Article-01 ಆಪತ್ಬಾಂಧವ ನಮ್ಮ ಭಾರತ
Article ಆಪತ್ಬಾಂಧವ ನಮ್ಮ ಭಾರತ ನೈಸರ್ಗಿಕ ವಿಪತ್ತುಗಳಿಂದ ಕಂಗೆಟ್ಟ ರಾಷ್ಟ್ರಗಳಿಗೆ ಭಾರತವು ಹಲವಾರು ವರ್ಷಗಳಿಂದ ಮಾನವೀಯ ನೆರವು ನೀಡುತ್ತಾ ಬಂದಿದೆ. ವಿಶೇಷವಾಗಿ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಗಳು ಭೂಕಂಪ, ಪ್ರವಾಹ, ಚಂಡಮಾರುತದಿಂದ ತತ್ತರಿಸಿದ ದೇಶಗಳಿಗೆ ಸಹಾಯ ಮಾಡುವ ಮೂಲಕ ಜಾಗತಿಕ ಸಮುದಾಯದಲ್ಲಿ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದೆ. ವಸುಧೈವ ಕುಟುಂಬಕಂ (ವಿಶ್ವವೇ ಕುಟುಂಬ) ಎಂಬ ತತ್ತ್ವವನ್ನು ಸಾರುವ ಭಾರತದ ಕೆಲವು ಯಶಸ್ವಿಕಾರ್ಯಾಚರಣೆಗಳ ಪಟ್ಟಿ ಇಲ್ಲಿವೆ.
ಅಪರೇಷನ್ ಬ್ರಹ್ಮ:
ಮ್ಯಾನ್ಮಾರ್ನಲ್ಲಿ 2025 ಮಾರ್ಚ್ 29ರಂದು ಸಂಭವಿಸಿದ 7.7 ತೀವ್ರತೆಯ ಭೂಕಂಪಕ್ಕೆ ಸ್ಪಂದನೆಯಾಗಿ ಆರಂಭಿಸಿದ ಭಾರತದ ಕಾರ್ಯಾಚರಣೆ ಇದು. ಭಾರತ ಸರಕಾರವು 80 ಸದಸ್ಯರ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತಂಡವನ್ನು ನಿಯೋಜಿಸುವುದರೊಂದಿಗೆ ‘ಆಪರೇಷನ್ ಬ್ರಹ್ಮ’ವನ್ನು ನಡೆಸಿದೆ. ಮ್ಯಾನ್ಮಾರ್ನ ರಾಜಧಾನಿ ನೇಪಿಡಾವನ್ನು ತಲುಪಿದ ಮೊದಲ ವಿದೇಶಿ ರಕ್ಷಣಾ ತುಕಡಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ತುರ್ತು ಶಸ್ತ್ರಚಿಕಿತ್ಸೆಗಳು, ಅಗತ್ಯ ವೈದ್ಯಕೀಯ ಸೇವೆಗಳು, ಬಟ್ಟೆಗಳು, ಆಹಾರ ಪೊಟ್ಟಣಗಳು, ನೈರ್ಮಲ್ಯ ಕಿಟ್ಗಳನ್ನು ಒಳಗೊಂಡಂತೆ 400 ಟನ್ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿಗಳನ್ನು ಭಾರತವು ಮ್ಯಾನ್ಮಾರ್ ಕಳುಹಿಸಿದೆ. ಐಎಎನ್ಎಸ್ ಘರಿಯಾಲ್, ಐಎನ್ಎಸ್ ಸತ್ಪುರ ಮತ್ತು ಐಎನ್ಎಸ್ ಸಾವಿತ್ರಿ ಸೇರಿದಂತೆ ಭಾರತೀಯ ನೌಕಾಪಡೆಯ ಯುದ್ಧನೌಕೆಗಳು ಈ ಸಂದರ್ಭದಲ್ಲಿ ಗಣನೀಯ ಸೇವೆ ಒದಗಿಸಿವೆ.
ಅಪರೇಷನ್ ಸದ್ಭವ:
ಮ್ಯಾನ್ಮಾರ್, ಲಾವೋಸ್ ಮತ್ತು ವಿಯೆಟ್ನಾಂನಲ್ಲಿ ಸೆಪ್ಟೆಂಬರ್ 2024ರಂದು ಸಂಭವಿಸಿದ “ಟೈಫೂನ್” ಯಾಗಿ’ಯಿಂದ ಉಂಟಾದ ಪ್ರವಾಹಕ್ಕೆ ತುರ್ತು ಮಾನವೀಯ ನೆರವು ನೀಡಲು ಆಪರೇಷನ್ ಸದ್ಭವ ನಡೆಸಲಾಯಿತು. ಈ ಕಾರ್ಯಾಚರಣೆಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಲವಾರು ಜೀವಗಳನ್ನು ರಕ್ಷಿಸಲು ಸಹಾಯ ಮಾಡಿತು. ಭಾರತದ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ಮತ್ತು ಈ ಮೂರು ದೇಶಗಳ ಜನರಿಗೆ ಆಹಾರ, ಔಷಧಿ, ಶುದ್ಧ ಕುಡಿಯುವ ನೀರು ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡುವಲ್ಲಿ ಯಶಸ್ವಿಯಾದವು.
ಆಪರೇಷನ್ ದೋಸ್ತ್:
ಟರ್ಕಿ ಮತ್ತು ಸಿರಿಯಾದಲ್ಲಿ 2023 ಫೆಬ್ರವರಿ 6ರಂದು ಸಂಭವಿಸಿದ ಭೀಕರ ಭೂಕಂಪದ ಹಿನ್ನೆಲೆಯಲ್ಲಿ ‘ಆಪರೇಷನ್ ದೋಸ್ತ್’ ಹೆಸರಿನ ನೆರವಿನ ಕಾರ್ಯಾಚರಣೆ ಕೈಗೊಳ್ಳಲಾಯಿತು. NDRF ತಂಡಗಳು, ವೈದ್ಯಕೀಯ ತಂಡಗಳು, ಹುಡುಕಾಟ ಮತ್ತು ರಕ್ಷಣಾ ಉಪಕರಣಗಳು, ತುರ್ತು ವೈದ್ಯಕೀಯ ಸೇವೆಗಳು, ಔಷಧಿಗಳು ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಒಳಗೊಂಡ ವಿಶೇಷ ವಿಮಾನಗಳು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದವು. ಭಾರತೀಯ ತಂಡಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ ಜನರನ್ನು ರಕ್ಷಿಸುವ ಜತೆಗೆ ಪರಿಹಾರ ಸಾಮಗ್ರಿಗಳು, ಅಗತ್ಯ ಆಸ್ಪತ್ರೆಗಳನ್ನು ಸ್ಥಾಪಿಸಿ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಿದವು. ಅಂತಾರಾಷ್ಟ್ರೀಯ ಸಮುದಾಯದಿಂದ ಈ ಮಾನವೀಯ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
ಆಪರೇಷನ್ ಕರುಣಾ:
2023ರ ಮೇ 18ರಲ್ಲಿ ಸೈಕ್ಲೋನ್ ‘ಮೋಚಾ’ ಅಪ್ಪಳಿಸಿದ ಸಮಯದಲ್ಲಿ ಮ್ಯಾನ್ಮಾರ್ ಸಹಾಯ ಮಾಡಲು ಭಾರತವು ಆಪರೇಷನ್ ಕರುಣಾ ಕಾರ್ಯಾಚರಣೆ ನಡೆಸಿತು. ಮ್ಯಾನ್ಮಾರ್ನ ರಖೈನ್ ರಾಜ್ಯದಲ್ಲಿ ಸೈಕ್ಲೋನ್ ತೀವ್ರ ಹಾನಿಯನ್ನುಂಟು ಮಾಡಿತ್ತು. ಮ್ಯಾನ್ಮಾರ್ನ ಸಿಟ್ಟೆ ಬಂದರಿನ ಮೂಲಕ ಭಾರತೀಯ ನೌಕಾಪಡೆಯ ಹಡಗುಗಳು ಆಹಾರ, ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒಳಗೊಂಡ ಪರಿಹಾರ ಸಾಮಗ್ರಿಗಳನ್ನು ಒದಗಿಸಿದವು. ಭಾರತ ಮತ್ತು ಮ್ಯಾನ್ಮಾರ್ನ ನಡುವಿನ ಸ್ನೇಹಪರ ಸಂಬಂಧವನ್ನು ಬಲಪಡಿಸುವಲ್ಲಿ ‘ಆಪರೇಷನ್ ಕರುಣಾ’ ನೆರವಾಯಿತು. ಭಾರತೀಯ ನೌಕಾಪಡೆ ಮತ್ತು ಇತರ ಸರಕಾರಿ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಪರಿಹಾರ ಕಾರ್ಯಾಚರಣೆಯನ್ನು ನಡೆಸಿದವು.
ಆಪರೇಷನ್ ಮೈತ್ರಿ:
ಭಾರತ ಸರಕಾರವು ರೂಪಿಸಿದ ಆಪರೇಷನ್ ಮೈತ್ರಿಯು’ 2015ರ ಏಪ್ರಿಲ್ 26ರಲ್ಲಿ ನೇಪಾಳದ ಭೂಕಂಪ ಸಂತ್ರಸ್ತರಿಗೆ ನೆರವಾಗಿ ನಿಂತಿತು. ಭಾರತೀಯ ಸೇನೆ, ವಾಯುಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಹೆಲಿಕಾಪ್ಟರ್ಗಳ ಮೂಲಕ ದುರ್ಗಮ ಪ್ರದೇಶಗಳಲ್ಲಿ ಸಿಲುಕಿದ ಜನರನ್ನು ರಕ್ಷಿಸಿ, ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲಾಯಿತು. ತುರ್ತು ಆಶ್ರಯ ಗೃಹಗಳನ್ನು ನಿರ್ಮಿಸಿ ನಿರಾಶ್ರಿತರಿಗೆ ತಾತ್ಕಾಲಿಕ ವಾಸಸ್ಥಾನ ಒದಗಿಸಲಾಯಿತು. ಭಾರತ ಮತ್ತು ನೇಪಾಳದ ನಡುವಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ನೇಪಾಳದ ಪುನರ್ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿತು.
ನನ್ನ ಭಾರತ ಶ್ರೇಷ್ಠ ಭಾರತ