Article:ಬೆಸುಗೆಯ ಸಂಬಂಧಗಳ ಲೇಖನ-01
Article: ಬೆಸುಗೆಯ ಸಂಬಂಧಗಳು: ಜಗತ್ತಿನಲ್ಲಿ ಅಸಂಖ್ಯವಾದ ಸಜೀವ ವಸ್ತು ನಿರ್ಜೀವ ವಸ್ತುಗಳು ಇವೆ. ಇಲ್ಲಿರುವ ಪ್ರತಿ ವಸ್ತುಗಳು ಇನ್ನೊಂದು ವಸ್ತುವಿನಲ್ಲಿ ಸಂಬಂಧ ಇರುತ್ತವೆ. ಯಾವುದೇ ವಸ್ತು ತನ್ನಷ್ಟಕ್ಕೆ ತಾನು ಇರುವುದಿಲ್ಲ. ಜಗತ್ತಿನಲ್ಲಿ ವಸ್ತುಗಳು ಬಹಳ ಇರುವುದರಿಂದ ಒಂದು ವಸ್ತು ಇನ್ನೊಂದು ವಸ್ತುವಿನ ಸಂಬಂಧದಲ್ಲಿ ಇರಬೇಕಾಗುತ್ತದೆ. ಸಂಬಂಧರಹಿತ ವಸ್ತು ಅಸ್ತಿತ್ವದಲ್ಲಿರುವುದಿಲ್ಲ. ಒಂದು ಉದಾಹರಣೆ, ಒಂದು ಹೂ ಆಯ್ದುಕೊಳ್ಳುವಾಗ ಕೈಗೆ ಸಂಬಂಧ ಬೆಳೆಯುತ್ತದೆ. ಅಲ್ಲಿಂದ ದೇಹ, ನಿಂತಿರುವ ನೆಲ, ಭೂಮಿಯಿಂದ ಆಕಾಶ, ಹೀಗೆ ಸಂಬಂಧ ಇದ್ದೇ ಇರುತ್ತದೆ. ಅದೇ ಹೂ ಅಕಸ್ಮಾತ್ತಾಗಿ ಕೈಯಿಂದ ಜಾರಿದರೆ ನೆಲದೊಡನೆ ಸಂಬಂಧ ಇರುತ್ತದೆ. ಪ್ರತಿಯೊಂದು ವಸ್ತು ಸಂಬಂಧಿಕ ಸೂತ್ರದೊಳಗೆ ಬದ್ಧವಾಗಿರುತ್ತವೆ.
ಒಬ್ಬ ಮನುಷ್ಯನಿಗೆ ಎಷ್ಟೊಂದು ಸಂಬಂಧಗಳಿರುತ್ತವೆ. ತಾನು ವಾಸಿಸುವ ಕುಟುಂಬ, ಸಮಾಜ, ಪರಿಸರ ಅಲ್ಲದೆ ತಾನು ಉಪಯೋಗಿಸುವ ಜಡವಸ್ತುಗಳು ಇವುಗಳೊಂದಿಗೆ ಸಂದರ್ಭಾನುಸಾರವಾಗಿ ಕಾಲಕಾಲಕ್ಕೆ ಸಂಬಂಧ ಇರುತ್ತದೆ. ಕುಟುಂಬ ಸಂಬಂಧವಂತೂ ರಕ್ತಸಂಬಂಧ. ಈ ಎಲ್ಲ ತರಹದ ಸಂಬಂಧಗಳು ಮನುಷ್ಯನ ಜೀವನವನ್ನು ರೂಪಿಸುತ್ತವೆ. ಓರ್ವ ವ್ಯಕ್ತಿ (ಗಂಡು ಅಥವಾ ಹೆಣ್ಣು) ತಂದೆ-ತಾಯಿ, ಮಗ-ಮಗಳು, ಅಳಿಯ-ಸೊಸೆ, ಮಾವ-ಅತ್ತೆ ಅಲ್ಲದೆ ಗುರು-ಶಿಷ್ಯ ಆಗುತ್ತಾನೆ.(ಳೆ) ಈ ಸಂಬಂಧ ಬಿಡಲಾರದ್ದು. ಬರೀ ಮನುಷ್ಯ ಲೋಕವಲ್ಲ ದೇವಲೋಕಕ್ಕೆ ಹರಡಿದೆ. ಶಿವ, ವಿಷ್ಣು, ಬ್ರಹ್ಮ, ರಾಮ, ಕೃಷ್ಣ ಹೀಗೆ ದೇವರೊಂದಿಗಿನ ಸಂಬಂಧವನ್ನು ಮನುಷ್ಯರು ಕಲ್ಪಿಸಿಕೊಂಡಿದ್ದಾರೆ.
ಜನಪದ ಸಾಹಿತ್ಯದಲ್ಲಿ ‘ಸಂಬಂಧ’ಗಳ ಬಗ್ಗೆ ಬಹು ಪ್ರಾಮುಖ್ಯತೆ ಇದೆ. ಆಗಿನ ಕೂಡು ಕುಟುಂಬ ಪದ್ಧತಿ ಇದಕ್ಕೆ ಕಾರಣ. ಮಹಿಳೆಯರಿಗೆ ಜನ್ಮಜನ್ಮಾಂತರದ ಸಂಬಂಧವಾಗಿರುವ ತವರುಮನೆ, ತಾಯಿ-ಮಗು-ತಂದೆ, ಹೆಣ್ಣಿನ ಬದುಕಿನಲ್ಲಿ ಹಚ್ಚಹಸಿರಾಗಿರುವ ಸಂಬಂಧವಾಗಿದೆ. ಗರತಿಗೆ ತವರುಮನೆಯೆಂದರೆ ದೇವರ ಸ್ಥಾನಕ್ಕೆ ಸಮ. ತಾನು ಹುಟ್ಟಿ ಬೆಳೆದ ಊರು, ಆಡಿ ನಲಿದಾಡಿದ ತನ್ನ ಮನೆಯು ಗುಡಿಸಲು ಆದರೂ ಸರಿ, ನಕ್ಕು ನಲಿದು ಸ್ನೇಹಿತರೊಂದಿಗೆ ಒಡನಾಡಿದ ಊರು ಕೇರಿ, ಆಕೆಯ ಜೀವನದುದ್ದಕ್ಕೂ ನೆನಪಿನ ಬುತ್ತಿಯಾಗಿ ಇಟ್ಟುಕೊಂಡಿರುವಳು. ಜನ್ಮಕೊಟ್ಟ ತಾಯಿ-ತಂದೆ, ಒಡಹುಟ್ಟಿದ ಅಣ್ಣ, ತಮ್ಮ, ಅಕ್ಕ, ತಂಗಿ ತನ್ನ ಬದುಕಿನುದ್ದಕ್ಕೂ ಇರಬೇಕೆಂದು ಅವಳ ಬಯಕೆಯಾಗಿರುತ್ತದೆ.
“ಹಾಲುಂಡ ತವರೀಗಿ ಏನೆಂದು ಹಾಡಲಿ ಹೊಳೆದಂಡೆಯಲ್ಲಿರುವ ಕರಿಕಿಯ ಕುಡಿಯಂಗ ಹಬ್ಬಲಿ ಅವರ ರಸಬಳ್ಳಿ”ಎಂದು ಗರತಿ ಹಾರೈಸುತ್ತಾಳೆ.
ತಾಯಿಯನ್ನು ಕುರಿತು-
“ಬ್ಯಾಸಗಿ ದಿವಸಕ ಬೇವಿನ ಮರ ತಂಪ ಭೀಮಾರತಿಯೆಂಬ ಹೊಳಿ ತಂಪ। ಹಡದವ್ವ ನೀ ತಂಪ ನನ್ನ ತವರೀಗಿ” ಎಂದು “ಕಾಶಿಗಿ ಹೋಗಾದು ಏಸೊಂದು ದಿನ ಬೇಕು. ತಾಸ್ಹೊತ್ತಿನ ಹಾದಿ ತವರೂರ। ಮನಿಯಾಗ ಕಾಶಿ ಕುಂತಾಳ ಹಡದವ್ವ”ಎಂದು ತವರಿನ ಹಂಬಲ ವ್ಯಕ್ತಪಡಿಸುತ್ತಾಳೆ.
ತನ್ನ ಪತಿ ಮನೆಗೆ ತೆರಳುವಾಗ
“ತೊಟ್ಟಿಲು ಹೊತಕೊಂಡು ತವರಬಣ್ಣ ಉಟ್ಕೊಂಡು ಅಪ್ಪಕೊಟ್ಟೆಮ್ಮೆ ಹೊಡ್ಕೊಂಡು। ತವರೂರು। ತಿಟ್ಹೆತ್ತಿ ತಿರು ತಿರುಗಿ ನೋಡ್ಯಾಳ”
ಇವೆಲ್ಲಾ ಗರತಿಯ ಹೃದಯಾಂತರಾಳದಿಂದ ಬಂದ ನುಡಿಗಳು. ದಾಂಪತ್ಯ ಜೀವನದ ಆದರ್ಶತೆ ಎಂದರೆ, ಅವರವರ ಮನಸ್ಸುಗಳಹೃದಯಗಳ ಭಾವನೆಗಳ ಸಂತೃಪ್ತಿ. ಈಗ ಇಂಥ ಸಾಮರಸ್ಯವಿಲ್ಲದ, ಹಿಡಿತವಿಲ್ಲದ ದಾಂಪತ್ಯ, ವಿಷಮತೆ ವಿಚ್ಛೇದನಕ್ಕೆ ಕಾರಣವಾಗುವುದು.
ವಚನಕಾರರೆಲ್ಲ ಸಾಮಾಜಿಕ ಸಂಬಂಧದ ಬಗ್ಗೆ ಸಾಕಷ್ಟು ಬಗೆಯಲ್ಲಿ ತಿಳಿಸಿದ್ದಾರೆ. ಪ್ರಾಣಿಪಕ್ಷಿಗಳ ಜೀವನ ನೋಡಿ, ಕೂಡಿ ಬಾಳುವುದನ್ನು ಕಲಿಯಬೇಕು ಎಂದು ಅವರಿಗೆ ಅನಿಸಿತು. ಇರುವೆಗಳ ಗುಂಪು, ಜೇನು ಹುಳುಗಳು, ಪ್ರಾಣಿ ಪಕ್ಷಿಗಳ ಸಮುದಾಯ ಒಂದಾಗಿ ಸಂಬಂಧದಿಂದ ಬದುಕುತ್ತವೆ. ಅಲ್ಲಿ ಕಾಣುವ ಸಹಕಾರ, ಸಹೃದಯತೆ, ಸಾಮರಸ್ಯ ಭಾವನೆ ಮಾನವರಲ್ಲಿ ಏಕಿಲ್ಲ? ಸಮಾಜದಲ್ಲಿ ಒಬ್ಬ ವ್ಯಕ್ತಿಗೆ ಅನ್ವಯಿಸುವ ನೀತಿ ನಿಯಮಗಳು ಎಲ್ಲಾ ಜಾತಿ, ವೃತ್ತಿಯವರಿಗೆ ಅನ್ವಯಿಸುತ್ತವೆ. ಅದಕ್ಕೆ ಬಸವಣ್ಣನವರು ‘ಇವನಾರವ? ಎಂದೆನಿಸದೇ ‘ಇವ ನಮ್ಮವ’ ಎಂಬ ಆತ್ಮೀಯ ಭಾವ ಮೂಡಿಸಲು ಪ್ರಯತ್ನಿಸಿದರು. ಮಾನವೀಯ ಮೌಲ್ಯಗಳಿಂದ ಮಾನವ ಮಾನವರ ಸಂಬಂಧವನ್ನು ಬೆಳೆಸಲು ಪ್ರಯತ್ನಿಸಿದರು. ಜೀವನ ಎಂಬುದು ಪರಸ್ಪರ ನಂಬಿಕೆಯಿಂದ ಕೂಡಿದ್ದು. ಅದು ನಾಶವಾದರೆ ಮಾನವೀಯ ಸಂಬಂಧಗಳು ಉಳಿಯಲಾರವು, ಆಗ ಪ್ರೀತಿ, ವಿಶ್ವಾಸ, ಸಹಬಾಳ್ವೆಯ ಬದುಕು ದೂರವಾಗುತ್ತದೆ. ಅಸೂಯೆ, ವಂಚನೆ, ಸ್ವಾರ್ಥಭಾವ, ನೋವು, ದುಃಖ ಆವರಿಸುತ್ತವೆ. ನಂಬಿಕೆ ಕುಸಿದು ಜೀವನ ಅಭದ್ರವಾಗುತ್ತದೆ.
“ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲುಬಹುದೆ?
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ ನಾರಿ ತನ್ನ ಮನೆಯಲಿ ಕಳುವಡೆ ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆನಯ್ಯಾ ಕೂಡಲಸಂಗಮದೇವ”
ಈಗ ಈ ವಚನದ ಪ್ರಸ್ತುತತೆಯನ್ನು ವಿಚಾರ ಮಾಡಿದರೆ ಈಗ ನಾವು ನಿಂತ ನೆಲವೂ ಉರಿಯುತ್ತಿದೆ. ಹಿಂಸೆ, ಕ್ರೌರ್ಯ, ಅಸಹನೆ, ಡಾಂಭಿಕತೆ, ಭಯೋತ್ಪಾದನೆ, ಉಗ್ರವಾದಿತನ, ಅವೈಚಾರಿಕತೆ, ಮೂಢನಂಬಿಕೆ ನಿತ್ಯದ ಬದುಕನ್ನು ಆವರಿಸಿ ಮನೆಯೊಳಗೂ ಕಿಚ್ಚು ಉಂಟಾಗಿ ರಕ್ತ ಸಂಬಂಧಗಳು ಬೇರ್ಪಡೆ ಆಗುವುದಲ್ಲದೆ ಒಮ್ಮೊಮ್ಮೆ ಹಿಂಸೆಗೆ ತಿರುಗುವುದುಂಟು. ಮಾನವೀಯತೆ, ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಲಿವೆ.
ಇಂಥ ಸಂದರ್ಭಗಳಲ್ಲಿ ಸಾಮಾಜಿಕ ನೆಮ್ಮದಿ ಉಂಟಾಗಬೇಕಾದರೆ ಪುನಃ ಸಂಬಂಧಗಳು ಬಲಗೊಳ್ಳಬೇಕು, ಅದಕ್ಕೆ
“ಒಬ್ಬರ ಮನವ ನೋಯಿಸಿ; ಒಬ್ಬರ ಮನೆಯ ಘಾತವ ಮಾಡಿ ಗಂಗೆಯ ಮುಳುಗಿದಡೇನಾಗುವುದಯ್ಯಾ ಚಂದ್ರನು ಗಂಗೆಯ ತಡೆಯಲಿದ್ದಡೇನು? ಕಳಂಕ ಬಿಡದಾಯಿತ್ತಯ್ಯಾ। ಆದು ಕಾರಣ ಮನವ ನೋಯಿಸದವನೆ ಒಬ್ಬರ ಘಾತವ ಮಾಡದವನೆ ಪರಮ ಪಾವನ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನ”
ಎಂದಂತೆನಮ್ಮ ಸಹಜೀವಿಗಳೊಡನೆ ಸೌಹಾರ್ದಯುತ ಸಂಬಂಧ ಹೊಂದುವುದು ಮುಖ್ಯ. ಆದರೆ….ಸಂಬಂಧಗಳು ಬಹಳ ವಿಚಿತ್ರವಾಗಿರುತ್ತವೆ, ಸರಳವಾಗಿರುತ್ತವೆ, ಸಂಕೀರ್ಣವಾಗಿರುತ್ತವೆ. ಕೆಲವು ಸಂಬಂಧಗಳು ಸಂತೋಷ ಜೊತೆಗೆ ದುಃಖವನ್ನು ತಂದೊಡ್ಡಬಹುದು. ಈ ಸಂಬಂಧಗಳಿಂದ ಸುಖ-ದುಃಖ, ನೆಮ್ಮದಿ-ನೋವು, ವ್ಯಥೆ-ಕಥೆ ಹೊಂದಬಹುದು. ಹೊಂದಾಣಿಕೆ ಎಂಬುದು ಸಂಬಂಧದಲ್ಲಿ ಮುಖ್ಯ. ಗುರು-ಶಿಷ್ಯ ಪರಂಪರೆಯಲ್ಲಿ ಪರಮಹಂಸರಂಥ ಗುರುಗಳಿಂದ ವಿವೇಕಾನಂದರು ವಿಶ್ವವಿಖ್ಯಾತರಾದರು. ವಿವೇಕಾನಂದರಂಥ ಶಿಷ್ಯರು ಗುರುವನ್ನು ಪ್ರಖ್ಯಾತಗೊಳಿಸಿದರು. ಗುರು ಗೋವಿಂದಭಟ್ಟ ಮತ್ತು ಶಿಶುನಾಳ ಶರೀಫಸಾಹೇಬರ ಸಂಬಂಧ ಹಾಲು ಜೇನು ಬೆರೆಸಿದಂತಹದು.
ಇಂದಿನ ದಿನಗಳಲ್ಲಿ ಸಂಬಂಧಗಳು ಕೃತಕವಾಗುತ್ತಲಿವೆ.
ಗಂಡ-ಹೆಂಡತಿ, ತಂದೆ-ಮಕ್ಕಳು, ಗುರು-ಶಿಷ್ಯರು, ಅಣ್ಣ-ತಮ್ಮ ಹೀಗೆ ಪ್ರತಿಯೊಬ್ಬರಲ್ಲಿಯೂ ಸಂಬಂಧಗಳ ತಂತಿಯಿಂದ ಅಪಸ್ವರದ ನಾದ ಹೊರಡುತ್ತದೆ. ತಂದೆ-ಮಗನಿಗೆ ಮಗ-ತಂದೆಗೆ ಕಿರುಕುಳ ಕೊಡುವುದು. ಗಂಡ-ಹೆಂಡತಿ ನಡುವೆ ವೈಷಮ್ಯ, ಅನುಮಾನ, ಕಚೇರಿಯಲ್ಲಿ ನೌಕರರಿಗೆ ಕಿರುಕುಳ ಯಾತನೆ ಕೊಡುವುದು. ಸ್ನೇಹದಲ್ಲಿ ಹೊಟ್ಟೆಕಿಚ್ಚು ಹೊಂದುವುದು ಇವೆಲ್ಲಾ ಈಗ ನಡೆಯುತ್ತಿರುವ ಕೆಲ ಪ್ರಸಂಗಗಳು. ಕೆಲವು ಸೂಕ್ಷ್ಮವಾಗಿದ್ದು, ಅನ್ನುವ ಹಾಗಿಲ್ಲ ಅನುಭವಿಸುವ ಹಾಗಿಲ್ಲ ಅಂದರೆ, ಕೆಲವರು ಮುಖವಾಡ ಧರಿಸಿ ಒಳಗೆ ಹಿಂಸೆ ಕೊಡುವವರನ್ನು ಅವರು ಅಂಥವರೆಂದು ಹೇಳಿದರೂ ಯಾರೂ ನಂಬುವುದಿಲ್ಲ. ಸಂಬಂಧಗಳ ಕೊಂಡಿಯಂತಿದ್ದ ಕೂಡುಕುಟುಂಬಗಳು ಈಗ ಕಡಿಮೆ. ಹಾಗೆ ಒಂಟಿ ಕುಟುಂಬಗಳು ಆಗುತ್ತಿವೆ. ಪೇಟೆ-ಪಟ್ಟಣಗಳ ಮೇಲಿನ ವ್ಯಾಮೋಹದಿಂದ ಹಳ್ಳಿಗಳು ಬರಿದಾಗುತ್ತಿದ್ದು, ವಿದೇಶಿ ಸಂಸ್ಕೃತಿ ಢಾಳಾಗಿ ಪ್ರದರ್ಶಿತವಾಗಿ ಅದರ ಆಕರ್ಷಣೆಗೆ ಒಳಗಾಗಿ, ಅನುಕರಿಸಿ ‘ನಮ್ಮತನ’ದ ಸಂಬಂಧ ಕಣ್ಮರೆಯಾಗುತ್ತಿರುವುದನ್ನು ಕಾಣಬಹುದಾಗಿದೆ.
ಇತ್ತಿತ್ತಲಾಗಿ ಜಾತಿಯೆಂಬ ಭ್ರಾಂತಿ ಎಲ್ಲೆಡೆಗೂ ವ್ಯಾಪಿಸಿದೆ. ಜಾತಿ ಎಂಬ ಕಟ್ಟುಪಾಡಿಗೆ ಒಳಗಾಗಿ, ತನ್ನ ಜಾತಿ ಶ್ರೇಷ್ಠ, ಅದಕ್ಕೆ ಒಂದು ಸಂಘ, ರಾಜಕೀಯದಲ್ಲಿ ಮೀಸಲಾತಿ ಮಾಡಿಕೊಳ್ಳುತ್ತಿದ್ದಾರೆ. ಹೀಗೆಲ್ಲ ಪ್ರತ್ಯೇಕತಾ ಭಾವನೆಯಿಂದ ಮಾನವೀಯ ಸಂಬಂಧಗಳು ಕಡಿದುಕೊಳ್ಳುತ್ತಲಿವೆ. ಸ್ವಜಾತಿಯಿಂದ ಸ್ವಜನಪಕ್ಷಪಾತವೂ ಎಲ್ಲ ರಂಗಗಳಲ್ಲಿ ನಡೆಯುತ್ತಲಿವೆ. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನ ಮಾತು ಹೇಳಿಕೆಗೆ ಸೀಮಿತವಾಗಿದೆ. ಜಾತಿ ಪ್ರೀತಿಯಿಂದ ಮಾನವ ಪ್ರೀತಿಯತ್ತ ಬರುವುದು ಎಲ್ಲರ ಮುಂದಾಗುವ ಸವಾಲು. ಜಾತಿಯ ಒಳಗಿದ್ದುಕೊಂಡೂ ಅದನ್ನು ಮೀರುವ ವಿಶ್ವ ಮಾನವ ಕಲ್ಪನೆ ಸಮಾಜದ ಅನಿಷ್ಟಗಳನ್ನು ತೊಡೆದುಹಾಕಲು ಬಸವಣ್ಣ ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡರು ಇಂಥ ಸಂಬಂಧ ಅವಶ್ಯ.
ಇಂದು ಮನುಷ್ಯ ಹೆಚ್ಚು ಹೆಚ್ಚು ಸ್ವಾರ್ಥಿಯಾಗುತ್ತಿರುವುದರಿಂದ ಆಶೆಯ ದಾಸ, ಕೀರ್ತಿಯ ಗುಲಾಮ, ಅಧಿಕಾರದ ದಾಹ, ಇವುಗಳಿಂದ ಎಲ್ಲ ಮಾನವೀಯ ಸಂಬಂಧಗಳನ್ನು ಕ್ಷುಲ್ಲಕವಾಗಿ ಕಾಣುತ್ತಿದ್ದಾನೆ. ಹೀಗಾಗಿ ಸಂಬಂಧಗಳ ತಂತಿ ಹರಿಯುತ್ತಲಿದೆ. ಅಲ್ಲಮಪ್ರಭುಗಳ ನುಡಿದಂತೆ “ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ ಭ್ರಾಂತಿಯ ಬೇರನ್ನು ಅಗೆದು ತೆಗೆಯಬೇಕು” ಮಾನವೀಯ ನೆಲೆಯಲ್ಲಿ ವರ್ತಿಸುವ ಹೃದಯವಂತಿಕೆಯನ್ನು ರೂಢಿಸಿಕೊಂಡಾಗ ಸಂಬಂಧಗಳು ಬೆಸೆಯುತ್ತವೆ.