಮತ್ತು ರಾಜ್ಯ ವಿಸ್ತರಣೆಗಳಲ್ಲಿ ಮಾತ್ರವಲ್ಲದೇ. ಸಾಹಿತ್ಯ, ಧರ್ಮ, ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿಯೂ ಪ್ರಗತಿಯನ್ನು ಸಾಧಿಸಿ ಇತಿಹಾಸ ದಲ್ಲಿ ಅಮರ ಸ್ಥಾನಗಳಿಸಿದ್ದಾರೆ.
ಸಾಹಿತ್ಯ: (Literature) :
ರಾಷ್ಟ್ರಕೂಟರ ಕಾಲವು ಸಾಹಿತ್ಯದ ವೈಭವ ಪೂರ್ಣ ಕಾಲವಾಗಿತ್ತು. ರಾಷ್ಟ್ರಕೂಟರು ಸಾಹಿತ್ಯಾಭಿಮಾನಿಗಳಾಗಿದ್ದರಿಂದ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯವು ಅಪಾರ ಬೆಳವಣಿಗೆ ಹೊಂದಿದ್ದವು. ದೊರೆಗಳು ಸ್ವತಃ ಸಾಹಿತಿಗಳಾಗಿದ್ದು ಅನೇಕ ಕೃತಿಗಳನ್ನು ರಚಿಸಿದರು. ಮತ್ತು ಅನೇಕ ಸಾಹಿತಿಗಳಿಗೆ ಆಶ್ರಯ ನೀಡಿದ್ದರು. ಕನ್ನಡದ ಮೊದಲ ಪ್ರಾಚೀನ ಕೃತಿಯಾದ ‘ಕವಿರಾಜ ಮಾರ್ಗ ಇವರ ಕಾಲದಲ್ಲಿಯೇ ರಚನೆಯಾಯಿತು. ದೊರೆಯಾದ ಅಮೋಘವರ್ಷನು ಸಂಸ್ಕೃತದಲ್ಲಿ ‘ ಪ್ರಶ್ನೋತ್ತರ ರತ್ನಮಾಲಿಕಾ’ ಎಂಬ ಕೃತಿಯನ್ನು ರಚಿಸಿದನು. ಆದಿ ಕವಿ ಪಂಪನು ಕನ್ನಡದಲ್ಲಿ ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’ ಎಂಬ ಕೃತಿಗಳನ್ನು ರಚಿಸಿದನು. ಮೂರನೇ ಕೃಷ್ಣನ ಆಸ್ಥಾನ ಕವಿಯಾದ ಪೊನ್ನನು ‘ಶಾಂತಿಪುರಾಣ ಮತ್ತು ‘ಶಾಂತಿನಾಥ ಚರಿತ್ರೆ’ ಎಂಬ ಕೃತಿಗಳನ್ನು ರಚಿಸಿದನು. ಇವರ ಕಾಲದ ಇತರೆ ಸಾಹಿತಿಗಳು ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ
ಧರ್ಮ ವ್ಯವಸ್ಥೆ: (Religious System)
ರಾಷ್ಟ್ರಕೂಟ ದೊರೆಗಳು ಧರ್ಮ ಸಹಿಷ್ಣುಗಳಾಗಿದ್ದು ವೈದಿಕ, ಜೈನ, ಬೌದ್ಧ, ಇಸ್ಲಾಂ ಧರ್ಮಗಳಿಗೆ ಆಶ್ರಯನೀಡಿ ಬೆಳವಣಿಗೆಗೆ ಕಾರಣರಾದರು. ಅಮೋಘವರ್ಷನು ಆರಂಭದಲ್ಲಿ ವೈದಿಕ ಮತಾನುಯಾಯಿ ಆಗಿದ್ದು, ನಂತರ ಜೈನ ಧರ್ಮ ಅನುಯಾಯಿಯಾದನು. ಇವನ ದಂಡನಾಯಕ ಬಂಕೇಶ ಮತ್ತು ಅವನ ಮಗ ಲೋಕಾದಿತ್ಯ ಜೈನರಾಗಿದ್ದರು. ಶ್ರೇಷ್ಠ ಕವಿಗಳಾದ ಪೊನ್ನ, ಪಂಪ, ಗುಣಚಂದ್ರ, ಜಿನಸೇನ, ವೀರಸೇನ, ಆಕಳಂಕದೇವ, ಸಮಂತ್ರಭದ್ರ ಮುಂತಾದವರು ಜೈನರಾಗಿದ್ದು, ಜೈನ ಗ್ರಂಥಗಳನ್ನು ರಚಿಸಿದರು.
ಅಮೋಘವರ್ಷನು ಜೈನ ಧರ್ಮದ ನಿಷ್ಠಾವಂತ ಅನುಯಾಯಿಯಾಗಿದ್ದರೂ, ಕೊಲ್ಲಾಪುರದ ಮಹಾಲಕ್ಷಿಯ ಆರಾಧಕ ನಾಗಿದ್ದನು. ಇವರ ಕಾಲದಲ್ಲಿ ಸೋಲ್ಲಾಪುರ ಜಿಲ್ಲೆಯ ಕಂಪಿಲ ಮತ್ತು ಗದಗ ಜಿಲ್ಲೆಯ ಡಂಬಳದಲ್ಲಿ ಬೌದ್ಧ ಮಠಗಳಿದ್ದವೆಂದು ತಿಳಿಯುತ್ತದೆ. ರಾಷ್ಟ್ರಕೂಟರು ಅರಬ್ಬರಿಗೆ ಪ್ರಾರ್ಥನಾ ಮಂದಿರ ಕಟ್ಟಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರೆಂದು ಆರಬ್ಬಪ್ರವಾಸಿ ಸುಲೇಮಾನ್ ತಿಳಿಸಿದ್ದಾನಲ್ಲದೇ ಅಮೋಘವರ್ಷನ ಧಾರ್ಮಿಕ ಸಹಿಷ್ಣುತೆಯನ್ನು ಮುಕ್ತ ಕಂಠದಿಂದ ಹೋಗಳಿದ್ದಾನೆ. ಇಸ್ಲಾಂ ಧರ್ಮ ಕೊಂಕಣದಲ್ಲಿ ಅಸ್ತಿತ್ವದಲ್ಲಿತ್ತು. ಆಲ್ಮಸೂದಿ ಹಾಗೂ ಸುಲೈಮಾನ್ರ ಪ್ರಕಾರ ‘ರಾಷ್ಟ್ರಕೂಟರು ಮುಸಲ್ಮಾನರನ್ನು ಗೌರವದಿಂದ ಕಾಣುತ್ತಿದ್ದರು. ಮಸೀದಿಗಳನ್ನು ಕಟ್ಟಲು ಅವಕಾಶ ಕಲ್ಪಿಸಿದ್ದರು.
ಕಲೆ ಮತ್ತು ವಾಸ್ತು ಶಿಲ್ಪ:(Art and Architecture)
ಕಲಾ ಪೋಷಕರಾದ ರಾಷ್ಟ್ರಕೂಟರು ಶಿಲ್ಪ ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಎಲ್ಲೋರ ಮತ್ತು ಎಲಿಫೆಂಟಾಗಳಲ್ಲಿ ಗುಹಾಂತರ ದೇವಾಲಯಗಳು ಮತ್ತು ಮೂರ್ತಿಶಿಲ್ಪಗಳು, ಜೋಗೇಘರ, ಮಂಡಪೇಶ್ವರ, ಶಿರುವಾಳದಲ್ಲಿನ ಕಲಾವಶೇಷಗಳು ರಾಷ್ಟ್ರಕೂಟರ ಅಮರ ಕಲಾ ಕೊಡುಗೆಗಳಾಗಿವೆ.
ಎಲ್ಲೋರ :
ಎಲ್ಲೋರ ರಾಷ್ಟ್ರಕೂಟರ ಒಂದು ವಿಶಿಷ್ಠ ಕಲಾ ಕೇಂದ್ರವಾಗಿದೆ. ರಾಷ್ಟ್ರಕೂಟರ ಕಲೆಯ ಶ್ರೇಷ್ಠತೆ, ಪ್ರಬುದ್ಧತೆ ಮತ್ತು ಅತ್ಯುನ್ನತ ಅಭಿವ್ಯಕ್ತಿಯನ್ನು ಇಲ್ಲಿ ಕಾಣಬಹುದು. ಈ ಕಾರಣಕ್ಕಾಗಿ ರಾಷ್ಟ್ರಕೂಟರು ಜಗತ್ಪಸಿದ್ಧಿ ಪಡೆಯಲು ಸಾಧ್ಯವಾಯಿತು. ಇಲ್ಲಿ ಮೂರು ಸಂಪ್ರದಾಯಗಳಿಗೆ ಸೇರಿದ 34 ಗುಹಾದೇವಾಲಯಗಳನ್ನು ಕಾಣಬಹುದು. ಅವುಗಳಲ್ಲಿ 18 ವೈದಿಕ ಸಂಪ್ರದಾಯಕ್ಕೂ, 12 ಬೌದ್ಧ ಸಂಪ್ರದಾಯಕ್ಕೂ, 4 ಜೈನ ಸಂಪ್ರದಾಯಕ್ಕೂ ಸೇರಿದವುಗಳಾಗಿವೆ. ಬೌದ್ಧ ಗುಹಾಲಯಗಳಲ್ಲಿ ‘ತೀನ್ತಾಲ್ ಅಥವಾ ತ್ರಿಸ್ಥಲ ಮತ್ತು ‘ವಿಶ್ವಕರ್ಮ ಇವು ಪ್ರಮುಖ ವಾಗಿವೆ. ವೈದಿಕ ಗುಹಾಲಯಗಳಲ್ಲಿ ದಶಾವತಾರ, ರಾಮೇಶ್ವರ, ರಾವಣ ಕಾಖಾಯ್, ಇಂದ್ರ ಸಭಾ, ಜಗನ್ನಾಥ ಸಭಾ, ಛೋಟಾ ಕೈಲಾಸ, ಧುಮರ್ಲೆನಾ ಗುಹಾಲಯಗಳು ಗಮನಾರ್ಹವಾಗಿವೆ.
ಕೈಲಾಸನಾಥ ದೇವಾಲಯ : ಭಾರತದ ಗುಹಾಂತರ ವಾಸ್ತುಶಿಲ್ಪಗಳಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು ಎಲ್ಲೋರಾದ ಕೈಲಾಸನಾಥ ದೇವಾಲಯ, ಜಗತೈಸಿದ್ದವಾದ ಈ ದೇವಾಲಯವನ್ನು ಕ್ರಿ.ಶ. 8ನೆಯ ಶತಮಾನದಲ್ಲಿ ಒಂದನೆಯ ಕೃಷ್ಣನ ಕಾಲದಲ್ಲಿ ‘ವಿಶ್ವಕರ್ಮ ಎಂಬ ಶಿಲ್ಪಿಯ ನೇತೃತ್ವದಲ್ಲಿ ನಿರ್ಮಿಸಲಾಗಿದೆ. 100 ಅಡಿ ಎತ್ತರದ ಅಖಂಡ ಬೃಹತ್ ಬಂಡೆಯನ್ನು ಕೊರೆದು ನಿರ್ಮಿಸ ಲಾಗಿದೆ. ಮಹಾದ್ವಾರ, ಪ್ರಕಾರ, ಶಿಖರ, ಕಲಶ, ಲಿಂಗ, ಕಂಚಗಳನ್ನು ಒಳಗೊಂಡ ಎರಡು ಅಂತಸ್ತಿನ ಬೃಹತ್ ಗುಹಾಲಯವಾಗಿದೆ.
276 ಅಡಿ ಉದ್ದ 145 ಅಡಿ ಅಗಲದಷ್ಟು ವಿಸ್ತಾರ ಹೊಂದಿದೆ. ದೇವಾಲಯವು ಮುಂದಿನ ಎರಡು ಅನೆಗಳಿಂದ ಎಳೆಯಲ್ಪಟ್ಟ ರಥದಂತಿದ್ದು, ಗರ್ಭಗೃಹ, ನಂದಿಮಂಟಪ, ಮಹಾದ್ವಾರ, ಚತುಶಾಲೆಗಳನ್ನು ಹೊಂದಿದೆ. ಈ ದೇವಾಲಯದ ಭಿತ್ತಿಭಾಗದಲ್ಲಿ ರಾವಣ ಕೈಲಾಸ ಪರ್ವತ ಎತ್ತುತ್ತಿರುವುದು, ಶಿವ ಪಾರ್ವತಿಯರ ಪಗಡೆಯಾಟ, ಗಿರಿಜಾ ಕಲ್ಯಾಣ, ನರ್ತಿಸುವ ಶಿವ, ಅಸುರ ಸಂಹಾರ ಶಿವ ಇತರೇ ರಾಮಾಯಣ ಮತ್ತು ಮಹಾಭಾರತದ ದೃಶ್ಯಾವಳಿಗಳು ಮನಮೋಹಕವಾಗಿದ್ದು, ದೇವಲೋಕವನ್ನು ದರ್ಶನ ಮಾಡಿಸಿದಂತಿದೆ. ಇಲ್ಲಿಯ ಶಾಸನವು ಇದು ಮಾನವ ಸೃಷ್ಟಿಯಲ್ಲ ಬ್ರಹ್ಮನ ಸೃಷ್ಟಿ’ ಎಂದು ಉಲ್ಲೇಖಿಸುತ್ತದೆ. ಪರ್ಶಿಬ್ರೌನ್ ಅವರು ‘ಭಾರತದ ಕಲಾ ವೈಭವದ ಒಂದು ಉತ್ತಮ ಉದಾಹರಣೆ ಎಂದು, ವಿ. ಎ. ಸ್ಮಿತ್ ರವರು ‘ಜಗತ್ತಿನ ಆಶ್ಚರ್ಯಗಳಲ್ಲಿ ಒಂದೆಂದು ಪ್ರಶಂಸನೆ ಮಾಡಿದ್ದಾರೆ. ‘
ದಶಾವತಾರ ಗುಹಾಲಯ :
ಎಲ್ಲೋರಾದಲ್ಲಿರುವ ಇದು ಅಖಂಡ ಶಿಲೆಯಲ್ಲಿ ನಿರ್ಮಿಸಲಾದ ಎರಡು ಅಂತಸ್ತಿನ ಗುಹಾಲಯ (15ನೇ ಗುಹೆ)ವಾಗಿದೆ. ಇಲ್ಲಿ ಶಿವತಾಂಡವ ನೃತ್ಯ, ವಿಷ್ಣುಲೀಲೆ, ಮಾರ್ಕಂಡೆಯ, ಪಾರ್ವತಿ ವರಹ, ಗರುಡ, ನಟರಾಜ ಮತ್ತು ಹಿರಣ್ಯಕಶ್ಯಪುವಿನ ಸಂಹಾರ ಮುಂತಾದ ಉಬ್ಬು ಭಿತ್ತಿ ಶಿಲ್ಪಗಳು ಅತ್ಯಂತ ಅದ್ಭುತ ಕಲಾಕೃತಿಗಳಾಗಿವೆ. ಈ ದೇವಾಲಯದ ಗೋಡೆಯ ಮೇಲೆ ದಂತಿದುರ್ಗನ ಶಾಸನವಿದ್ದು, ಅವನೇ ಇದನ್ನು ನಿರ್ಮಿಸಿದನೆಂದು ಹೇಳುತ್ತದೆ. ಇದರ ಮಂಟಪ 95 ಅಡಿ ಉದ್ದ 50 ಅಡಿ ಅಗಲವಾಗಿದ್ದು, 14 ಕಂಬಗಳನ್ನು ಹೊಂದಿದೆ.
ಎಲಿಫೆಂಟಾ :
ಇಲ್ಲಿ ರಾಷ್ಟ್ರಕೂಟ ಶಿಲ್ಪಕಲೆಯ ಪರಾಕಾಷ್ಠತೆಯನ್ನು ಕಾಣಬಹುದು. ಎಲಿಫಂಟಾ ಮುಂಬಯಿಂದ ಆರು ಮೈಲು ಅಂತರದಲ್ಲಿರುವ ಒಂದು ಚಿಕ್ಕ ದ್ವೀಪ. ಇದರ ಮೊದಲ ಹೆಸರು ಘರವಪುರಿ, ಪೋರ್ಚುಗೀಸರು ಇಲ್ಲಿಗೆ ಬಂದಿಳಿದಾಗ ಇಲ್ಲಿಯ ಬೃಹತ್ ಶಿಲಾ ಆನೆಗಳನ್ನು ಕಂಡು ‘ಎಲಿಫೆಂಟಾ ಎಂದು ಕರೆದರು. ಇಲ್ಲಿ ಏಳು ಗುಹಾಲಯಗಳಿವೆ. ಅರ್ಥನಾರೀಶ್ವರ, ತ್ರಿಮೂರ್ತಿ (ಮಹೇಶ), ಗಿರಿಜಾ ಕಲ್ಯಾಣ ಶಿಲ್ಪಗಳು ಶಿಲ್ಪಕಲಾಕ್ಷೇತ್ರಕ್ಕೆ ಮಹೋನ್ನತ ಕೊಡುಗೆಗಳಾಗಿವೆ. ತ್ರಿಮೂರ್ತಿ (ಮಹೇಶ) ವಿಗ್ರಹವು ಬೃಹದಾಕಾರವಾಗಿದ್ದು ಶಿವನನ್ನು ಸೃಷ್ಟಿ, ಸ್ಥಿತಿ, ಲಯ ಕಾರ್ಯಗಳನ್ನು ನಿರ್ವಹಿಸುವುದನ್ನು ಪ್ರತಿನಿಧಿಸುವ ರೂಪದಲ್ಲಿ ರಚಿಸಲಾಗಿದೆ.
ಮೂರ್ತಿಯು 23 ಅಡಿ ಎತ್ತರ, 20 ಅಡಿ ಅಗಲವಾಗಿದೆ. “ಈ ಸರ್ವಾತ್ಮನ ಮೂರು ಮುಖ ಮುದ್ರೆಗಳನ್ನು ಇಲ್ಲಿ ಸ್ವಲ್ಪವೂ ಶ್ರಮವಿಲ್ಲದೆ ಸಮರಗೊಳಿಸಲಾಗಿದೆ. ಇದರಷ್ಟು ಸಮಗ್ರವೂ, ಸುಸುಂಗತವೂ ಆದ ದೇವತಾತತ್ವದ ಮೂರ್ತಿಕರಣವು ಬಹು ಎರಳ’ ಎಂದು ರೆನೆಗೌಸ್ ಎಂಬ ಫ್ರೆಂಚ್ ವಿಮರ್ಶಕ ಅಭಿಪ್ರಾಯ ಪಟ್ಟಿದ್ದಾನೆ.
ಕರ್ನಾಟಕದಲ್ಲಿ ರಾಷ್ಟ್ರಕೂಟರ ಕಲಾವಶೇಷಗಳು ಶಿರವಾಳ (ಶ್ರೀವೊಳಲ), ಮಾವಳ್ಳಿ ಮಳಖೇಡ, ಕೊಣ್ಣೂರು, ಮುಧೋಳ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ಸನ್ನತಿ, ಸಂಡೂರು, ಗದಗ, ಲಕ್ಷ್ಮೀಶ್ವರ, ಸೂಡಿ, ಲಕ್ಕುಂಡಿ, ರೋಣ, ಕಳಸಾಪುರ ಮುಂತಾದ ಕಡೆಗಳಲ್ಲಿ ಕಂಡು ಬರುತ್ತವೆ. ಶಿರವಾಳ ಎಂಬಲ್ಲಿ ಸುಮಾರು 20 ದೇವಾಲಯಗಳು ಕಂಡು ಬಂದಿವೆ. ದೇವಾಲಯದ ಭಿತ್ತಿಯ ಮೇಲೆ ರಾಮಾಯಣ, ಮಹಾಭಾರತ ಮತ್ತು ಪಂಚತಂತ್ರ ಕತೆಗಳನ್ನು ನಿರೂಪಿಸುವ ಚಿತ್ರಗಳನ್ನು ಕೆತ್ತಲಾಗಿದೆ.