Article: ಕೃಷ್ಣ-ಕೌರವನ ಭೇಟಿ
1949ರಲ್ಲಿ ಭಾರತರತ್ನ ಎಸ್. ರಾಧಾಕೃಷ್ಣನ್ರವರು ಭಾರತದ ರಾಯಭಾರಿಯಾಗಿ ಸೋವಿಯೆಟ್ ರಷ್ಯಕ್ಕೆ ಹೋದರು. ಸಂಪೂರ್ಣ ಸಸ್ಯಾಹಾರಿಯೂ, ಸಂಪೂರ್ಣ ಪಾನವರ್ಜಿತರೂ, ಆದರ್ಶ ದಾರ್ಶನಿಕರೂ ಆದ ಈ ವಿದ್ವಾಂಸನನ್ನು ಸೋವಿಯೆಟ್ ರಷ್ಯದಂತಹ ಭೋಗಾಸಕ್ತರ ದೇಶಕ್ಕೆ ಕಳುಹಿಸುವುದು ಒಂದು ವಿಚಿತ್ರ ನಡವಳಿಕೆ ಎಂಬ ಭಾವನೆ ಭಾರತದಲ್ಲಿ ಅನೇಕರಲ್ಲಿತ್ತು. ಆದರೆ ಸೋವಿಯೆಟ್ ರಷ್ಯದ ಸರ್ಕಾರ ಹಾಗೂ ಜನ ಅವರನ್ನು ಬಹಳವಾಗಿ ಮೆಚ್ಚಿಕೊಂಡರು. ಒಬ್ಬ ವಿಶ್ವವಿಖ್ಯಾತ ದಾರ್ಶನಿಕ ತಮ್ಮ ದೇಶಕ್ಕೆ ರಾಯಭಾರಿಯಾಗಿ ಬಂದಿರುವುದು ಒಂದು ಹೆಮ್ಮೆಯ ವಿಷಯ ಎಂದು ಅವರು ಭಾವಿಸಿದರು.
ಆ ಸಮಯದಲ್ಲಿ ರಷ್ಯದ ಪ್ರಧಾನಿಯಾಗಿದ್ದವನು ಜೋಸೆಫ್ ಸ್ಟಾಲಿನ್. ಅವನು ಹೆಸರಿಗೆ ಪ್ರಧಾನಿಯೆಂದು ಕರೆದುಕೊಂಡರೂ, ನಿಜವಾಗಿ ಧೂರ್ತ ಸರ್ವಾಧಿಕಾರಿಯಾಗಿದ್ದ, ರಕ್ತಪಾತ, ಹಿಂಸೆ ಮತ್ತು ದಮನದ ಮೂಲಕ ಅಧಿಕಾರಕ್ಕೆ ಬಂದು, ಇಡೀ ದೇಶವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದು ಆಳುತ್ತಿದ್ದ. ಅವನೆಂದರೆ ಎಲ್ಲರಿಗೂ ಸಿಂಹಸ್ವಪ್ನ, ಅವನು ಸಾಮಾನ್ಯವಾಗಿ ವಿದೇಶಿ ರಾಯಭಾರಿಗಳನ್ನು ಭೇಟಿ ಮಾಡುತ್ತಿರಲಿಲ್ಲ. ರಷ್ಯ ದೇಶಕ್ಕೆ ಭಾರತದ ಪ್ರಥಮ ರಾಯಭಾರಿ ಹಾಗೂ ಜವಹರಲಾಲ ನೆಹರುರವರ ಸಹೋದರಿಯಾದ ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್ರವರನ್ನು ಭೇಟಿಮಾಡಲು ಅವನು ನಿರಾಕರಿಸಿದ್ದ. ಅಂತಹವನು, ರಾಯಭಾರಿ ರಾಧಾಕೃಷ್ಣನ್ರವರ ಆಗಮನ ಮತ್ತು ನಿರ್ಗಮನ ಎರಡು ಬಾರಿಯೂ ಸ್ವಇಚ್ಛೆಯಿಂದ ಕರೆಸಿಕೊಂಡು ಭೇಟಿ ಮಾಡಿದ. ರಾಧಾಕೃಷ್ಣನ್ರವರ ವರ್ಚಸ್ಸು, ವಿದ್ಯೆ, ಖ್ಯಾತಿ ಮತ್ತು ಮಾಂತ್ರಿಕ ಪ್ರಭಾವ ಅಷ್ಟು ಪರಿಣಾಮಕಾರಿಯಾಗಿತ್ತು.
ಆ ಎರಡು ಭೇಟಿಗಳು ನಡೆದದ್ದು ಹೀಗೆ :
1950ರ ಜನವರಿ 14ರಂದು ಸ್ಟಾಲಿನ್ರವರ ಕಾರ್ಯಾಲಯದಿಂದ ರಾಧಾಕೃಷ್ಣನ್ರವರಿಗೆ ಕೆಳಕಂಡ ದೂರವಾಣಿಯ ಸಂದೇಶ ಬಂದಿತು. “ನೀವು ಅಧಿಕಾರ ವಹಿಸಿಕೊಂಡ ತಕ್ಷಣ ಅಕ್ಟೋಬರ್-ನವೆಂಬರ್ನಲ್ಲಿ ಯುನೆಸ್ಕೋ ಸಭೆಗಳಲ್ಲಿ ಭಾಗವಹಿಸಲು ಹೊರಟುಹೋದಿರಿ, ಡಿಸೆಂಬರ್ನನಲ್ಲಿ ಮಾವೊತ್ಸೆ-ತುಂಗ್ ಬಂದರು. ಅದರಿಂದ ಸ್ಟಾಲಿನ್ರವರಿಗೆ ಬಿಡುವಿರಲಿಲ್ಲ. ಇಂದೇ ಅವರ ಪ್ರಥಮ ಬಿಡುವಿನ ದಿವಸ. ಅವರು ನಿಮ್ಮನ್ನು ಭೇಟಿ ಮಾಡಲು ಬಯಸುತ್ತಾರೆ”.
ರಾಧಾಕೃಷ್ಣನ್ರವರು ಅಲ್ಲಿಗೆ ಹೋದಾಗ ಸ್ಟಾಲಿನ್ರವರ ಜೊತೆಯಲ್ಲಿ ವಿದೇಶಾಂ ವಿದೇಶಾಂಗ ವ್ಯವಹಾರಗಳ ಮಂತ್ರಿ ವಿಷನ್ಸ್ಕಿ ಇದ್ದರು. ಮಿ॥ ಪವಲೊವ್ ದುಭಾಷಿಯಾಗಿದ್ದರು. ಸಂಭಾಷಣೆಯ ಸಮಯದಲ್ಲಿ ರಾಧಾಕೃಷ್ಣನ್ ಹೇಳಿದರು. “ನಮ್ಮಲ್ಲಿ ಅಶೋಕನೆಂಬ ಚಕ್ರವರ್ತಿ ಇದ್ದನು. ಅವನು ಒಂದು ಭೀಕರ ಮಾಡಿ ರಕ್ತಪಾತದ ಮೂಲಕ ಜಯವನ್ನು ಗಳಿಸಿದ ಮೇಲೆ ಯುದ್ಧವನ್ನೂ, ಹಿಂಸೆಯನ್ನೂ ತ್ಯಜಿಸಿ ಸನ್ಯಾಸಿಯಾದನು. ನೀವು ಸಹ ಬಲಪ್ರಯೋಗದ ಮೂಲಕ ಅಧಿಕಾರವನ್ನು ಗಳಿಸಿದ್ದೀರಿ ಮತ್ತು ನಡೆಸಿದ್ದೀರಿ. ಯಾರಿಗೆ ಗೊತ್ತು ? ನೀವೂ ಸಹ ಅಶೋಕನಂತೆ ಆಗಬಹುದು”. ಆಗ ಸ್ಟಾಲಿನ್ ನಕ್ಕು, “ಅಹುದು. ಪವಾಡಗಳು ಖಂಡಿತ ನಡೆಯುತ್ತವೆ. ನಾನು ಒಂದು ಧಾರ್ಮಿಕ ಶಿಕ್ಷಣ ಶಾಲೆಯಲ್ಲಿ ಐದು ವರ್ಷಗಳು ಇದ್ದೆ.” ಎಂದರು.
ರಾಧಾಕೃಷ್ಣನ್ರವರು ರಷ್ಯದಿಂದ ನಿರ್ಗಮಿಸುವಾಗ ಅವರ ಗೌರವಾರ್ಥ 1952ರ ಏಪ್ರಿಲ್ 5ರಂದು ವಿದೇಶಾಂಗ ವ್ಯವಹಾರಗಳ ಮಂತ್ರಿ ವಿಷಿನ್ಸ್ಕಿರವರು ಒಂದು ಔತಣಕೂಟವನ್ನು ಏರ್ಪಡಿಸಿದರು. ಅಂತಹ ಔತಣಕೂಟ ರಷ್ಯದಲ್ಲಿ ನಡೆದದ್ದು ಅದೇ ಪ್ರಥಮ ಬಾರಿ. ಅಷ್ಟರಮಟ್ಟಿಗಿತ್ತು. ರಾಧಾಕೃಷ್ಣನ್ರವರ ಪ್ರಭಾವ. ಔತಣಕೂಟದಲ್ಲಿ ವಿಷನ್ ಯವರು “ಯಜಮಾನರು ನಿಮ್ಮನ್ನು ಭೇಟಿ ಮಾಡಲು ಬಯಸುತ್ತಾರೆ” ಎಂದರು. ರಾಧಾಕೃಷ್ಣನ್ರವರು ರಷ್ಯಾದಿಂದ ಹೊರಡಲು ಕೇವಲ ಕೆಲವೇ ಗಂಟೆಗಳಿದ್ದವು. ಅದರಿಂದ ತಕ್ಷಣವೇ ಅವರಿಬ್ಬರ ಭೇಟಿ ಏರ್ಪಾಡಾಯಿತು. ಆ ಭೇಟಿಯಲ್ಲಿ ರಾಧಾಕೃಷ್ಣನ್ ಆತ್ಮೀಯವಾಗಿ ಸ್ಟಾಲಿನ್ರವರ ತಲೆ ಸವರಿದರು ಮತ್ತು ಬೆನ್ನು ತಟ್ಟಿದರು. ಆಗ ಸ್ಟಾಲಿನ್ “ನೀವೊಬ್ಬರೆ ನನ್ನನ್ನು ರಾಕ್ಷಸನಂತಲ್ಲದೆ ಮನುಷ್ಯನಂತೆ ನೋಡಿರುವುದು” ಎಂದರು. ಮಾತನ್ನು ಮುಂದುವರಿಸಿ, “ನೀವು ನಮ್ಮಿಂದ ಬೀಳ್ಕೊಂಡು ಹೋಗುತ್ತಿದ್ದೀರಿ. ಅದರಿಂದ ನನಗೆ ದುಃಖವಾಗಿದೆ. ನೀವು ಬಹಳ ಕಾಲ ಬದುಕಬೇಕೆಂಬುದು ನನ್ನ ಆಸೆ. ನಾನು ಹೆಚ್ಚು ಕಾಲ ಬದುಕಲಾರೆ” ಎಂದರು.
ಅಲ್ಲಿಂದ ವರ್ಷದೊಳಗೆ 1953ರ ಮಾರ್ಚ್ 5ರಂದು ಸ್ಟಾಲಿನ್ ಮೆದುಳಿನ ರಕ್ತಸ್ರಾವದಿಂದ ಗತಿಸಿದರು.